ಬೆಂಗಳೂರು: ದೇವಸ್ಥಾನಕ್ಕೆ ಮಾಂಸ ತಿಂದು ಹೋದರೆ ತಪ್ಪೇನು? ಸ್ವಚ್ಛ ಮನಸ್ಸು ಮುಖ್ಯವೇ ಹೊರತು ಏನು ತಿನ್ನುತ್ತಾರೆ ಅನ್ನುವುದು ಅಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ಫೆಬ್ರವರಿ 17 ರಂದು ಯಲಹಂಕದ ಬಳಿ ನಡೆಯುವ ವಿಕಾಸ ಪರ್ವ ಯಾತ್ರೆ ವೇದಿಕೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನಡೆಸಿ ಮಾತನಾಡಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕೋಳಿ ತಿಂದು ದೇವಸ್ಥಾನಕ್ಕೆ ಹೋಗಿದ್ದಾರೆ ಎನ್ನುವ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಆರೋಪಕ್ಕೆ ಪ್ರತಿಕ್ರಿಯೆ ನೀಡಿದರು.
ರಾಹುಲ್ ಅವರು ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ಹೋಗುವುದರಲ್ಲಿ ತಪ್ಪೇನಿದೆ. ಕೆಲವು ದೇವರಿಗೆ ಮಾಂಸವೇ ಪ್ರಿಯ. ದೇಹವೇ ಮಾಂಸದ ಮುದ್ದೆ. ಮನಸ್ಸು ಶುದ್ಧ ಇಲ್ಲ ಎಂದರೆ ದೇವಸ್ಥಾನಕ್ಕೆ ಹೋಗಿ ಏನು ಪ್ರಯೋಜನ? ಈ ವಿಚಾರಕ್ಕೆ ನಾನು ಹೆಚ್ಚಿನ ಪ್ರಾಮುಖ್ಯತೆ ನೀಡುವುದಿಲ್ಲ ಎಂದು ಹೇಳಿದರು.
ಇದೇ ವೇಳೆ ನಾವು ಅಧಿಕಾರಕ್ಕೆ ಬಂದರೆ ಒಬ್ಬ ದಲಿತ ಹಾಗೂ ಒಬ್ಬ ಮುಸ್ಲಿಂ ನಾಯಕರನ್ನ ಉಪ ಮುಖ್ಯಮಂತ್ರಿ ಮಾಡುವುದಾಗಿ ತಿಳಿಸಿದರು. ಇದಲ್ಲದೆ ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ರೈತರ ಸಾಲಮನ್ನಾ ಮಾಡುತ್ತೇವೆ. ಮತ್ತೆ ಸಾಲ ಮಾಡದ ಹಾಗೇ ರೈತರಿಗೆ ಸಹಾಯ ಮಾಡುತ್ತೇವೆ ಎಂದರು.
ಬೆಂಗಳೂರಿನಲ್ಲಿ ಸಮಾವೇಶ ಮಾಡಿದರೆ ಜನರಿಗೆ ಸಮಸ್ಯೆಯಾಗುವ ಕಾರಣ ನಗರದ ಹೊರವಲಯದಲ್ಲಿ ಸಮಾವೇಶ ಮಾಡುತ್ತಿದ್ದೇವೆ. ಪ್ರಧಾನಿ ಮೋದಿ, ರಾಹುಲ್ ಗಾಂಧಿ ಬಂದಿದ್ದಾರೆ ಎಂದು ಸಮಾವೇಶ ಮಾಡುತ್ತಿಲ್ಲ. ಪಕ್ಷ ಅಧಿಕಾರಕ್ಕೆ ತರಲು ಸಮಾವೇಶ ಮಾಡುತ್ತಿದ್ದು ಸ್ವತಂತ್ರ ಬಲದಲ್ಲಿ ರಾಜ್ಯದಲ್ಲಿ ಮತ್ತೆ ಜೆಡಿಎಸ್ ಅಧಿಕಾರಕ್ಕೆ ಬರುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.