ಮಂಗ್ಳೂರು ಕಮಿಷನರ್ ಇವತ್ತು ಎಲ್ಲಾದ್ರೂ ಬಾಂಬ್ ಹಾಕ್ಸಿದ್ರಾ?- ಎಚ್‍ಡಿಕೆ ವಿವಾದಾತ್ಮಕ ಹೇಳಿಕೆ

Public TV
1 Min Read

ಚಿಕ್ಕಮಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಕುಮಾರಸ್ವಾಮಿ ಅವರು, ಮಂಗಳೂರು ಕಮಿಷನರ್ ಇವತ್ತು ಎಲ್ಲಾದ್ರೂ ಬಾಂಬ್ ಹಾಕ್ಸಿದ್ರಾ ಎಂದು ವ್ಯಂಗ್ಯವಾಗಿ ಪ್ರಶ್ನೆ ಮಾಡಿದ್ದಾರೆ.

ಜಿಲ್ಲೆಯ ಶೃಂಗೇರಿಗೆ ನಿನ್ನೆಯೇ ಭೇಟಿ ನೀಡಿದ್ದ ಎಚ್‍ಡಿ ಕುಮಾರಸ್ವಾಮಿ ಅವರ ಕುಟುಂಬದಿಂದ ನಡೆಯುತ್ತಿದ್ದ ವಿಶೇಷ ಯಾಗದಲ್ಲಿ ಭಾಗಿಯಾಗಿ ಬಳಿಕ ಮಂಗಳೂರಿಗೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಮಾಧ್ಯಮಗಳಿಗೆ ಪ್ರಶ್ನೆ ಮಾಡಿದ ಎಚ್‍ಡಿಕೆ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ಬಳಿಕ ಸಮಾಜದಲ್ಲಿ ಶಾಂತಿ ಕದಡುವ ಪ್ರಯತ್ನ ನಡೆಸಲಾಗುತ್ತಿದೆ. ನಾನು ಕೂಡ 14 ತಿಂಗಳು ಸಿಎಂ ಆಗಿದ್ದ ಸಂದರ್ಭದಲ್ಲಿ ಮಂಗಳೂರಿನಲ್ಲಿ ಇಂತಹ ಯಾವುದೇ ಘಟನೆ ನಡೆದಿಲ್ಲ. ಆದರೆ ಬಿಜೆಪಿ ಸರ್ಕಾರ ಬಂದ ಕೂಡಲೇ ಮಂಗಳೂರಿನಲ್ಲೇ ಇಂತಹ ಘಟನೆ ನಡೆಯುತ್ತಿರುವುದು ಅನುಮಾನ ಮೂಡಿದೆ ಎಂದರು.

ಮಾಧ್ಯಮಗಳು ಪ್ರಶ್ನೆ ಕೇಳುವ ಮೊದಲೇ ಮಾಧ್ಯಮಗಳನ್ನೇ ಪ್ರಶ್ನೆ ಮಾಡಿದ ಎಚ್‍ಡಿ ಕುಮಾರಸ್ವಾಮಿ ಅವರು, ಇವತ್ತು ಎಲ್ಲಾದ್ರೂ ಬಾಂಬ್ ಹಾಕ್ಸಿದ್ರಾ? ಮಂಗಳೂರು ಪೊಲೀಸ್ ಆಯುಕ್ತ ಹರ್ಷ ಹಾಕ್ಸಿದ್ರಾ? ಎಂದು ಅಕ್ಕ ಪಕ್ಕ ನಿಂತಿದ್ದ ಬೆಂಬಲಿಗರೊಂದಿಗೆ ಕೇಳಿ ನಕ್ಕರು.

ಮಾಜಿ ಸಿಎಂ ಎಚ್‍ಡಿಕೆ ಅವರ ಹೇಳಿಕೆಗೆ ಕಿಡಿಕಾರಿರುವ ಬಿಜೆಪಿ ನಾಯಕ ಗೋ.ಮಧುಸೂದನ್ ಅವರು, ಈ ವ್ಯಕ್ತಿಗೆ ದುರಹಂಕಾರ ಜಾಸ್ತಿ ಆಗಿದೆ. ಮಾಜಿ ಮುಖ್ಯಮಂತ್ರಿಯಾಗಿ ಒಬ್ಬ ಐಪಿಎಸ್ ಅಧಿಕಾರಿ ಬಗ್ಗೆ ಇಂತಹ ಹೇಳಿಕೆ ನೀಡುವುದು ಸರಿಯಲ್ಲ. ಎಚ್‍ಡಿಕೆ ಅವರು ಮೈನಿಂಗ್ ಪ್ರಕರಣದಲ್ಲಿ ಆರೋಪಿಯಾಗಿರುವುದರಿಂದ ಅವರು ಇಂತಹದ್ದೇ ಭಾಷೆಯಲ್ಲಿ ಮಾತನಾಡಿದರೇ ಏನಾಗುತ್ತೆ? ಕುಮಾರಸ್ವಾಮಿ ಅವರನ್ನು 420 ಕುಮಾರಸ್ವಾಮಿ ಎಂದು ಕರೆಯಬಹುದು ಅಲ್ವಾ ಎಂದು ಕಿಡಿಕಾರಿದರು.

Share This Article
Leave a Comment

Leave a Reply

Your email address will not be published. Required fields are marked *