ಮಂಡ್ಯ: ಈ ಬಿಜೆಪಿ (BJP) ಸರ್ಕಾರಕ್ಕೆ ಬೆನ್ನು ಇಲ್ಲ, ಮೂಳೆನೂ ಇಲ್ಲ, ಬೆಳಗಾವಿ (Belagavi) ವಿಷಯದಲ್ಲಿ ಧಮ್, ತಾಕತ್ ಅನ್ನು ಪ್ರಧಾನಿ ಹತ್ತಿರ ತೋರಿಸಿ ಬನ್ನಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಕಿಡಿಕಾರಿದರು.
ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಿ ಎಂಬ ಠಾಕ್ರೆ ಹೇಳಿಕೆ ವಿಚಾರವಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಈ ಬಗ್ಗೆ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಪುನಃ ಮಹಾರಾಷ್ಟ್ರದ ಹಲವು ಪಕ್ಷಗಳು ಬೆಳಗಾವಿ ಜಿಲ್ಲೆಯನ್ನು ಮಹಾರಾಷ್ಟ್ರಕ್ಕೆ (Maharashtra) ಸೇರ್ಪಡೆಗೆ ಒತ್ತಾಯ ಮಾಡುತ್ತಿದೆ. ಇದು ದೇಶದ ಒಕ್ಕೂಟದ ವ್ಯವಸ್ಥೆಗೆ ಅಡ್ಡಿ ಪಡಿಸಲು ತರುವಂತಹ ಅನಾಹುತವಾಗಿದೆ. ಒಂದು ದೇಶ ಒಂದು ಭಾಷೆ, ಒಂದು ದೇಶ ಒಂದು ಚುನಾವಣೆ (Election) ಎನ್ನುವ ಬಿಜೆಪಿ ನಾಯಕರಿಗೆ ಸ್ವಲ್ಪ ಕಾಮನ್ ಸೆನ್ಸ್ ಇದ್ದರೇ ಇಂತಹ ವಿಷಯಗಳನ್ನು ಪ್ರಚೋದನೆ ಪಡಿಸುವುದು ಸೂಕ್ತವಲ್ಲ ಎಂದರು.
ಈಗಾಗಲೇ ಕರ್ನಾಟಕದ ಸ್ವತ್ತು ಬೆಳಗಾವಿಯಾಗಿದೆ. ಇಲ್ಲಿ ಯಾವುದೇ ವಿವಾದ ಇಲ್ಲ. ನಮ್ಮ ಮುಖ್ಯಮಂತ್ರಿ ಬೆಳಗಾವಿ ವಿವಾದ ಅಂತ ಪದ ಬಳಸಿದ್ದಾರೆ. ತಕ್ಷಣವೇ ವಿವಾದ ಎನ್ನುವ ಪದವನ್ನು ಸಿಎಂ ವಾಪಸ್ಸು ಪಡೆಯಬೇಕು. ಇದು ವಿವಾದ ಅಲ್ಲ, ಬೆಳಗಾವಿ ವಿಷಯ. ಬೆಳಗಾವಿ ವಿಷಯವನ್ನು ಮಹಾರಾಷ್ಟ್ರದವರು ಎತ್ತಿಕೊಂಡಿದ್ದಾರೆ. ಅವರು ವಿವಾದ ಸೃಷ್ಟಿ ಮಾಡಿಕೊಂಡರೆ, ನಾವು ಯಾಕೆ ವಿವಾದ ಅಂತ ಎಂದುಕೊಳ್ಳಬೇಕು? ಕರ್ನಾಟಕದ ಏಕೀಕರಣದಲ್ಲಿ ಕರ್ನಾಟಕದ (Karnataka) ಭಾಗದ ತಿರ್ಮಾನವಾಗಿದೆ. ಇವತ್ತು ಬೆಳಗಾವಿಗೆ ಅತ್ಯಂತ ದೊಡ್ಡ ಮಟ್ಟದಲ್ಲಿ ಅಭಿವೃದ್ಧಿಗೆ ಕನ್ನಡಿಗರ ಹಣವನ್ನು ಬಂಡವಾಳ ಹಾಕಿದ್ದೇವೆ. ಸಕ್ಕರೆ ಕಾರ್ಖಾನೆ ನಡೆಯುತ್ತಿದ್ದರೇ ಅದು ಕನ್ನಡಿಗ ಕೊಟ್ಟಿರುವಂತಹ ಕೊಡುಗೆಯಾಗಿದೆ. ಆದರೆ ಮಹಾರಾಷ್ಟ್ರದಲ್ಲಿ ಪಕ್ಷಗಳು ಬೆಳಗಾವಿಯ ಆರ್ಥಿಕ ಶಕ್ತಿ ಗಮನಿಸಿ ಲಪಟಾಯಿಸಲು ಹೊರಟಿದ್ದಾರೆ ಎಂದು ಕಿಡಿಕಾರಿದರು.
ಠಾಕ್ರೆ ಮಾತಿನ ಜಾಕ್ಟೆಗೆ ಸರ್ಕಾರ ಡ್ರಮ್ ಹೊಡೆಯಲು ಹೊರಟಿರುವುದು ಬಿಜೆಪಿಯ ನಾಚಿಕೆಗೇಡಿನ ಕೆಲಸ. ಈ ದೇಶದಲ್ಲಿ ಒಕ್ಕೂಟದ ವ್ಯವಸ್ಥೆ, ಪ್ರಜಾಪ್ರಭುತ್ವ, ಸಂವಿಧಾನದ ಗೌರವ ಕಾಪಾಡಬೇಕು. ಮಹಾರಾಷ್ಟ್ರದ ಸರ್ಕಾರ ಜವಾಬ್ದಾರಿಯುತವಾಗಿ ನಡೆಯುವುದನ್ನು ಕಲಿಯಬೇಕು. ಅಕ್ಕ-ಪಕ್ಕದ ರಾಜ್ಯದಲ್ಲಿ ದ್ವೇಷ ಉಂಟುಮಾಡಿ, ಸಂಘರ್ಷ ಮಾಡ್ತಾರೆ. ಮುಖ್ಯಮಂತ್ರಿ ಈ ವಿಷಯವನ್ನು ಸುಲಭವಾಗಿ ತೆಗೆದುಕೊಳ್ಳಬೇಡಿ. ಮಹಾರಾಷ್ಟ್ರದವರು ಮಾಡುವ ಕುತಂತ್ರಕ್ಕೆ ಬಲಿಯಾಗುತ್ತಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಬೇನಾಮಿ ಆಸ್ತಿ ಮಾಡೋಕೆ ನಮ್ಮಪ್ಪ ಸಿಎಂ ಆಗಿರಲಿಲ್ಲ- ಸಿ.ಟಿ ರವಿ ತಿರುಗೇಟು
ದೆಹಲಿಯಲ್ಲಿ ನಿಮ್ಮ ಕೇಂದ್ರ ಸರ್ಕಾರ ಡಬಲ್ ಇಂಜಿನ್ ಸರ್ಕಾರ ಕರ್ನಾಟಕದವರನ್ನು ಲೆಕ್ಕಕ್ಕೆ ಇಟ್ಟಿಲ್ಲ. ಕರ್ನಾಟಕದ 25 ಜನ ಲೋಕಸಭಾ ಮೆಂಬರ್ರನ್ನು ಎಲ್ಲಿಟ್ಟಿದ್ದಾರೆ ಗೊತ್ತಿದೆ. ಧಮ್, ತಾಕತ್ ಬಗ್ಗೆ ಸಿಎಂ ಪ್ರತಿನಿತ್ಯ ಭಾಷಣ ಮಾಡ್ತಾರೆ. ಈ ವಿಷಯದಲ್ಲಿ ಧಮ್, ತಾಕತ್ನ್ನು ಪ್ರಧಾನಿ ಹತ್ತಿರ ತೋರಿಸಿ ಬನ್ನಿ. ಈ ಸರ್ಕಾರಕ್ಕೆ ಬೆನ್ನು ಇಲ್ಲ, ಮೂಳೆನೂ ಇಲ್ಲ ಇಂತಹ ಪರಿಸ್ಥಿತಿಯಲ್ಲಿ ಒಳ್ಳೆಯ ಅವಕಾಶ ಅಂತ ಮಹಾರಾಷ್ಟ್ರ ದಬ್ಬಾಳಿಕೆ ಮಾಡ್ತಿದೆ. ಮಗು ಚಿವುಟಿ, ಅಳಿಸುವ ಕೆಲಸವನ್ನ ಬಿಜೆಪಿ ಸರ್ಕಾರ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಆಸ್ಪತ್ರೆಗೆ ದಾಖಲಾಗಿದ್ದ ನಿರ್ಮಲಾ ಸೀತಾರಾಮನ್ ಆರೋಗ್ಯ ಸ್ಥಿರ