– ಜನರ ಹೃದಯದಲ್ಲಿ ಸ್ಥಾನ ಪಡೆದು ಈ ಮಣ್ಣಿಗೆ ಹೋಗ್ತೀನಿ – ಸಚಿವ ಭಾವುಕ
– ಪೊಲೀಸರ ಯಡವಟ್ಟಿಗೆ ಬಾಲಕಿ ಸಾವು ಪ್ರಕರಣ ಸ್ಮರಿಸಿದ ಹೆಚ್ಡಿಕೆ
ಮಂಡ್ಯ: ಪಹಲ್ಗಾಮ್ ಭಯೋತ್ಪಾದಕ ದಾಳಿಗೂ (Pahalgam Terror Attack) ಕಾಲ್ತುಳಿತ ಪ್ರಕರಣಕ್ಕೂ ಏನು ಸಂಬಂಧ? ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಎಷ್ಟು ಅಟ್ಯಾಕ್ ಆಗುದ್ದೋ, ಆಗ ಅವರು ರಾಜೀನಾಮೆ ಕೊಟ್ರಾ? ಅಂತ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಪ್ರಶ್ನೆ ಮಾಡಿದ್ದಾರೆ.
ಮಂಡ್ಯ (Mandya) ಮೈಶುಗರ್ ಪ್ರೌಢಶಾಲೆಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿಂದು ಪಾಲ್ಗೊಂಡಿದ್ದ ಸಚಿವರು, ಶಾಲಾ ಆವರಣದಲ್ಲಿ ಗಿಡ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ಆರೋಗ್ಯ ಇನ್ನೂ ಪಿಕಪ್ ಆಗಬೇಕು. ಆದ್ರೆ ಎಲ್ಲಾ ಕಡೆ ಬರಲೇಬೇಕು ಹೀಗಾಗಿ ಬರ್ತಾ ಇದ್ದೀನಿ. ಕಾಲ್ತುಳಿತದ ವಿಚಾರದಲ್ಲಿ ಸರ್ಕಾರ ಗಂಟೆಗೊಂದು ತೀರ್ಮಾನ ಮಾಡ್ತಾ ಇದೆ. ಅಂತಿಮವಾಗಿ ಇವರು ಏನು ಮಾಡ್ತಾರೆ ನೋಡಬೇಕು. ಮೊದಲು ಇರುವ ನ್ಯಾಯಾಂಗ ತನಿಖೆ ಅಂದ್ರು. ಈಗ ಸಿಐಡಿ ತನಿಖೆ ಅಂತಾ ಇದ್ದಾರೆ. ಅಂತಿಮವಾಗಿ ತನಿಖಾ ವರದಿ ಪಡೆದುಕೊಳ್ಳುತ್ತಾರೆ. ಇದೊಂದು ಸರ್ಕಾರ ಅನ್ನೋಕೆ ಆಗುತ್ತಾ? ಯಾವುದೇ ತೀರ್ಮಾನ ಮಾಡಿದ್ರೆ ಸ್ಪಷ್ಟತೆ ಇರಬೇಕು. ಅಧಿಕಾರಿಗಳ ತಪ್ಪು ಏನಿತ್ತು? ಎಫ್ಐಆರ್ನಲ್ಲಿ ಅಧಿಕಾರಿಗಳು ಕರ್ತವ್ಯ ಲೋಪ ಆಗಿಲ್ಲ ಅಂತಾ ಇದೆ. ಒಟ್ಟಿನಲ್ಲಿ ಸರ್ಕಾರ ಸಂಪೂರ್ಣ ವೈಫಲ್ಯ ಆಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಪಹಲ್ಗಾಮ್, ಪ್ರಯಾಗ್ರಾಜ್ನಲ್ಲಿ ತೊಂದ್ರೆ ಆದ್ರೆ ರಾಷ್ಟ್ರೀಯ ನಾಯಕರು ಕೇಳಬೇಕು ಅಲ್ವಾ. ಆ ಬಗ್ಗೆ ರಾಷ್ಟ್ರ ನಾಯಕರು ಹೋರಾಟ ಮಾಡಬೇಕು. ಇಲ್ಲಿ ಇವರು ಮಾಡಿರೋ ತಪ್ಪಿಗೆ ಪೆಹಲ್ಗಾಮ್, ಪ್ರಯಾಗ್ರಾಜ್ ಘಟನೆ ಮಧ್ಯೆ ತರ್ತಿದ್ದಾರೆ. ಪೆಹಲ್ಗಾಮ್ ಘಟನೆಗೂ ಇಲ್ಲಿಗೂ ಏನು ಸಂಬಂಧ? ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗೆ ಎಷ್ಟು ಅಟ್ಯಾಕ್ ಆಗುದ್ವು? ಆಗ ಅವರು ರಾಜೀನಾಮೆ ಕೊಟ್ರಾ? ಬೆಂಗಳೂರಿನಲ್ಲಿ ಇವರ ವರ್ಚಸ್ಗಾಗಿ ಘಟನೆ ನಡೆದಿರೋದು ಎಂದು ತಿವಿದರು.
ಪೊಲೀಸರ ಯಡವಟ್ಟಿಗೆ ಬಾಲಕಿ ಸಾವು; ಘಟನೆ ಸ್ಮರಿಸಿದ ಹೆಚ್ಡಿಕೆ
ಇದಕ್ಕೂ ಮುನ್ನ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಹೆಚ್ಡಿಕೆ, ನನ್ನಿಂದ ಜಿಲ್ಲೆಗೆ ಅನುಕೂಲ ಆಗುತ್ತೆ ಅಂತಾ ಕಳೆದ ಚುನಾವಣೆಯಲ್ಲಿ ಗೆಲ್ಲಿಸಿದ್ದಿರಿ. ಬೃಹತ್ ಕೈಗಾರಿಕಾ ಸಚಿವನಾಗಿ ನನ್ನ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟಿದ್ದೀರಿ. ಕಾರ್ಖಾನೆ ತರಲು ರಾಜ್ಯ ಸರ್ಕಾರದ ಸಹಕಾರವೂ ಬೇಕಿರುತ್ತೆ. ಈ ವರ್ಷ ದೇಶಾದ್ಯಂತ 14 ಸಾವಿರ ಎಲೆಕ್ಟ್ರಿಕ್ ಬಸ್ ಕೊಡಲು ತೀರ್ಮಾನ ಆಗಿದೆ. ಅದರಲ್ಲಿ ಬೆಂಗಳೂರಿಗೆ 4,500 ಬಸ್, ಬೇರೆ ರಾಜ್ಯಕ್ಕೆ 2 ಸಾವಿರ ಬಸ್ ಕೊಡಲಾಗುತ್ತಿದೆ. ಜಿಲ್ಲೆಗೆ ಏನಾದ್ರೂ ಕೈಗಾರಿಕೆ ತರಲು ನಿತ್ಯ ಪ್ರಯತ್ನ ಮಾಡ್ತಿದ್ದೇನೆ. ರಾಜ್ಯ ಸರ್ಕಾರದ ಸಹಕಾರ ಪಡೆಯುವ ಪ್ರಯತ್ನವನ್ನೂ ಮಾಡ್ತೀನಿ. ರೈತ ಭವನ ಪುನಶ್ಚೇತನಕ್ಕೆ 4 ಕೋಟಿ ಅನುದಾನ ಕೊಡಿಸಿದ್ದೇನೆ. ಆ ಕೆಲಸ ಯಾರಿಗೆ ಕೊಟ್ಟು ಮಾಡಿಸಬೇಕು ಅನ್ನೋದ್ರ ಚರ್ಚೆ ಆಗ್ತಿದೆ. ನನಗೆ ಬಹಳ ನೋವು ತಂದ ದೃಶ್ಯ ಅಂದ್ರೆ ಮಂಡ್ಯ ಮಿಮ್ಸ್ ನಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಮಗು ನಿಧನ ಆಗಿದ್ದು. ಪೊಲೀಸರ ವರ್ತನೆಯಿಂದ ನಾಯಿ ಕಚ್ಚಿದ ಮಗು ಸಾವನ್ನಪ್ಪಿದ್ದು, ಈ ಎರಡೂ ಪ್ರಕರಣಗಳು ನೋವು ತರುತ್ತದೆ. ಈ ವಿಷಯದಲ್ಲಿ ಸರ್ಕಾರಿ ಅಧಿಕಾರಿಗಳು ಹಣದಾಸೆಗೆ ಜೀವ ಕಳೆಯಬಾರದು ಎಂದು ತಿಳಿವಳಿಕೆ ನೀಡಿದರು.
ಜನಕ್ಕೆ ನನ್ನ ಮೇಲೆ ವಿಶ್ವಾಸ ಬರಲಿಲ್ಲ
ಮಿಮ್ಸ್ ಆಸ್ಪತ್ರೆ ಸಮಸ್ಯೆಗೆ ಇವತ್ತು ತಕ್ಷಣ ಸಿಎಸ್ಆರ್ ಫಂಡ್ ನಲ್ಲಿ ಎರಡೂವರೆ ಕೋಟಿ ಕೊಡಿಸಿದ್ದೇನೆ. ಮೈಶುಗರ್ ಶಿಕ್ಷಣ ಸಂಸ್ಥೆ ಉಳಿಸಲು ನಾನು ಬದ್ಧ. ಅದಕ್ಕೆ ಬೇಕಾದ ನೀಲನಕ್ಷೆ ಸಿದ್ಧಪಡಿಸಿಕೊಡಿ. ಮಾದರಿ ಶಾಲೆ ಮಾಡಲು ಅಗತ್ಯ ನೆರವು. ನನ್ನ ಕನಸಿತ್ತು ಪಂಚ ಯೋಜನೆಗಳನ್ನ ತರಬೇಕು, ಪ್ರತಿ ಪಂಚಾಯಿತಿ ಮಟ್ಟದಲ್ಲಿ ಉಚಿತ ಇಂಗ್ಲೀಷ್ ಶಾಲೆ ತರಬೇಕು ಅಂದುಕೊಂಡಿದ್ದೆ. ನನ್ನ ದುರಾದೃಷ್ಟ ಜನರಿಗೆ ನನ್ನ ಮೇಲೆ ವಿಶ್ವಾಸ ಬರಲಿಲ್ಲ. ನಾನು ಅಂತಹ ದೊಡ್ಡ ಕಾರ್ಯಕ್ರಮ ಕೊಡ್ತೇನೆ ಅಂತ ನಂಬಿಕೆ ಬರಲಿಲ್ಲ. ಇವತ್ತು ಗ್ಯಾರಂಟಿ ಹೆಸರಲ್ಲಿ, ತೆರಿಗೆ ನೆಪದಲ್ಲಿ ಸುಲಿಗೆ ಮಾಡ್ತಿದ್ದಾರೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ನಿಮ್ಮ ಹೃದಯದಲ್ಲಿ ಸ್ಥಾನ ಪಡೆದು ಮಣ್ಣಿಗೆ ಹೋಗ್ತೀನಿ
ನಾನು ಆಂಧ್ರದಲ್ಲಿ ಇತಿಹಾಸದ ಕಾರ್ಖಾನೆ ಉಳಿಸಿದೆ. ಹೆಚ್ಎಂಟಿ ಫ್ಯಾಕ್ಟರಿ ಉಳಿಸಲು ಪಣತೊಟ್ಟಿದ್ದೇನೆ. ಆದ್ರೆ, ಅದಕ್ಕೆ ರಾಜ್ಯ ಸರ್ಕಾರ ಭೂಮಿ ಕೊಡುತ್ತಿಲ್ಲ. ನನಗೆ ಮಂಡ್ಯ ಜನ ಸ್ವಲ್ಪ ಸಮಯ ಕೊಡಿ. ನನ್ನ ಮೇಲೆ ಜಿಲ್ಲೆಯ ಜನ ಸಾಕಷ್ಟು ನಿರೀಕ್ಷೆ ಇಟ್ಟಿದ್ದೀರಿ. ನನ್ನ ಒಂದು ಕಣ್ಣು, ಹೃದಯ ಇಲ್ಲೇ ಇರುತ್ತೆ. ನಿಮ್ಮ ನಿರೀಕ್ಷೆ ಆಸೆಗಳನ್ನ ನಿರಾಸೆ ಮಾಡಲ್ಲ. ನನಗೆ ಬೇರೆ ಯಾವುದೇ ಆಸೆ ಇಲ್ಲ, ನನಗೆ ಬೇಕಿರೋದು ನಿಮ್ಮ ಹೃದಯದಲ್ಲಿ ಸ್ಥಾನ, ಆ ಶಾಶ್ವತ ಸ್ಥಾನ ಪಡೆದು ನಂತರ ನಾನು ಈ ಮಣ್ಣಿಗೆ ಹೋಗ್ತೀನಿ ಎಂದು ಭಾಷಣದ ವೇಳೆ ಭಾವುಕರಾದರು.