ಅಪ್ಪ-ಮಕ್ಕಳಿಗೆ ಮಹದಾಯಿ ಸಮಸ್ಯೆ ಬಗೆಹರಿಸೋಕೆ ಇಷ್ಟ ಇಲ್ಲ- ಎಚ್‍ಡಿಕೆ, ದೇವೇಗೌಡರ ವಿರುದ್ಧ ಬಿಎಸ್‍ವೈ ಕಿಡಿ

Public TV
2 Min Read

ಹುಬ್ಬಳ್ಳಿ: ಮಹದಾಯಿ ವಿಷಯದಲ್ಲಿ ಕಾಂಗ್ರೆಸ್ ನಾಟಕ ಮಾಡುತ್ತಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಬೇಜವಾಬ್ದಾರಿ ಮನುಷ್ಯ. ಅಪ್ಪ-ಮಕ್ಕಳಿಗೆ ಮಹದಾಯಿ ಸಮಸ್ಯೆ ಬಗೆಹರಿಸೋಕೆ ಇಷ್ಟ ಇಲ್ಲ ಅಂತ ಬಿಜೆಪಿ ರಾಜ್ಯಾಧ್ಯಕ್ಷ ಬಿಸ್ ಯಡಿಯೂರಪ್ಪ ಎಚ್‍ಡಿ ಕುಮಾರಸ್ವಾಮಿ ಹಾಗೂ ದೇವೇಗೌಡರ ವಿರುದ್ಧ ಕಿಡಿ ಕಾರಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಹದಾಯಿ ನೀರಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೆ. 2008 ರಲ್ಲಿ ಮಾಜಿ ಪ್ರಧಾನಿ ವಾಜಪೇಯಿ ಅನುಮತಿ ನೀಡಿದ್ದರು. ಕಾಂಗ್ರೆಸ್ ಸರ್ಕಾರ 2012 ರಲ್ಲಿ ಗೋವಾ ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿತ್ತು. ಆಗ ಯಾಕೆ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಮಧ್ಯಪ್ರವೇಶ ಮಾಡಲಿಲ್ಲ ಅಂತ ಕಿಡಿ ಕಾರಿದ್ರು.

ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುವುದಾಗಿ ಗೋವಾ ಮುಖ್ಯಮಂತ್ರಿ ಹೇಳಿದ್ದಾರೆ. ಗೋವಾ ಸಿಎಂ ಅವರಿಗೆ ಯಾಕೆ ಪತ್ರ ಬರೆಯಬೇಕು ಎಂಬುದನ್ನು ನಾನು ಹೇಳುವುದು ಸರಿಯಲ್ಲ. ಅವರು ನೀರು ಕೊಡಲು ಒಲವು ತೋರಿದ್ದಾರೆ. ಹೀಗಿರುವಾಗ ಯಾರಿಗೆ ಪತ್ರ ಬರೆದಿದ್ದಾರೆ ಎಂಬುದು ಮುಖ್ಯವಲ್ಲ ಅಂತ ಹೇಳಿದ್ರು.

ಈ ಹಿಂದೆ ನಮ್ಮ ಮುಖ್ಯಮಂತ್ರಿ ಹಲವು ಸಾರಿ ಹೇಳುತ್ತಾ ಬಂದಿದ್ದಾರೆ. ನೀವು ಗೋವಾ ಸಿಎಂ ಅವರನ್ನು ಒಪ್ಪಿಸಿ ಎಂದಿದ್ದರು. ನಾವು ಈಗ ಗೋವಾ ಸಿಎಂ ಅವರನ್ನು ಒಪ್ಪಿಸಿದ್ದೇವೆ. ಹೀಗಾಗಿ ಅವರು ಮಾತುಕತೆಗೆ ಒಪ್ಪಿ ನಮಗೆ ಲಿಖಿತವಾಗಿ ಪತ್ರ ಬರೆದಿದ್ದಾರೆ. ಕಾಂಗ್ರೆಸ್ ಸರ್ಕಾರ ನೀರಿನ ವಿಷಯದಲ್ಲಿ ರಾಜಕೀಯ ಮಾಡುತ್ತಿದೆ ಅಂತ ಸಿಡಿಮಿಡಿಗೊಂಡ್ರು.

2005-12 ರವರೆಗೆ ಗೋವಾ ಹಾಗೂ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇತ್ತು. ಅವಾಗ ಯಾಕೆ ಕಾಂಗ್ರೆಸ್ ಮಹದಾಯಿ ಸಮಸ್ಯೆ ಇತ್ಯರ್ಥಪಡಿಸಲಿಲ್ಲ. ಆವಾಗ್ಯಾಕೆ ಇವರು ರಾಜಕೀಯ ದೊಂಬರಾಟ ಮಾಡಿದ್ರು? ಆದ್ರೂ ನಮ್ಮ ಪ್ರಯತ್ನ ಮಾಡಿದ್ದೇವೆ. ನಮ್ಮ ರಾಷ್ಟ್ರೀಯ ಅಧ್ಯಕ್ಷರ ನೇತೃತ್ವದಲ್ಲಿ ಗೋವಾ ಸಿಎಂ ಮನವೊಲಿಸಿದ್ದೇವೆ. ಗೋವಾ ಸಿಎಂ ನಮಗೆ ಒಪ್ಪಿಗೆ ನೀಡಿ ಪತ್ರ ನೀಡಿದ್ದಾರೆ. ಈ ಪತ್ರವನ್ನು ಟ್ರಿಬ್ಯುನಲ್ ಮುಂದೆ ತೆಗೆದುಕೊಂಡು ಹೋಗಿ ಸಮಸ್ಯೆ ಬಗೆಹರಿಯುತ್ತೆ. ನಿಮ್ಮಿಂದ 15 ವರ್ಷದಿಂದ ಆಗದೇ ಇರೋ ಕೆಲಸ ನಾವು ಮಾಡಿದ್ದೇವೆ. ಈಗಲಾದ್ರೂ ಸಮಸ್ಯೆ ಇತ್ಯರ್ಥ ಮಾಡೋಕೆ ಒಟ್ಟಾಗಿ ಪ್ರಯತ್ನ ಮಾಡೋಣ ಅಂತ ಕಾಂಗ್ರೆಸ್ಸಿಗರಿಗೆ ಬಿಎಸ್‍ವೈ ಸಲಹೆಯಿತ್ತರು.

Share This Article
Leave a Comment

Leave a Reply

Your email address will not be published. Required fields are marked *