ಕೋಟ ಅಮೃತೇಶ್ವರಿ ದೇವಿಗೆ ಎಚ್‍ಡಿಡಿ ದಂಪತಿಯಿಂದ ಪೂಜೆ

Public TV
1 Min Read

ಉಡುಪಿ: ಜಿಲ್ಲೆಯ ಕಾಪು ತಾಲೂಕು ಮೂಳೂರಿನ ಸಾಯಿರಾಧಾ ರೆಸಾರ್ಟಿನಲ್ಲಿ ಮಾಜಿ ಪ್ರಧಾನಿ ದೇವೇಗೌಡ ದಂಪತಿ ಪ್ರಕೃತಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆಯ ನಡುವೆ ದೇವೇಗೌಡರು ಮತ್ತು ಪತ್ನಿ ಚೆನ್ನಮ್ಮ ಧಾರ್ಮಿಕ ಪ್ರವಾಸವನ್ನು ಮಾಡುತ್ತಿದ್ದು, ಇಂದು ಇಬ್ಬರು ಕೋಟ ಅಮೃತೇಶ್ವರಿ ದೇವಸ್ಥಾನಕ್ಕೆ ಭೇಟಿ ಕೊಟ್ಟರು.

ಉಡುಪಿ ಜಿಲ್ಲೆ ಕುಂದಾಪುರ ಸಮೀಪದ ಕೋಟ ಅಮೃತೇಶ್ವರಿ ದೇವಸ್ಥಾನಕ್ಕೆ ಮಧ್ಯಾಹ್ನದ ಮಹಾಪೂಜೆ ಸಂದರ್ಭ ತೆರಳಿದ ಜೆಡಿಎಸ್ ವರಿಷ್ಠ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಮಹಾಪೂಜೆಗೆ ಕೊಟ್ಟ ಹಣ್ಣುಕಾಯಿ ತಟ್ಟೆಯಲ್ಲಿ ಮೊಮ್ಮಗನ ಮದುವೆಯ ಆಮಂತ್ರಣ ಪತ್ರಿಕೆ ಇಟ್ಟು ಕೊಟ್ಟಿದ್ದಾರೆ.

ದೇವಿಯ ಮುಂದಿಟ್ಟು ಆಮಂತ್ರಣ ಪತ್ರಿಕೆಗೆ ಅರ್ಚಕರು ಪೂಜೆ ಸಲ್ಲಿಸಿದ್ದಾರೆ. ದೇವೇಗೌಡರ ಪುತ್ರಿ ಶೈಲಜ ಅವರ ಮಗ ಡಾ. ಅಮೋಘ್ ಅವರ ಮದುವೆ ಪತ್ರಿಕೆ ಇದಾಗಿದ್ದು, ಭೇಟಿ ಕೊಟ್ಟ ಕ್ಷೇತ್ರದಲ್ಲಿ ಅಜ್ಜ ತಮ್ಮ ಮೊಮ್ಮಗನಿಗಾಗಿ ಪೂಜೆ ಸಲ್ಲಿಸುತ್ತಿದ್ದಾರೆ.

ಮೇ 16ರ ವರೆಗೆ ಕಾಪುವಿನಲ್ಲಿ ತಂಗಲಿರುವ ದೇವೇಗೌಡ ದಂಪತಿ ಉಡುಪಿಯ ಧಾರ್ಮಿಕ ಕ್ಷೇತ್ರಗಳ ಪ್ರವಾಸ ಮಾಡಲಿದೆ. ಅರ್ಚನೆ, ಮಹಾಪೂಜೆ ಸಂದರ್ಭ ರಾಜ್ಯ ಸಮ್ಮಿಶ್ರ ಸರ್ಕಾರ ಸುಭದ್ರವಾಗಿರುವಂತೆ, ಕೇಂದ್ರದಲ್ಲಿ ಮಹಾಮೈತ್ರಿ ಸರ್ಕಾರ ರಚನೆಯಾಗುವಂತೆ ದೊಡ್ಡಗೌಡರು ಪ್ರಾರ್ಥನೆ ಮಾಡುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *