ಹೆಚ್‍ಡಿಡಿ ಅಂತರಂಗದಲ್ಲಿದ್ದ ಸತ್ಯ ಈಗ ಬಹಿರಂಗ: ಬಸವರಾಜ ಬೊಮ್ಮಾಯಿ

Public TV
1 Min Read

ಹಾವೇರಿ: ಮೈತ್ರಿ ಸರ್ಕಾರ ಬೀಳಲು ಸಿದ್ದರಾಮಯ್ಯ ಕಾರಣ ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡರು ಗಂಭೀರ ಆರೋಪ ಮಾಡಿದ್ದು, ದೇವೇಗೌಡರು ಅಂತರಂಗದಲ್ಲಿ ಇದ್ದ ಸತ್ಯ ಈಗ ಬಹಿರಂಗವಾಗಿದೆ ಎಂದು ನೂತನ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಹಾವೇರಿಯಲ್ಲಿ ಮಾತನಾಡಿದ ಅವರು, ಯಾವ ವಿಚಾರ ಅಂತರಂಗಕ್ಕೆ ಗೊತ್ತಿತ್ತು, ಇದನ್ನು ದೇವೇಗೌಡರು ಇಂದು ಬಹಿರಂಗಗೊಳಿಸಿದ್ದಾರೆ. ಇದು ಮುಂದಿನ ದಿನದ ರಾಜ್ಯ ರಾಜಕಾರಣದ ಮೇಲೆ ಬಹುದೊಡ್ಡ ಪರಿಣಾಮ ಬೀರಲಿದೆ ಎಂದು ಭವಿಷ್ಯ ನುಡಿದರು.

ಇದೇ ವೇಳೆ ನೆರೆ ಪರಿಹಾರ ಪರಿಶೀಲನಾ ಸಭೆಯಲ್ಲಿ ತಹಶೀಲ್ದಾರಗಳಿಗೆ ಕ್ಲಾಸ್ ತೆಗೆದುಕೊಂಡ ಅವರು, ಸಂತ್ರಸ್ತರಿಗೆ 10 ಸಾವಿರ ಪರಿಹಾರ ಹಣ ಕೊಡುವುದಕ್ಕೆ ಏಕೆ ವಿಳಂಬವಾಯಿತು. ಮೊದಲು ನಿಮ್ಮ ಮನೋಭಾವನೆ ಬದಲಾಯಿಸಿಕೊಳ್ಳಿ. ಹೆಚ್ಚು ಮಳೆಯಾದಲ್ಲಿ ಕಡಿಮೆ ಪರಿಹಾರ ಕೊಡುತ್ತೀರಾ ಎಂದು ಶಿಗ್ಗಾಂವಿ ತಹಶೀಲ್ದಾರ್ ವಿರುದ್ಧ ಕಿಡಿಕಾರಿದರು. ಅಲ್ಲದೇ ಪ್ರತಿ ತಹಶೀಲ್ದಾರಗಳಿಗೂ ಹೀಗೆ ಮಾಡಿದರೆ ನಿಮ್ಮನ್ನು ಯಾಕೆ ಅಮಾನತುಗೊಳಿಸಬಾರದು ಎಂದು ಪ್ರಶ್ನಿಸುವ ಮೂಲಕ ಖಡಕ್ ಎಚ್ಚರಿಕೆ ನೀಡಿದರು.

ದೇವೇಗೌಡರು ಹೇಳಿದ್ದೇನು?
ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವುದು ಕಾಂಗ್ರೆಸ್‍ನ ಉದ್ದೇಶವಾಗಿತ್ತು. ಆದರೆ, ಹೈಕಮಾಂಡ್ ಮೈತ್ರಿ ನಿರ್ಧಾರಕ್ಕೆ ಸಿದ್ದರಾಮಯ್ಯ ಒಪ್ಪಿಗೆ ಇರಲಿಲ್ಲ. ನನ್ನ ಮತ್ತು ಕುಮಾರಸ್ವಾಮಿ ಜೊತೆಗೆ ಬಗೆಹರಿಯದ ಕದನ ಸಿದ್ದರಾಮಯ್ಯಗಿತ್ತು. ಅಷ್ಟೇ ಅಲ್ಲದೇ ಕುಮಾರಸ್ವಾಮಿಯನ್ನು ಮುಖ್ಯಮಂತ್ರಿಯ ಸ್ಥಾನದಲ್ಲಿ ನೋಡಲು ಸಿದ್ದರಾಮಯ್ಯನವರಿಗೆ ಆಗ್ತಿರಲಿಲ್ಲ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್‍ನಿಂದಾದ ಸೋಲಿನಿಂದ ಕಂಗೆಟ್ಟಿದ್ದ ಸಿದ್ದರಾಮಯ್ಯನನವರಿಗೆ ಅಸಾಧ್ಯ ಸಿಟ್ಟು ತರಿಸಿತ್ತು.

ಲೋಕಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಬೆಂಬಲಿಗರು ನಮ್ಮ ವಿರುದ್ಧ ಬಹಿರಂಗವಾಗಿ ಕೆಲಸ ಮಾಡಿದ್ದರಿಂದ ತುಮಕೂರಿನಲ್ಲಿ ನಾನು ಮತ್ತು ಮಂಡ್ಯದಲ್ಲಿ ನಿಖಿಲ್ ಸೋಲಲು ಕಾರಣವಾಯಿತು. ನಮ್ಮ ವಿರುದ್ಧ ಕೆಲಸ ಮಾಡಿದ ಕಾಂಗ್ರೆಸ್ಸಿನವರಿಗೆ ಅವರು ನೋಟಿಸ್ ನೀಡಲಿಲ್ಲ. ಸದ್ಯಕ್ಕೆ ಕಾಂಗ್ರೆಸ್‍ನಲ್ಲಿ ಸಿದ್ದರಾಮಯ್ಯ ವಿರುದ್ಧ ಹೋರಾಡಲು ಯಾರೂ ಇಲ್ಲ ಎಂದು ಕಿಡಿಕಾರಿದ್ದರು.

Share This Article
Leave a Comment

Leave a Reply

Your email address will not be published. Required fields are marked *