ಪೊಲೀಸರೊಂದಿಗೆ ಹಾಡಿ ಕುಣಿದ ಹ್ಯಾಟ್ರಿಕ್ ಹೀರೋ : ‘ಟಗರು-2’ ಸುಳಿವು ಕೊಟ್ಟ ಶಿವಣ್ಣ

Public TV
1 Min Read

ಮಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಸೋಮವಾರ(ಇಂದು) ಮಂಗಳೂರಿಗೆ ಬಂದಿದ್ದರು. ದೇವಸ್ಥಾನವೊಂದರ ದರ್ಶನಕ್ಕೆ ಬಂದಿದ್ದ ಶಿವಣ್ಣ ಮಂಗಳೂರು ನಗರ ಪೊಲೀಸರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ನಗರದ ಎಸ್‍ಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಶಿವಣ್ಣ ಎಂಟ್ರಿಯಾಗುತ್ತಿದ್ದಂತೆ ‘ಟಗರು’ ಸಿನಿಮಾದ ಹಾಡಿನ ಮೂಲಕ ಶಿವಣ್ಣ ಅವರನ್ನು ಮಂಗಳೂರು ಪೊಲೀಸರು ಸ್ವಾಗತಿಸಿದರು. ಶಿವಣ್ಣನಿಗೆ ಪತ್ನಿ ಗೀತಾ ಶಿವರಾಜ್‍ಕುಮಾರ್ ಸಾಥ್ ನೀಡಿದರು. ಸಂವಾದಕ್ಕೂ ಮೊದಲು ಪುನೀತ್ ರಾಜ್‍ಕುಮಾರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಈ ಸಂದರ್ಭ ಅಪ್ಪು ನೆನಪು ಮಾಡಿಕೊಂಡ ಶಿವಣ್ಣ ಭಾವುಕರಾದರು. ಬಳಿಕ ಪುನೀತ್ ಬಗ್ಗೆ ನೋವಿನ ನೆನಪು ಮಾಡಿಕೊಳ್ಳುವುದಕ್ಕಿಂತ ಅಪ್ಪುನ ಸೆಲೆಬ್ರೇಟ್ ಮಾಡಬೇಕು ಎಂದು ಕರೆ ನೀಡಿದರು. ಇದನ್ನೂ ಓದಿ: ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಇಲ್ಲ, ಬೊಮ್ಮಾಯಿ ನೇತ್ರತ್ವದಲ್ಲಿ ಚುನಾವಣೆ: ನಳಿನ್ 

ಬಳಿಕ ನಡೆದ ಸಂವಾದದಲ್ಲಿ ಪೊಲೀಸರ ಪ್ರಶ್ನೆಗಳಿಗೆ ಶಿವರಾಜ್‍ಕುಮಾರ್ ಉತ್ತರ ನೀಡಿದರು. ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಿದ್ದಾಗ, ಪೊಲೀಸ್ ಪಾತ್ರದಲ್ಲಿ ‘ಟಗರು-2’ ಸಿನಿಮಾ ಮೂಲಕ ನಾನು ಕಾಣಿಸಿಕೊಳ್ಳಬಹುದು ಎಂದು ಹೇಳಿದರು. ಈ ಮೂಲಕ ಅಭಿಮಾನಿಗಳಿಗೆ ‘ಟಗರು-2’ ಸಿನಿಮಾ ಬರುವ ಸುಳಿವು ನೀಡಿದರು. ಕರಾವಳಿ ಜಿಲ್ಲೆಯ ಶೂಟಿಂಗ್‍ನಲ್ಲಿ ಭಾಗಿಯಾಗಿದ್ದ ದಿನಗಳನ್ನು ಮೆಲುಕು ಹಾಕಿದ ಶಿವಣ್ಣ ಮಂಗಳೂರು ನನ್ನ ಫೇವರೇಟ್ ಸ್ಥಳಗಳಲ್ಲಿ ಒಂದು ಎಂದು ಹೇಳಿದರು.

ಅಪ್ಪುವನ್ನು ನೆನೆದ ಶಿವರಾಜ್‍ಕುಮಾರ್ ‘ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ’ ಹಾಡನ್ನು ಹಾಡಿದರು. ಈ ನಡುವೆ ನಗರ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಶಿವಣ್ಣ ಸಮ್ಮುಖದಲ್ಲಿ ‘ಟಗರು ಬಂತು ಟಗರು’ ಹಾಡನ್ನು ಎನರ್ಜಿಟಿಕ್ ಆಗಿ ಹಾಡಿದ್ರು. ಕಮೀಷನರ್ ಹಾಡು ಹಾಡುತ್ತಿದ್ದಂತೆ ಶಿವಣ್ಣ ಅದೇ ಹಾಡಿಗೆ ಸಖತ್ ಸ್ಟೆಪ್ ಸಹ ಹಾಕಿದರು. ಸಂವಾದದಲ್ಲಿ ಭಾಗಿಯಾದ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ಸಹ ಜೊತೆಯಾಗಿ ಸ್ಟೆಪ್ ಹಾಕಿದರು. ಇದನ್ನೂ ಓದಿ: ದೇಶದಲ್ಲಿ ಆಗಲಿ, ಪ್ರಪಂಚವಾಗಲಿ ಎಲ್ಲರಿಗೂ ಮಾತೃ ಭಾಷೆಯೇ ಮೊದಲು: ಶಿವಕುಮಾರ್ ಉದಾಸಿ 

ಹಾಡು ಹಾಡಿ, ಡ್ಯಾನ್ಸ್ ಮಾಡಿ ಶಿವಣ್ನ ಖಾಕಿಯನ್ನು ರಂಜಿಸಿದರು. ಒಟ್ಟಿನಲ್ಲಿ ಅಲ್ಪಾವಧಿಯಲ್ಲಿ ನಡೆದ ಕಾರ್ಯಕ್ರಮ ಎಲ್ಲರ ಸಂಭ್ರಮ, ಭಾವುಕತೆಗೆ ಸಾಕ್ಷಿಯಾಯಿತು.

Share This Article
Leave a Comment

Leave a Reply

Your email address will not be published. Required fields are marked *