ನವದೆಹಲಿ: ಹಿಂದೂಗಳ ಪ್ರಮುಖ ಹಬ್ಬವಾದ ರಾಮನವಮಿ ಆಚರಣೆ ವೇಳೆ ಗುಜರಾತ್, ಮಧ್ಯಪ್ರದೇಶ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ನಡೆದ ಕೋಮು ಸಂಘರ್ಷದ ವಿರುದ್ಧ ರಾಷ್ಟ್ರೀಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ಗಾಂಧಿ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಸಹೋದರತ್ವ, ಶಾಂತಿ ಮತ್ತು ಸೌಹಾರ್ದತೆಯ ಇಟ್ಟಿಗೆಗಳಿಂದ ಕಟ್ಟಿದ ಈ ದೇಶದ ಪ್ರಗತಿಯ ಹಾದಿಯನ್ನು ಸುಗಮಗೊಳಿಸಲಾಗಿದೆ. ಆದರೆ, ದ್ವೇಷ, ಹಿಂಸೆ ಮತ್ತು ಬಹಿಷ್ಕಾರಗಳು ನಮ್ಮ ಪ್ರೀತಿಯ ದೇಶವನ್ನು ದುರ್ಬಲಗೊಳಿಸುತ್ತಿವೆ. ಹಾಗಾಗಿ ನಾವು ಎಲ್ಲರನ್ನೂ ಒಳಗೊಳ್ಳುವ ಭಾರತವನ್ನು ಸುರಕ್ಷಿತವಾಗಿರಿಸಲು ಒಟ್ಟಾಗಿ ನಿಲ್ಲಬೇಕಿದೆ ಎಂದು ಕರೆ ನೀಡಿದ್ದಾರೆ. ಇದನ್ನೂ ಓದಿ: ರಾಮನವಮಿ ರ್ಯಾಲಿ ವೇಳೆ ಕೋಮುಸಂಘರ್ಷ: 4 ರಾಜ್ಯಗಳಲ್ಲಿ ನಡೆದಿದ್ದೇನು?
ರಾಮನವಮಿ ವೇಳೆ ಹಿಂಸಾಚಾರ
ರಾಮನವಮಿ ಆಚರಣೆ ಪ್ರಯುಕ್ತ ಭಾನುವಾರ ಗುಜರಾತ್, ಮಧ್ಯಪ್ರದೇಶ, ಜಾರ್ಖಂಡ್ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ನಡೆಯುತ್ತಿದ್ದ ಮೆರವಣಿಗೆಯು ಹಿಂಸಾಚಾರಕ್ಕೆ ತಿರುಗಿದ್ದು, ಕೋಮು ಸಂಘರ್ಷ ಏರ್ಪಟ್ಟಿದೆ. ಇದೇ ವೇಳೆ 10 ಮಂದಿ ಗಾಯಗೊಂಡಿದ್ದು, ಓರ್ವ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ಮಧ್ಯಪ್ರದೇಶದ ಖರ್ಗಾನ್ನ ಕೆಲವು ಪ್ರದೇಶಗಳಲ್ಲಿ ಕರ್ಫ್ಯೂ ವಿಧಿಸಲಾಗಿದೆ. ರಾಮನವಮಿ ಮೆರವಣಿಗೆ ಸಂದರ್ಭದಲ್ಲಿ ಹಿಂಸಾಚಾರ ಮತ್ತು ಗಲಭೆ ನಡೆದಿದೆ. ಅನೇಕ ಕಡೆ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಸಂಘರ್ಷ ಭುಗಿಲೇಳುವುದನ್ನು ತಡೆಯಲು ಪೊಲೀಸರು ಬಿಗಿ ಭದ್ರತೆ ನಿಯೋಜಿಸಿದ್ದಾರೆ. ಕೋಮು ಸಂಘರ್ಷದ ವೇಳೆ ಕಲ್ಲುತೂರಾಟ ನಡೆದಿದ್ದು ಅಲ್ಲಲ್ಲಿ ಮನೆಗಳಿಗೆ ಬೆಂಕಿ ಬಿದ್ದಿದೆ. ಒಂದು ದೇವಸ್ಥಾನವನ್ನೂ ಧ್ವಂಸಮಾಡಲಾಗಿದೆ ಎಂದು ಅಲ್ಲಿನ ಪೊಲೀಸ್ ಅಧಿಕಾರಿಗಳು ತಿಳಿಸಿದ್ದರು.