ಹಾಸನ: ಪತ್ನಿಯ ಶೀಲ ಶಂಕಿಸಿದ ಪತಿ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ಹಾಸನದಲ್ಲಿ ನಡೆದಿದೆ.
ಹೊಳೆನರಸೀಪುರ ತಾಲೂಕಿನ ಕಾಳೇನಹಳ್ಳಿ ಕಾವಲು ಗ್ರಾಮದ ಶೀಲಾ ಅಲಿಯಾಸ್ ಕಾವ್ಯ(26)ಕೊಲೆಯಾದ ನತದೃಷ್ಟೆ. ಸೋಮವಾರ ರಾತ್ರಿ ಪತ್ನಿಯನ್ನು ಕೊಂದ ಆರೋಪಿ ಪತಿ ಶಂಕರ್ ಪೊಲೀಸರಿಗೆ ಶರಣಾಗಿದ್ದಾನೆ.
ಕಳೆದ ಐದು ವರ್ಷಗಳ ಹಿಂದೆ ಕಡುವಿನ ಹೊಸಹಳ್ಳಿ ಗ್ರಾಮದಿಂದ ಶೀಲಾಳನ್ನು ಶಂಕರ್ ಜೊತೆ ವಿವಾಹ ನಡೆಸಲಾಗಿತ್ತು. ಈ ದಂಪತಿಗೆ 4 ವರ್ಷದ ಹೆಣ್ಣು ಮಗು ಇದೆ. ಹೆಂಡತಿ ಯಾರೊಂದಿಗೋ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಶಂಕೆಯ ಮೇಲೆ ಆಗಾಗ್ಗೆ ಜಗಳವಾಡುತ್ತಿದ್ದ ಶಂಕರ್ ಇತ್ತೀಚೆಗಷ್ಟೇ 35 ಸಾವಿರ ರೂ. ಒಡವೆಯನ್ನು ಮಾರಿ ಮನೆಗೆ ಸಿಸಿ ಕ್ಯಾಮೆರಾ ಅಳವಡಿಸಿಕೊಂಡಿದ್ದನು.
ಘಟನೆ ಸಂಬಂಧ ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.