ದೇವಸ್ಥಾನದ ಬಳಿ ಸಿಗರೇಟ್ ಸೇದಬೇಡಿ ಎಂದಿದ್ದಕ್ಕೆ ಕೆನ್ನೆ ಕೊಯ್ದ ಪುಂಡರು

Public TV
1 Min Read

ಹಾಸನ: ಕೊರೊನಾ ಲಾಕ್‍ಡೌನ್ ನಡುವೆಯೂ ಹಾಸನದಲ್ಲಿ ಪುಂಡರು ಅಟ್ಟಹಾಸ ಮೆರೆದಿದ್ದು ಮನೆ ಬಳಿ ಗಲಾಟೆ ಮಾಡುತ್ತಿದ್ದ ಯುವಕರಿಗೆ ಬುದ್ಧಿವಾದ ಹೇಳಿದ್ದಕ್ಕೆ ಚಾಕುವಿನಿಂದ ಕೊಯ್ದು ಪರಾರಿಯಾಗಿದ್ದಾರೆ.

ಹಾಸನದ ಬೇಲೂರು ರಸ್ತೆಯ, ಈಶ್ವರ ದೇವಾಲಯ ಬಳಿ ಆಟೋಚಾಲಕ ನವೀನ್ ಮನೆಯಿದ್ದು, ಅಲ್ಲಿ ಮೂವರು ಯುವಕರು ಸಿಗರೇಟ್ ಸೇದುತ್ತಾ ಕೂಗಾಡುತ್ತಿದ್ದರು. ಇದನ್ನು ನೋಡಿದ ಆಟೋ ಚಾಲಕ ನವೀನ್, ಯಾರು ನೀವು, ಯಾಕೆ ಹೀಗೆ ಕೂಗಾಡುತ್ತಿದ್ದೀರಿ. ದೇವಾಲಯದ ಬಳಿ ಸಿಗರೇಟ್ ಸೇದಬಾರದು ಎಂದು ಬುದ್ಧಿವಾದ ಹೇಳಿದ್ದಾರೆ.

ಇದರಿಂದ ಕೆರಳಿದ ಯುವಕರು ನೀನ್ಯಾವನೋ ಕೇಳೋಕೆ ಎಂದು ಏಕಾಏಕಿ ಚಾಕು ಬೀಸಿದ್ದಾರೆ. ನವೀನ್ ತಕ್ಷಣ ಹಿಂದೆ ಸರಿದಿದ್ದರಿಂದ ಚಾಕು ಕುತ್ತಿಗೆ ಕೊಯ್ಯುವ ಬದಲು ಕೆನ್ನೆಯನ್ನು ಕೊಯ್ದುಕೊಂಡು ಮುಂದೆ ಸಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನವೀನ್ ಕೂಗಾಟದಿಂದ ತಕ್ಷಣ ಸ್ಥಳಕ್ಕೆ ಬಂದ ಸ್ಥಳೀಯರು ಆತನನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳೀಯರು ಬರುತ್ತಿದ್ದಂತೆ ಪುಂಡರು ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನೆ ಸಂಬಂಧ ಹಾಸನ ಪೆನ್ಷನ್ ಮೊಹಲ್ಲ ಠಾಣೆಗೆ ನವೀನ್ ದೂರು ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *