ಹಾಸನ: ಜಿಲ್ಲೆಯ ಬೇಲೂರಿನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತ ಸಭೆಯಲ್ಲಿ ಅಸಮಾಧಾನ ಭುಗಿಲೆದಿದ್ದು, ನಮ್ಮನ್ನು ತುಳಿಯುತ್ತಿರುವವರಿಗೆ ಹೇಗೆ ವೋಟ್ ಹಾಕೋದು ಎಂದು ಪಕ್ಷದ ಕಾರ್ಯಕರ್ತರು ಜೆಡಿಎಸ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಇಂದು ಬೇಲೂರಿನಲ್ಲಿ ಬ್ಲಾಕ್ ಕಾರ್ಯಕರ್ತರ ಸಭೆ ಏರ್ಪಡಿಸಲಾಗಿತ್ತು. ಈ ವೇಳೆ ಪಕ್ಷದ ಮುಖಂಡರ ಬಳಿ ತಮ್ಮ ಅಸಮಾಧಾನ ತೊಡಿಕೊಂಡ ಕಾರ್ಯಕರ್ತರು, ನಾವು ಸಮ್ಮಿಶ್ರ ಸರ್ಕಾರದಲ್ಲಿದ್ದರೂ ನಮ್ಮನ್ನು ತುಳಿಯುತ್ತಿದ್ದಾರೆ. ಅಂಥವರಿಗೆ ನಾವು ಮತ ಹಾಕುವುದು ಹೇಗೆ ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಸಚಿವ ಬಿ.ಶಿವರಾಂ, ಎಂಎಲ್ಸಿ ಗೋಪಾಲಸ್ವಾಮಿ ಸಮ್ಮುಖದಲ್ಲೇ ನಡೆದ ಭಿನ್ನಮತ ಸ್ಫೋಟಗೊಂಡಿದ್ದು, ಕೆಲ ಸಮಯ ಸಭೆ ಏರ್ಪಡಿಸಿದ್ದ ಒಕ್ಕಲಿಗರ ಸಮುದಾಯ ಭವನದಲ್ಲಿ ಅಸಮಾಧಾನಗೊಂಡಿದ್ದ ಕಾರ್ಯಕರ್ತರನ್ನು ಸಮಾಧಾನ ಪಡಿಸಲು ಮುಖಂಡರು ಸಹಾಸ ಪಟ್ಟರು. ಅಲ್ಲದೇ ಈ ವೇಳೆ ಕಾರ್ಯಕರ್ತರಿಂದ ಚುನಾವಣಾ ಅಭ್ಯರ್ಥಿ ಹಾಗೂ ಸಚಿವ ರೇವಣ್ಣ ವಿರುದ್ಧ ಘೋಷಣೆ ಕೂಡ ಕೇಳಿ ಬಂದವು. ಕೊಪಗೊಂಡಿದ್ದ ಕಾರ್ಯಕರ್ತರನ್ನು ಸಮಾಧಾನ ಪಡಿಸಲು ಹೈರಾಣದ ನಾಯಕರು ಸ್ವಲ್ಪ ಸಮಯದ ಬಳಿಕ ಸಭೆಯನ್ನು ಮುಂದುವರಿಸಿದರು.