21 ವರ್ಷಗಳ ಕನಸು ಇಂದು ನನಸು – ಹಾಸನ-ಬೆಂಗಳೂರು ರೈಲು ಮಾರ್ಗ ಉದ್ಘಾಟನೆ

Public TV
1 Min Read

ಹಾಸನ: ಸಾವಿರಾರು ಹಳ್ಳಿ- ನೂರಾರು ಪಟ್ಟಣ, ಲಕ್ಷಾಂತರ ಜನ ಕಾಯ್ತಿದ್ದ ಸಮಯ ಈಗ ಕೂಡಿ ಬಂದಿದೆ. ಬೆಂಗಳೂರು-ಕುಣಿಗಲ್-ಹಾಸನ ರೈಲುಮಾರ್ಗ ಇಂದು ಲೋಕಾರ್ಪಣೆಯಾಗಲಿದೆ. ಹೌದು. 21 ವರ್ಷಗಳ ಸುದೀರ್ಘವಾದ ಕನಸು ಇಂದು ನನಸಾಗ್ತಿದೆ. ಬೆಳಗ್ಗೆ 11 ಗಂಟೆಗೆ ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಸಿಎಂ ಸಿದ್ದರಾಮಯ್ಯನವರು ಹೊಸ ಮಾರ್ಗಕ್ಕೆ ಹಸಿರು ನಿಶಾನೆ ತೋರಲಿದ್ದಾರೆ.

ಯಾವ್ಯಾವ ಟ್ರೈನ್‍ಗಳು ಎಷ್ಟೆಷ್ಟು ಸಮಯಕ್ಕೆ ಓಡಾಡುತ್ತೆ?

ಹೊಸ ರೈಲು ಮಾರ್ಗದ ಉದ್ಘಾಟನೆಯಾದ್ರೂ ನಾಳೆಯಿಂದ ಪ್ರಯಾಣಿಕರಿಗೆ ರೈಲು ಸಂಚಾರ ಮುಕ್ತವಾಗಿರಲಿದೆ. ಇಂಟರ್‍ಸಿಟಿ ರೈಲು ಹಾಸನದಿಂದ ಬೆಳಗ್ಗೆ 6.15ಕ್ಕೆ ಹೊರಟು ಯಶವಂತಪುರಕ್ಕೆ ಬೆಳಗ್ಗೆ 9 ಗಂಟೆಗೆ ತಲುಪಲಿದೆ. ಯಶವಂತಪುರದಿಂದ ಸಂಜೆ 6.15ಕ್ಕೆ ಹೊರಟು ರಾತ್ರಿ 9 ಗಂಟೆಗೆ ಹಾಸನ ತಲುಪಲಿದೆ.

ಪ್ಯಾಸೆಂಜರ್ ರೈಲು ಯಶವಂತಪುರದಿಂದ ಬೆಳಗ್ಗೆ7.30ಕ್ಕೆ ಹೊರಟು ಹಾಸನಕ್ಕೆ 10.30ಕ್ಕೆ ತಲುಪಿದ್ರೆ, ಮತ್ತೆ ಹಾಸನದಿಂದ ಮಧ್ಯಾಹ್ನ 12ಕ್ಕೆ ಹೊರಟು ಮಧ್ಯಾಹ್ನ 3.30ಕ್ಕೆ ಯಶವಂತಪುರ ಬಂದು ಸೇರಲಿದೆ.

ಕುಡ್ಲಾ ಎಕ್ಸ್ ಪ್ರೆಸ್ ಯಶವಂತಪುರದಿಂದ ಸೋಮವಾರ-ಬುಧವಾರ-ಶುಕ್ರವಾರ- ಬೆಳಗ್ಗೆ 7ಕ್ಕೆ ಬಿಟ್ಟು ಹಾಸನ ಬೆಳಗ್ಗೆ 9.45ಕ್ಕೆ ಬರುತ್ತೆ. ಅದೇ ರೈಲು ಮಂಗಳೂರಿಗೆ ಹೋಗಲಿದ್ದು ಸಂಜೆ 4ಕ್ಕೆ ಸೇರುತ್ತೆ. ಇನ್ನು ಮಂಗಳೂರಿನಿಂದ ಮಂಗಳವಾರ-ಗುರುವಾರ-ಶನಿವಾರ-ಬೆಳಗ್ಗೆ 10.50ಕ್ಕೆ ಹೊರಟು-ರಾತ್ರಿ 7.50ಕ್ಕೆ ಯಶವಂತಪುರಕ್ಕೆ ಬಂದು ಸೇರಲಿದೆ.

ಟಿಕೆಟ್ ದರ?

ಟಿಕೆಟ್ ದರ ಕೂಡ ತುಂಬಾನೇ ಕಡಿಮೆ ನೀವೇನಾದ್ರೂ ಸೂಪರ್ ಫಾಸ್ಟ್ ರೈಲಲ್ಲಿ ಹೋದ್ರೆ 95 ರಿಂದ 110 ರೂ ಕೊಡ್ಬೇಕು. ಅದೇ ಪ್ಯಾಸೆಂಜರ್ ರೈಲಿನಲ್ಲಿ ಹೋದ್ರೆ 40 ರೂನಿಂದ 70 ರುಪಾಯಿ ನೀಡಬೇಕು.

ನಿಲ್ದಾಣಗಳು:

ಸೂಪರ್ ಫಾಸ್ಟ್ ರೈಲು ಬಿಟ್ಟು ಪ್ಯಾಸೆಂಜರ್ ರೈಲು ಹತ್ತಿದ್ರೆ ಚಿಕ್ಕಬಾಣವಾರ, ನೆಲಮಂಗಲ, ಕುಣಿಗಲ್, ಯಡಿಯೂರು, ಆದಿಚುಂಚನಗಿರಿ, ಶ್ರವಣಬೆಳಗೊಳ, ಚನ್ನರಾಯಪಟ್ಟಣ ತಲುಪಿ ಕೊನೆಗೆ ಹಾಸನದಲ್ಲಿ ಕೊನೆಯಾಗಲಿದೆ.

ಕುಣಿಗಲ್ ಮಾರ್ಗದಲ್ಲಿ ರೈಲು ಸಂಚಾರ ಶುರುವಾಗ್ತಿರೋದ್ರಿಂದ ವಾರದಲ್ಲಿ 3 ದಿನ ಅರಿಸಿಕೆರೆ-ಹಾಸನ ಮಾರ್ಗದ ರೈಲು ಓಡಾಟ ಬಂದ್ ಆಗಲಿದೆ. ಅದೇನೇ ಇರಲಿ 21 ವರ್ಷಗಳ ಹಿಂದೆ ದೇವೇಗೌಡರು ಹಾಕಿದ್ದ ಬುನಾದಿಗೆ ಈಗ ಹಸಿರು ನಿಶಾನೆ ಸಿಗ್ತಿದ್ದು, ಲಕ್ಷಾಂತರ ಜನರ ಕನಸು ಇವತ್ತು ಈಡೇರಲಿದೆ.

Share This Article
Leave a Comment

Leave a Reply

Your email address will not be published. Required fields are marked *