ಅಲ್ ಫಲಾಹ್ ವಿಶ್ವವಿದ್ಯಾಲಯವನ್ನು ತನ್ನ ಸುಪರ್ದಿಗೆ ಪಡೆದ ಹರಿಯಾಣ ಸರ್ಕಾರ – ಆಡಳಿತಾಧಿಕಾರಿಗಳ ನೇಮಕ

3 Min Read

ಚಂಡೀಗಢ: ದೆಹಲಿಯ ಕೆಂಪು ಕೋಟೆ ಬಳಿ ನಡೆದ ಸ್ಫೋಟದಲ್ಲಿ (Delhi Red Fort Blast) ಅಲ್-ಫಲಾಹ್ ವಿಶ್ವವಿದ್ಯಾಲಯದ (Al-Falah University) ಮೂವರು ವೈದ್ಯರ ಭಾಗಿಯಾಗಿದ್ದು ಗೊತ್ತಾದ ಬಳಿಕ ಅತಂತ್ರಕ್ಕೊಳಗಾಗಿದ್ದ ವಿವಿಯನ್ನು ಹರಿಯಾಣ (Haryana) ಸರ್ಕಾರ ತನ್ನ ಸುಪರ್ದಿಗೆ ಪಡೆದಿದೆ. ಇನ್ನು ಮುಂದೆ ಅಲ್-ಫಲಾಹ್ ವಿಶ್ವವಿದ್ಯಾಲಯವನ್ನು ಸರ್ಕಾರ ನೇಮಿಸಿದ ಆಡಳಿತಾಧಿಕಾರಿಗಳು ಮುನ್ನೆಡೆಸಲಿದ್ದಾರೆ.

ತನಿಖೆಯಲ್ಲಿ ವಿದ್ಯಾಲಯದ ನಿರ್ವಹಣೆಯಲ್ಲಿ ನಿಯಮಗಳ ಉಲ್ಲಂಘನೆಯಾಗಿದೆ ಮತ್ತು ಅಕ್ರಮಗಳು ಕಂಡುಬಂದಿವೆ. ಇದೇ ಕಾರಣಕ್ಕೆ ಹರಿಯಾಣ ಸರ್ಕಾರ ಮಧ್ಯಪ್ರವೇಶಿಸಿದೆ. ಹಿರಿಯ ಐಎಎಸ್ ಅಧಿಕಾರಿ ಅಮಿತ್ ಅಗರ್ವಾಲ್ ಅವರನ್ನು ಅಲ್-ಫಲಾಹ್‌ನಲ್ಲಿ ಆಡಳಿತಾಧಿಕಾರಿಯಾಗಿ ನೇಮಿಸಲಾಗಿದೆ. ಬುಧವಾರ (ಮಾ.18) ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಕೈಗಾರಿಕೆಗಳು ಮತ್ತು ವಾಣಿಜ್ಯ ಇಲಾಖೆಯ ಆಯುಕ್ತ ಮತ್ತು ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸುತ್ತಿರುವ ಅವರು ವಿಶ್ವವಿದ್ಯಾಲಯದ ಹಣಕಾಸು ಮತ್ತು ಆಡಳಿತ ವ್ಯವಹಾರಗಳನ್ನು ಅಹ ನೋಡಿಕೊಳ್ಳಲಿದ್ದಾರೆ. ಇದನ್ನೂ ಓದಿ: ದೆಹಲಿ ಸ್ಫೋಟ ಪ್ರಕರಣ – ಅಲ್ ಫಲಾಹ್‌ ವಿವಿಯ ಶಾಹಿನಾ ರೂಮ್‌ನಲ್ಲಿ 18 ಲಕ್ಷ ನಗದು ಪತ್ತೆ

ವಿಶ್ವವಿದ್ಯಾನಿಲಯದ 1,700 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಶೈಕ್ಷಣಿಕ ಕೆಲಸಕ್ಕಾಗಿ ಫರಿದಾಬಾದ್‌ನ ಜೆಸಿ ಬೋಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದಿಂದ ಹೆಚ್ಚುವರಿ ಹುದ್ದೆಗಳಲ್ಲಿ ಸೇವೆ ಸಲ್ಲಿಸಲು ತಂಡವನ್ನು ನಿಯೋಜಿಸಲಾಗಿದೆ. ಜೆಸಿ ಬೋಸ್ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಅಜಯ್ ರಂಗ ಅವರು ಉಪಕುಲಪತಿಯಾಗಿಯೂ ಸೇವೆ ಸಲ್ಲಿಸಲಿದ್ದಾರೆ.

ಶಾಹೀನ್ ಶಾಹಿದ್

ಅಲ್-ಫಲಾಹ್‌ನ ಪರೀಕ್ಷಾ ನಿಯಂತ್ರಕರಾದ ರಾಜೀವ್ ಕುಮಾರ್ ಸಿಂಗ್ ಅವರು ಅದೇ ಹುದ್ದೆಯಲ್ಲಿ ಮುಂದುವರೆಯಲಿದ್ದಾರೆ. ರವಿ ಕುಮಾರ್ ಶರ್ಮಾ ಅವರನ್ನು ಮುಖ್ಯ ಹಣಕಾಸು ಮತ್ತು ಲೆಕ್ಕಪತ್ರ ಅಧಿಕಾರಿಯಾಗಿ ನೇಮಿಸಲಾಗಿದೆ. ಮೇಹಾ ಶರ್ಮಾ ಅವರು ರಿಜಿಸ್ಟ್ರಾರ್ ಆಗಿ ಸೇವೆ ಸಲ್ಲಿಸಲಿದ್ದಾರೆ. ಅಭಿನವ್ ಮತ್ತು ರಾಜ್‌ದೀಪ್ ಅವರನ್ನು ಉಪಕುಲಪತಿ ಮತ್ತು ರಿಜಿಸ್ಟ್ರಾರ್ ಅಡಿಯಲ್ಲಿ ಆಡಳಿತಾತ್ಮಕ ಕರ್ತವ್ಯಗಳನ್ನು ಸಹ ನಿಯೋಜಿಸಲಾಗಿದೆ.

ವಿವಿಯ ಬೋಧನೆಗೆ ಯಾವುದೇ ಅಡ್ಡಿಯಾಗುವುದಿಲ್ಲ. ಅಧ್ಯಾಪಕರು ಬದಲಾಗದೆ ಅಲ್ಲಿಯೇ ಉಳಿಯಲಿದ್ದಾರೆ. ಈಗ ನಿಯೋಜಿಸಲಾದ ತಂಡವು ವಿಶ್ವವಿದ್ಯಾಲಯದ ಹಿತಾಸಕ್ತಿಗಾಗಿ ದೈನಂದಿನ ವ್ಯವಹಾರಗಳನ್ನು ನಿರ್ವಹಿಸುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಖಾಸಗಿ ವಿಶ್ವವಿದ್ಯಾಲಯಗಳ ಮೇಲ್ವಿಚಾರಣೆಯನ್ನು ಬಿಗಿಗೊಳಿಸಲು ಡಿಸೆಂಬರ್ 22 ರಂದು ಹರಿಯಾಣ ವಿಧಾನಸಭೆ ಕಠಿಣ ನಿಯಮಗಳನ್ನು ಜಾರಿಗೊಳಿಸಿದೆ. ಹರಿಯಾಣ ಖಾಸಗಿ ವಿಶ್ವವಿದ್ಯಾಲಯಗಳ (ತಿದ್ದುಪಡಿ) ಮಸೂದೆಯು ಸೆಕ್ಷನ್ 44ಕ್ಕೆ ಹೊಸ ಷರತ್ತು ಸೇರಿಸಿದೆ. ದುರಾಡಳಿತ, ಸುಳ್ಳು ಅಥವಾ ದಾರಿತಪ್ಪಿಸುವ ಮತ್ತು ಶೈಕ್ಷಣಿಕ ಮತ್ತು ನಿಯಂತ್ರಕ ಮಾನದಂಡಗಳನ್ನು ಪೂರೈಸುವಲ್ಲಿ ವಿಫಲವಾದರೆ ದಂಡವನ್ನು ವಿಧಿಸಲಾಗುತ್ತದೆ. ಈ ನಿಯಮದ ಪ್ರಕಾರ ಸರ್ಕಾರ ಈಗ ನಿರ್ದಿಷ್ಟ ಕೋರ್ಸ್‌ಗಳ ಪ್ರವೇಶವನ್ನು ನಿಲ್ಲಿಸಬಹುದಾಗಿದೆ. ನಿಯಮ ಉಲ್ಲಂಘಿಸಿದರೆ 10 ಲಕ್ಷ ರೂ.ಗಳಿಂದ 1 ಕೋಟಿ ರೂ.ಗಳವರೆಗೆ ದಂಡ ವಿಧಿಸಬಹುದು. ಕೆಲವು ಪ್ರಕರಣಗಳಲ್ಲಿ 30 ದಿನಗಳಲ್ಲಿ ಸರಿಪಡಿಸುವ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಹಂತಹಂತವಾಗಿ ವಿಸರ್ಜನೆಗೆ ಆದೇಶಿಸಬಹುದು.

ಕೆಂಪು ಕೋಟೆಯ ಬಳಿ ಸ್ಫೋಟ ಕೇಸ್‌
ಕಳೆದ ವರ್ಷ ನವೆಂಬರ್ 10 ರಂದು ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಉಮರ್ ಉನ್ ನಬಿ ಕೆಂಪು ಕೋಟೆಯ ಬಳಿ ಸ್ಫೋಟಕಗಳಿಂದ ತುಂಬಿದ ಕಾರನ್ನು ಸ್ಫೋಟಿಸಿದ್ದ. ಈ ದುರಂತದಲ್ಲಿ 15 ಜನ ಸಾವಿಗೀಡಾಗಿದ್ದರು. ಈ ಬಗ್ಗೆ ತನಿಖೆ ನಡೆಸಿದಾಗ ಮತ್ತಿಬ್ಬರು ಅಧ್ಯಾಪಕ / ವೈದ್ಯರಾದ ಮುಜಮ್ಮಿಲ್ ಅಹ್ಮದ್ ಗನೈ ಮತ್ತು ಶಾಹೀನ್ ಶಾಹಿದ್ ಪಾತ್ರ ಇರುವುದು ಬಯಲಾಗಿತ್ತು. ಬಳಿಕ ಈ ಇಬ್ಬರನ್ನು ಬಂಧಿಸಲಾಯಿತು. ಪ್ರತ್ಯೇಕ ಪ್ರಕರಣದಲ್ಲಿ ಅಲ್-ಫಲಾಹ್ ಗ್ರೂಪ್‌ನ ಸ್ಥಾಪಕ ಮತ್ತು ಅಧ್ಯಕ್ಷನನ್ನು ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಬಂಧಿಸಿದೆ. 2013 ರಲ್ಲಿ ಖಾಸಗಿ ವಿಶ್ವವಿದ್ಯಾಲಯ ಕಾಯ್ದೆಯಡಿಯಲ್ಲಿ ಸ್ಥಾಪನೆಯಾದ ಅಲ್-ಫಲಾಹ್ ಇನ್ನೂ NAAC ಮಾನ್ಯತೆಯನ್ನು ಪಡೆದಿಲ್ಲ. ಇದನ್ನೂ ಓದಿ: ಅಲ್ ಫಲಾಹ್ ವಿವಿಯ 17ನೇ ಬಿಲ್ಡಿಂಗ್‌, ರೂಮ್‌ ನಂ.13ರ ರಹಸ್ಯ ಬಹಿರಂಗ – ʻಆಪರೇಷನ್‌ ಡೈರಿʼಯಲ್ಲಿ ಏನಿತ್ತು?

Share This Article