ಚಂಡೀಗಢ: ವಿದ್ಯಾರ್ಥಿಯೊಬ್ಬ ಕಾಲೇಜ್ ಸ್ಟಾಫ್ ರೂಂಗೆ ನುಗ್ಗಿ ಸಹಾಯಕ ಪ್ರಾಧ್ಯಾಪಕರೊಬ್ಬರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ಹರ್ಯಾಣದಲ್ಲಿ ನಡೆದಿದೆ.
ಹರ್ಯಾಣದ ಸೋನೆಪತ್ ನ ಪಿಪ್ಲಿ ಹಳ್ಳಿಯಲ್ಲಿನ ಶಹೀದ್ ದಲ್ಬಿರ್ ಸಿಂಗ್ ಕಾಲೇಜ್ ಕ್ಯಾಂಪಸ್ ನಲ್ಲಿ ಮಂಗಳವಾರ ಈ ಘಟನೆ ನಡೆದಿದೆ. ರಾಜೇಶ್ ಮಲ್ಲಿಕ್ ವಿದ್ಯಾರ್ಥಿಯಿಂದ ಹತ್ಯೆಯಾದ ಸಹಾಯಕ ಪ್ರಾಧ್ಯಾಪಕ. ಆರೋಪಿ ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಪ್ರಾಧ್ಯಾಪಕ ಮಲ್ಲಿಕ್ ಜೊತೆ ಸಹಪಾಠಿ ರಾಜೇಶ್ ಸ್ಟಾಫ್ ರೂಮಿನಲ್ಲಿ ಕುಳಿತ್ತಿದ್ದರು. ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ವಿದ್ಯಾರ್ಥಿ ಏಕಾಏಕಿ ನಾಲ್ಕು ಬಾರಿ ಗುಂಡು ಹಾರಿಸಿದ್ದಾನೆ. ಆತ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬಂದಿದ್ದ ಕಾರಣ ಅಲ್ಲಿದ್ದ ಯಾರು ಅವನನ್ನು ಗುರುತಿಸಲು ಸಾಧ್ಯವಾಗಿಲ್ಲ. ತಕ್ಷಣ ಗುಂಡಿನ ಶಬ್ಧ ಕೇಳಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ದಂಗಾಗಿದ್ದಾರೆ ಎಂದು ರಾಜೇಶ್ ತಿಳಿಸಿದ್ದಾರೆ.
ಆರೋಪಿ ವಿದ್ಯಾರ್ಥಿ ಗುಂಡು ಹೊಡೆದ ತಕ್ಷಣ ಸ್ಥಳದಿಂದ ಪರಾರಿಯಾಗಿದ್ದಾನೆ. ಬಳಿಕ ರಾಜೇಶ್ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅಷ್ಟರಲ್ಲಿಯೇ ಪ್ರಾಧ್ಯಾಪರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಘಟನೆ ಸುಮಾರು ಬೆಳಿಗ್ಗೆ 9 ಗಂಟೆಯಲ್ಲಿ ನಡೆದಿದ್ದು, ಆರೋಪಿಗಾಗಿ ಶೋಧಕಾರ್ಯ ಶುರುವಾಗಿದೆ. ಪ್ರಾಧ್ಯಾಪಕರ ಶವವನ್ನು ಮರಣೋತ್ತರ ಪರೀಕ್ಷೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿ ವೀರೇಂದರ್ ಸಿಂಗ್ ಹೇಳಿದರು.