ಸೂಪರ್‌-8 ಗೂ ಮುನ್ನ ಟೀಂ ಇಂಡಿಯಾಕ್ಕೆ ಗಾಯದ ಚಿಂತೆ – ಪ್ರಾಕ್ಟೀಸ್‌ ವೇಳೆ ಪಾಂಡ್ಯ ಮಾಡಿದ್ದೇನು?

1 Min Read

ಅಹಮದಾಬಾದ್‌: ಈ ಬಾರಿಯ ಟಿ20 ವಿಶ್ವಕಪ್‌ (T20 World Cup) ಟೂರ್ನಿಯ ಅಸಲಿ ಆಟ ಫೆ.22 ರಿಂದ ಶುರುವಾಗಲಿದೆ. ವಿಶ್ವಕಪ್‌ನ ಸೂಪರ್‌-8 ಹಂತ ಭಾನುವಾರದಿಂದ ಶುರುವಾಗಲಿದ್ದು, ಮೊದಲ ಪಂದ್ಯದಲ್ಲಿ ಭಾರತ – ದಕ್ಷಿಣ ಆಫ್ರಿಕಾ (South Africa) ತಂಡಗಳು ಮುಖಾಮುಖಿಯಾಗುತ್ತಿವೆ. ಭಾರತ ಪ್ರಶಸ್ತಿ ಸುತ್ತಿಗೆ ತಲುಪಬೇಕಾದ್ರೆ ಮುಂದಿನ ಎಲ್ಲಾ ಪಂದ್ಯಗಳನ್ನು ಗೆಲ್ಲಲೇಬೇಕಾದ ಅನಿವಾರ್ಯತೆಯಿದೆ. ಈ ನಿರ್ಣಾಯಕ ಹೊತ್ತಿನಲ್ಲೇ ತಂಡಕ್ಕೆ ಗಾಯದ ಸಮಸ್ಯೆ ಎದುರಾಗಿದೆ.

ವೇಗಿ ಜಸ್ಪ್ರೀತ್‌ ಬುಮ್ರಾ, ಅಭಿಷೇಕ್‌ ಶರ್ಮಾ ಅನಾರೋಗ್ಯ ಕಾರಣದಿಂದ ತಲಾ ಒಂದು ಪಂದ್ಯಕ್ಕೆ ಗೈರಾಗಿದ್ದರು. ಇದಕ್ಕೂ ಮುನ್ನ ಹರ್ಷಿತ್‌ ರಾಣಾ ಗಾಯದ ಸಮಸ್ಯೆಯಿಂದ ಟೂರ್ನಿಯಿಂದಲೇ ಹೊರಗುಳಿದರು. ವಾಷಿಂಗ್ಟನ್‌ ಸುಂದರ್‌ ಕೂಡ ಆಡಲಿಲ್ಲ. ಇದೀಗ ಮೊಹಮ್ಮದ್‌ ಸಿರಾಜ್‌ (Mohammad Siraj) ಕೂಡಾ ಗಾಯಕ್ಕೆ ತುತ್ತಾಗಿದ್ದಾರೆ.

ದಕ್ಷಿಣ ಆಫ್ರಿಕಾ ತಂಡವನ್ನು ಭಾನುವಾರ ಎದುರಿಸಲಿರುವ ಟಿಂ ಇಂಡಿಯಾ (Team India) ಅಹಮದಾಬಾದ್‌ನಲ್ಲಿ ಅಭ್ಯಾಸ ಮಾಡುತ್ತಿದೆ. ಮೋದಿ ಸ್ಟೇಡಿಯಂನಲ್ಲಿ ಶುಕ್ರವಾರ ಸಂಜೆ‌ ಪ್ರಾಕ್ಟೀಸ್‌ ಮಾಡುವಾಗ ಹಾರ್ದಿಕ್‌ ಪಾಂಡ್ಯ ಹೊಡೆದ ಬಲವಾದ ಹೊಡೆತವೊಂದು ಸಿರಾಜ್‌ ಅವರ ಎಡ ಮೊಣಕಾಲಿಗೆ ಬಿದ್ದು ತೀವ್ರ ಪೆಟ್ಟಾಗಿದೆ. ಘಟನೆ ಬಳಿಕ ಸಿರಾಜ್‌ ಹೆಚ್ಚು ಪ್ರಾಕ್ಟೀಸ್‌ ಮಾಡಲು ಸಾಧ್ಯವಾಗದೇ ನೋವಿನಿಂದಲೇ ನೆಟ್ಸ್‌ನಿಂದ ಹೊರನಡೆದ್ದಾರೆ.

ಈ ಆವೃತ್ತಿಯಲ್ಲಿ ಸಿರಾಜ್‌ ಯುಎಸ್‌ಎ ವಿರುದ್ಧ ಆರಂಭಿಕ ಪಂದ್ಯವನ್ನ ಮಾತ್ರ ಆಡಿದ್ದು, ಮೂರು ವಿಕೆಟ್‌ ಪಡೆದಿದ್ದಾರೆ. ವೇಗಿ ಸ್ಥಾನದಲ್ಲಿ ಅರ್ಷ್‌ದೀಪ್‌ ಸಿಂಗ್‌ ಹೆಚ್ಚುವರಿ ಆಯ್ಕೆಯಾಗಿದ್ದರೂ, ಸಿರಾಜ್‌ ಅಲಭ್ಯರಾದ್ರೆ, ಅದು ಫಲಿತಾಂಶದ ಮೇಲೆ ಪರಿಣಾಮ ಬೀರಬಹುದೇ ಎಂಬುದು ಚಿಂತೆಯಾಗಿದೆ.

ಆದ್ರೆ ಈವರೆಗೆ ಸಿರಾಜ್‌ ಅಲಭ್ಯತೆಯ ಬಗ್ಗೆ ಟೀಂ ಇಂಡಿಯಾ ಬೌಲಿಂಗ್ ಕೋಚ್ ಮೋರ್ನೆ ಮೋರ್ಕೆಲ್ ಆಗಲಿ, ಮುಖ್ಯಕೋಚ್‌ ಗಂಭೀರ್‌ ಆಗಲಿ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ಹೀಗಾಗಿ ಸಿರಾಜ್‌ ಸೂಪರ್‌-8 ನಲ್ಲಿ ಆಡ್ತಾರಾ ಇಲ್ವಾ ಎಂಬುದನ್ನ ಕಾದುನೋಡಬೇಕಿದೆ.

Share This Article