ಮುಂದೆ ಜನರ ಸೇವೆ ಮಾಡ್ತೇನೆ – ರಾಜಕೀಯ ಸೇರುವ ಬಗ್ಗೆ ಭಜ್ಜಿ ಸುಳಿವು

Public TV
1 Min Read

ಚಂಡೀಗಢ: ಪಂಜಾಬ್ ವಿಧಾನಸಭಾ ಚುನಾವಣೆಗೆ ಈಗಾಗಲೇ ರಾಜಕೀಯ ಪಕ್ಷಗಳು ಕಸರತ್ತು ನಡೆಸುತ್ತಿತ್ತು. ಘಟಾನುಘಟಿ ನಾಯಕರು ಪಕ್ಷವನ್ನು ತೊರೆದು ಬೇರೆ ಪಕ್ಷವನ್ನು ಸೇರುವುದು ಸಾಮಾನ್ಯವಾಗಿದೆ. ಈ ಮಧ್ಯೆ ಶುಕ್ರವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಹೇಳಿದ ಹರ್ಭಜನ್ ಸಿಂಗ್ ಸಹ ರಾಜಕೀಯ ಸೇರುವ ಒಲವು ವ್ಯಕ್ತಪಡಿಸಿದ್ದಾರೆ.

ಯಾವ ಪಕ್ಷವನ್ನು ಸೇರುತ್ತೇನೆ ಎಂದು ಅಧಿಕೃತವಾಗಿ ಹೇಳದೇ ಇದ್ದರೂ ರಾಜಕೀಯದ ಮೂಲಕ ಜನರ ಸೇವೆ ಮಾಡಬಹುದು ಎಂದು ತಿಳಿಸಿದ್ದಾರೆ.

ಹರ್ಭಜನ್ ಸಿಂಗ್ ಅವರು ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಅವರು ಪಂಜಾಬ್‌ನಲ್ಲಿ ಕಾಂಗ್ರೆಸ್ ಪಕ್ಷ ಸೇರುತ್ತಾರೆ ಎಂಬ ಉಹಾಪೋಹಗಳು ಎಲ್ಲೆಡೆ ಹರಡಿತ್ತು. ಈ ಕುರಿತು ಹರ್ಭಜನ್ ಸಿಂಗ್ ನನಗೆ ಎಲ್ಲಾ ಪಕ್ಷದ ರಾಜಕಾರಣಿಗಳು ಗೊತ್ತು. ನಾನು ಪಂಜಾಬ್‌ಗೆ, ರಾಜಕೀಯ ಅಥವಾ ಇನ್ನಾವುದೋ ರೀತಿಯಲ್ಲಿ ಸೇವೆ ಸಲ್ಲಿಸುತ್ತೇನೆ. ಆದರೇ ನಾನು ಇನ್ನೂ ಸರಿಯಾದ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ಸಜ್ಜು – ಡಿ.26ಕ್ಕೆ ಆರಂಭವಾಗುವುದರ ಮಹತ್ವವೇನು?

ಹರ್ಭಜನ್ ಇತ್ತೀಚೆಗೆ ಪಂಜಾಬ್‌ನ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಅವರನ್ನು ಭೇಟಿಯಾದ ನಂತರ ಈ ರೀತಿಯ ಊಹಾಪೋಹಗಳು ಹುಟ್ಟಿಕೊಂಡಿದೆ.

ಕೆಲ ದಿನಗಳ ಹಿಂದೆ ಬಿಜೆಪಿ ನಾಯಕರು ಭೇಟಿಯಾಗಿ ಪಕ್ಷ ಸೇರುವಂತೆ ಮನವಿ ಮಾಡಿದ್ದರು ಎಂಬ ಸುದ್ದಿಗೆ, ಇದೊಂದು ಸುಳ್ಳು ಸುದ್ದಿ ಎಂದು ಹೇಳಿ ತಳ್ಳಿಹಾಕಿದ್ದಾರೆ.

ಈ ಕುರಿತು ಪ್ರಮಾಣಿಕವಾಗಿ ಹೇಳುವುದಾದರೆ ನನಗೆ ಏನಾಗಿದೆ ಎಂದು ತಿಳಿದಿಲ್ಲ. ನಾನು ಯಾವ ದಿಕ್ಕಿನಲ್ಲಿ ಹೋಗಲು ಬಯಸುತ್ತೇನೆ ಎಂಬುವುದನ್ನು ತಿಳಿಯಲು ನನಗೆ ಒಂದೆರಡು ದಿನಗಳು ಬೇಕಾಗುತ್ತದೆ. ನಾನು ಒಂದು ವೇಳೆ ರಾಜಕೀಯಕ್ಕೆ ಸೇರಿದರೆ ಯಾವ ರೀತಿಯಲ್ಲಿ ಜನರಿಗೆ ಸಹಾಯ ಮಾಡಬೇಕು ಎಂಬುವುದು ನನ್ನ ಯೋಚನೆಯ ಮುಖ್ಯ ಗುರಿಯಾಗಿದೆ ಹಾಗೂ ಇದರ ಬಗ್ಗೆ ನಾನು ಸರಿಯಾದ ಲೆಕ್ಕಾಚಾರ ಮಾಡಬೇಕಾಗಿದೆ ಎಂದು ಹರ್ಭಜನ್ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಶ್ರೀಮಂತ ಬೇಡ, ಕಷ್ಟದಲ್ಲಿರುವವನ ಜೊತೆ ಡೇಟಿಂಗ್ ಮಾಡಲು ಇಷ್ಟ: ಹರ್ನಾಜ್ ಸಂಧು

Share This Article
Leave a Comment

Leave a Reply

Your email address will not be published. Required fields are marked *