ರಜೆ ಹಾಕಿದ್ದಕ್ಕೆ ಕಾಲೇಜಿನಲ್ಲಿ ಅವಮಾನ – ಕಿರುಕುಳ ತಾಳಲಾರದೇ ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ

1 Min Read

ಆನೇಕಲ್: ಕಣ್ಣು ನೋವಿನಿಂದ ಕಾಲೇಜಿಗೆ ರಜೆ ಹಾಕಿದ್ದಕ್ಕೆ ಕ್ಲಾಸ್‌ನಲ್ಲಿ ಅವಮಾನ ಮಾಡಿ, ಕಿರುಕುಳ ನೀಡಿದ್ದನ್ನು ತಾಳಲಾರದೇ ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು (Bengaluru) ಹೊರವಲಯದ ಆನೇಕಲ್ (Anekal) ತಾಲೂಕಿನ ಚಂದಾಪುರದಲ್ಲಿ ನಡೆದಿದೆ.

ಮೃತಳನ್ನು ಪರಿಮಳ-ಭೋದೆವಯ್ಯ ದಂಪತಿಯ ಮಗಳು ಯಶಸ್ವಿನಿ(23) ಎಂದು ಗುರುತಿಸಲಾಗಿದ್ದು, ಬೊಮ್ಮನಹಳ್ಳಿ ಖಾಸಗಿ ಕಾಲೇಜಿನ Oral Medicine and Radiology ವಿಭಾಗದಲ್ಲಿ 3ನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ. ಇದನ್ನೂ ಓದಿ: ವಸತಿ ಸಚಿವರ ಪಿಎಸ್‌ ನಿಂದಲೇ ಅಕ್ರಮ ರೆಸಾರ್ಟ್‌ ನಿರ್ಮಾಣ; ಭಾರೀ ಆಕ್ರೋಶ

ಮೃತ ವಿದ್ಯಾರ್ಥಿನಿ ಬುಧವಾರ (ಜ.7) ಕಣ್ಣು ನೋವಿನಿಂದಾಗಿ ಕಾಲೇಜಿಗೆ ರಜೆ ಹಾಕಿದ್ದರು. ಮಾರನೇ ದಿನ ಕಾಲೇಜಿಗೆ ಹೋದಾಗ ಕಣ್ಣಿಗೆ ಯಾವ ಕಣ್ಣಿನ ಡ್ರಾಪ್ಸ್ ಬಳಸಿದೆ? ಎಷ್ಟು ಹನಿ ಡ್ರಾಪ್ಸ್ ಹಾಕಿಕೊಂಡೆ? ಇಡೀ ಬಾಟಲ್ ಸುರಿದುಕೊಂಡ್ಯಾ ಎಂದು ವಿದ್ಯಾರ್ಥಿಗಳ ಮುಂದೆ ಉಪನ್ಯಾಸಕರು ಅವಮಾನಿಸಿದ್ದರು. ಅದಾದ ಬಳಿಕ ಸೆಮಿನಾರ್‌ಗೆ ಅವಕಾಶ ನೀಡಿರಲಿಲ್ಲ. ಜೊತೆಗೆ ರೆಡಿಯಾಲಜಿ ಕೇಸ್ ಕೂಡ ನೀಡದೇ ಕಿರುಕುಳ ನೀಡಿದ್ದರು ಎಂದು ಆರೋಪ ಕೇಳಿಬಂದಿದೆ.

ಕಾಲೇಜಿಗೆ ರಜೆ ಹಾಕಿದ್ದಕ್ಕೆ ನನ್ನ ಮಗಳಿಗೆ ಅವಮಾನಿಸಿದ್ದಾರೆ. ಅವಳ ಕಣ್ಣಿಗೆ ಗಾಯ ಆಗಿತ್ತು. ಹೀಗಾಗಿ ನನಗೆ ಹೇಳಿಯೇ ರಜೆ ತೆಗೆದುಕೊಂಡಿದ್ದಾಳೆ. ಯಾವ ಡ್ರಾಪ್ಸ್ ಹಾಕಿದೆ ಅಂತೆಲ್ಲ ವಿದ್ಯಾರ್ಥಿಗಳ ಮುಂದೆ ಕೇಳಿ, ಅವಮಾನಿಸಿದ್ದಾರೆ. ಯಾಕೆ ಅವರಿಗೆ ಮಕ್ಕಳು ಇಲ್ವಾ? ಅವಳು ಇದನ್ನೆಲ್ಲ ನನಗೆ ಹೇಳಿದ್ದಾಳೆ. ಉಪನ್ಯಾಸಕರು ಮಾತ್ರವಲ್ಲದೇ ಕಾಲೇಜು ಆಡಳಿತ ಮಂಡಳಿ ಕೂಡ ಕಿರುಕುಳ ನೀಡಿದ್ದಾರೆ. ಹೀಗಾಗಿ ನನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತ ವಿದ್ಯಾರ್ಥಿನಿ ತಾಯಿ ಆರೋಪಿಸಿದ್ದಾರೆ.

ಟಾರ್ಚರ್ ನೀಡಿದ ಪ್ರಾಂಶುಪಾಲ ಹಾಗೂ ಅವಮಾನಿಸಿದ ಉಪನ್ಯಾಸಕ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಮೃತ ವಿದ್ಯಾರ್ಥಿನಿಯ ಸಹಪಾಠಿಗಳು ಶವಾಗಾರದ ಮುಂದೆ ಪ್ರತಿಭಟನೆ ನಡೆಸಿದ್ದಾರೆ.ಇದನ್ನೂ ಓದಿ: ರೈತನಿಗೆ ಪರಿಹಾರ ವಿಳಂಬ – ಜಿಲ್ಲಾಧಿಕಾರಿ ಕಾರು ಜಪ್ತಿ

Share This Article