ಅರೆಬೆತ್ತಲಾಗಿ ಮತ್ತೆ ಮರವೇರಿ ಪ್ರತಿಭಟನೆ ನಡೆಸಿದ ದಿಡ್ಡಳ್ಳಿ ನಿರಾಶ್ರಿತ ಮಹಿಳೆ!

Public TV
1 Min Read

ಕೊಡಗು: ದಿಡ್ಡಳ್ಳಿ ಆದಿವಾಸಿ ಮಹಿಳಾ ಮುಖಂಡೆ ಮುತ್ತಮ್ಮ ಅವರು ಅರೆಬೆತ್ತಲಾಗಿ ಮರವೇರಿ ಪ್ರತಿಭಟನೆ ನಡೆಸ್ತಾ ಇದ್ದಾರೆ. ಆದಿವಾಸಿ ಜನರ ಗುಡಿಸಲುಗಳನ್ನು ತೆರವು ಮಾಡಿದ್ರೆ ಮರದಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮುತ್ತಮ್ಮ ಬೆದರಿಸ್ತಿದ್ದಾರೆ.

ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ದಿಡ್ಡಳ್ಳಿಯ ದೇವಮಚ್ಚಿ ಮೀಸಲು ಅರಣ್ಯದೊಳಗೆ ಅಕ್ರಮ ಪ್ರವೇಶ ಮಾಡಿ ಗುಡಿಸಲು ನಿರ್ಮಿಸಿದ್ದ 600ಕ್ಕೂ ಅಧಿಕ ಆದಿವಾಸಿ ಜನರ ಕುಟುಂಬಗಳ ಗುಡಿಸಲು ಕಾರ್ಯಾಚರಣೆ ಬಿಗಿ ಪೊಲೀಸ್ ಬಂದೋಬಸ್ತಿನಲ್ಲಿ ಅರಣ್ಯ ಇಲಾಖೆ ಆರಂಭಿಸಿದೆ. ತೆರವು ಕಾರ್ಯಾಚರಣೆಯಲ್ಲಿ ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗಳನ್ನು ಬಳಸಿಕೊಳ್ಳಲಾಗಿದೆ.

ನಮ್ಮ ಕುಟುಂಬಗಳನ್ನು ಇಲ್ಲಿಂದ ತೆರವುಗೊಳಿಸಿದರೇ ಮರದ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಂದು ಮುತ್ತಮ್ಮ ಹೇಳುತ್ತಾರೆ. ಸ್ಥಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬರಬೇಕು. ನಮ್ಮ ಕಷ್ಟಗಳನ್ನು ಆಲಿಸಬೇಕು ಎಂದು ಮುತ್ತಮ್ಮ ಪಟ್ಟು ಹಿಡಿದಿದ್ದಾರೆ. ಸ್ಥಳದಲ್ಲಿ ಸಾವಿರಾರು ನಿರಾಶ್ರಿತರು ಸೇರಿದ್ದು ಎಲ್ಲರ ಆಕ್ರಂದನ ಮುಗಿಲು ಮುಟ್ಟಿದೆ.

ಡಿಸಂಬರ್‍ನಿಂದ ಭೂಮಿ ಮತ್ತು ವಸತಿಗೆ ಆಗ್ರಹಿಸಿ ರಸ್ತೆ ಬದಿಯಲ್ಲಿ ಪ್ರತಿಭಟನೆ ನಡೆಸ್ತಾ ಇದ್ದ ಆದಿವಾಸಿ ಜನರು ಏಪ್ರಿಲ್ 28ರಂದು ಜಿಲ್ಲಾಧಿಕಾರಿಗಳು ನಡೆಸಿದ ಸಂಧಾನ ಸಭೆಯಲ್ಲಿ ಜಿಲ್ಲಾಡಳಿತ ಗೊತ್ತುಮಾಡಿದ ಸ್ಥಳಕ್ಕೆ ಒಪ್ಪಿದ್ದರು. ಬಳಿಕ ಜಿಲ್ಲಾಡಳಿತ ಗೊತ್ತುಮಾಡಿರೋ ಸ್ಥಳಕ್ಕೆ ತೆರಳಲ್ಲ ಎನ್ನುವ ಮೂಲಕ ಜಿಲ್ಲಾಡಳಿತಕ್ಕೆ ದಿಡ್ಡಳ್ಳಿ ಆದಿವಾಸಿ ಜನರು ಟಾಂಗ್ ನೀಡಿದ್ದರು. ಅಲ್ಲದೇ ಕಳೆದ 5 ದಿನಗಳ ಹಿಂದೆ ರಸ್ತೆ ಬದಿಯಿದ್ದ ಗುಡಿಸಲುಗಳನ್ನು ದೇವಮಚ್ಚಿ ಮೀಸಲು ಅರಣ್ಯದೊಳಗೆ ಶಿಫ್ಟ್ ಮಾಡಿ ಹೋರಾಟ ತೀವ್ರಗೊಳಿಸಿದ್ದರು.

ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಮೈಕ್‍ನಲ್ಲಿ ಸ್ಥಳ ಬಿಟ್ಟು ತೆರಳುವಂತೆ ಮನವಿ ಮಾಡುತ್ತಿದ್ದಾರೆ. ಇಷ್ಟು ದಿನ ರಸ್ತೆ ಬದಿಯಲ್ಲಿ ಗುಡಿಸಲು ನಿರ್ಮಿಸಿ ಹೋರಾಟ ನಡೆಸ್ತಾ ಇದ್ದವರು ಅರಣ್ಯ ಪ್ರವೇಶಿಸಿ ಇದ್ದ ಗುಡಿಸಲು ಕಳೆದುಕೊಂಡಿದ್ದಾರೆ. ಅರಣ್ಯ ಇಲಾಖೆ ಮಾತ್ರ ಶತಾಯ ಗತಾಯ ಅರಣ್ಯದೊಳಗೆ ಯಾವ ಗುಡಿಸಲು ಇರಲು ಬಿಡೋದಿಲ್ಲ ಎಂದು ಕಾರ್ಯಾಚರಣೆ ಆರಂಭಿಸಿದೆ. ಅರಣ್ಯದಿಂದ ಹೊರಬಿದ್ದಿರುವ ಆದಿವಾಸಿ ಜನರು ಜಿಲ್ಲಾಡಳಿತ ಜಿಲ್ಲೆಯ ಮೂರ್ನಾಲ್ಕು ಕಡೆಗಳಲ್ಲಿ ಗೊತ್ತು ಮಾಡಿರೋ ಸ್ಥಳಕ್ಕೆ ತೆರಳಬೇಕೆಂದು ಜಿಲ್ಲಾಡಳಿತರ ಪರ ಅಧಿಕಾರಿಗಳು ಆದಿವಾಸಿ ಜನರಲ್ಲಿ ಮನವಿ ಮಾಡ್ತಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *