BIG EXCLUSIVE: ಕೋಟಿ ಕೋಟಿ ಬೆಲೆ ಬಾಳೋ ಸರ್ಕಾರಿ ಜಾಗ ಜುಜುಬಿ ಕಾಸಿಗೆ ಬಿಕರಿ – ಸಚಿವ ಕೆಜೆ ಜಾರ್ಜ್ ಬಂಟರ ಗುಂಡಾಗಿರಿ

Public TV
2 Min Read

– ವರದಿ ಮಾಡಲು ತೆರಳಿದ ಪಬ್ಲಿಕ್ ಟಿವಿ ಸಿಬ್ಬಂದಿ ಮೇಲೆ ಹಲ್ಲೆ
– ಲೀಸ್ ಒಪ್ಪಂದಕ್ಕೆ ಶುಕ್ರವಾರ ಬೀಳುತ್ತೆ ಸಹಿ
– ತೈಲ ಬೆಲೆ ಏರಿಸಲು ಸರ್ಕಾರಕ್ಕೆ ಆತುರ
– ನ್ಯಾಯವಾಗಿ ಸಿಗೋ ಸಂಪನ್ಮೂಲ ಕ್ರೋಢಿಕರಿಸಲು ವಿಫಲ

ಬೆಂಗಳೂರು: ನಗರದ ಪ್ರಮುಖ ಸ್ಥಳವಾಗಿರುವ ಹೆಚ್‍ಎಎಲ್‍ನ ಎಂಎಸ್‍ಐಎಲ್ ಏರ್ ಕಾರ್ಗೋ ಪ್ರದೇಶವನ್ನು ಜುಜುಬಿ ಕಾಸಿಗೆ ಬಿಕರಿಗಿಟ್ಟು ಒಪ್ಪಂದ ಮಾಡಿಕೊಳ್ಳಲಾಗುತ್ತಿದ್ದು, ಕೋಟಿ ಕೋಟಿ ಬೆಲೆವುಳ್ಳ ಪ್ರದೇಶವನ್ನು ಪುಡಿಗಾಸಿಗೆ ಲೀಸ್ ನೀಡಲು ಸರ್ಕಾರ ಮುಂದಾಗಿದೆ. 

ಲೀಸ್ ನೀಡಲು ಸಚಿವ ಕೆಜೆ ಜಾರ್ಜ್ ಕೃಪಾಕಟಾಕ್ಷ ಇದೆ ಎನ್ನಲಾಗಿದ್ದು, ಈ ಕುರಿತು ವರದಿ ಮಾಡಲು ತೆರಳಿದ ಪಬ್ಲಿಕ್ ಟಿವಿ ವರದಿಗಾರ್ತಿ ಹಾಗೂ ಸಿಬ್ಬಂದಿ ಮೇಲೆ ಜಾರ್ಜ್ ಬಂಟರು ಹಲ್ಲೆ ನಡೆಸಲು ಯತ್ನಿಸಿದ್ದಾರೆ.

ಹೆಚ್‍ಎಎಲ್‍ನಲ್ಲಿರುವ ಸುಮಾರು ಮೂರು ಎಕರೆ ಹೊಂದಿರುವ ಎಂಎಸ್‍ಐಎಲ್ ಏರ್ ಕಾರ್ಗೋ ಪ್ರದೇಶವನ್ನು ಸದ್ಯ ಲೀಸ್ ನೀಡಲು ಸರ್ಕಾರ ಮುಂದಾಗಿದೆ. ಆದರೆ ಈ ಪ್ರದೇಶ ನಗರ ಪ್ರಮುಖ ರಸ್ತೆಯಲ್ಲಿ ಇದ್ದು, ಬಾಡಿಗೆ ಕೊಟ್ಟರೆ ಕೋಟಿ ಕೋಟಿ ದುಡಿಯುವ ಸಾಮಥ್ರ್ಯ ಹೊಂದಿದೆ. ಈ ಸಂಗತಿಯನ್ನು ಮರೆ ಮಾಚಿ ಲೀಸ್ ನೀಡಲು ಸರ್ಕಾರ ಮುಂದಾಗಿದ್ದು, ಈಗಾಗಲೇ ಲೀಸ್ ಒಪ್ಪಂದಕ್ಕೆ ಸಹಿ ಮಾಡಲು ಬೋರ್ಡ್ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂಬ ಮಾಹಿತಿ ಲಭಿಸಿದೆ.

ಶುಕ್ರವಾರ ಬೋರ್ಡ್ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಲೀಸ್ ಪತ್ರಕ್ಕೆ ಅಂಕಿತ ಬೀಳಲಿದೆ ಎನ್ನುವ ಖಚಿತ ಮಾಹಿತಿ ಪಡೆದ ಪಬ್ಲಿಕ್ ಟಿವಿ ಈ ಒಪ್ಪಂದದಿಂದ ಸರ್ಕಾರಕ್ಕೆ ಉಂಟಾಗುತ್ತಿರುವ ನಷ್ಟವನ್ನ ವರದಿ ಮಾಡಲು ಸ್ಥಳಕ್ಕೆ ತೆರಳಿತ್ತು.

ವರದಿ ಮಾಡಲು ಸ್ಥಳಕ್ಕೆ ತೆರಳಿದ ವೇಳೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅಲ್ಲಿನ ಗೂಂಡಾಗಳಾದ ಪರ್ಲ್ ಗ್ಲೋಬಲ್ ಹಬ್ ಮ್ಯಾನೇಜರ್ ಹಾಗೂ ಸಿಬ್ಬಂದಿ ಏಕಾಏಕಿ ಕ್ಯಾಮೆರಾ ಕಸಿದುಕೊಳ್ಳಲು ಯತ್ನಿಸಿ ಹಲ್ಲೆ ಮಾಡಿದ್ದಾರೆ. ಅಲ್ಲದೇ ಈ ಸ್ಥಳ ನಮಗೆ ಸೇರಿದ್ದು, ಯಾವುದೇ ಕಾರಣಕ್ಕೂ ನಮ್ಮ ಅನುಮತಿ ಇಲ್ಲದೇ ಪ್ರವೇಶ ಮಾಡಬಾರದು ಎಂದು ಹೇಳಿ ಗೂಂಡಾಗಿರಿ ನಡೆಸಿದ್ದಾರೆ.

ಅಂದಹಾಗೇ ಮೂರು ಎಕರೆ ಪ್ರದೇಶವಿರುವ ಈ ಸ್ಥಳಕ್ಕೆ ಸದ್ಯ 100 ರಿಂದ 200 ಕೋಟಿ ರೂ. ಬೆಲೆಯನ್ನ ಹೊಂದಿದೆ. ಆದರೆ ಇಂತಹ ಜಾಗವನ್ನು ವರ್ಷಕ್ಕೆ ಕೇವಲ 30 ಲಕ್ಷ ರೂ.ಗೆ ಗ್ಲೋಬಲ್ ಪರ್ಲ್ ಎಂಬ ಸಂಸ್ಥೆಗೆ ಬರೋಬ್ಬರಿ 85 ವರ್ಷ ಲೀಸ್ ನೀಡಲು ಸಚಿವರು ಮುಂದಾಗಿದ್ದಾರೆ. ಸಚಿವ ಜೆಕೆ ಜಾರ್ಜ್ ಒಡೆತನದ ಎಂಬೆಸಿ ಗ್ರೂಪ್ ಜಾಗವನ್ನು ಕೋಟಿ ಕೋಟಿಗೆ ರೂ.ಗೆ ನೀಡುವ ಅವರು ಸರ್ಕಾರಿ ಜಾಗವನ್ನು ಮಾತ್ರ ಬೇಕಾಬಿಟ್ಟಿ ಲೀಸ್ ನೀಡಲು ಮುಂದಾಗಿರುವ ಹಿನ್ನೆಲೆಯಲ್ಲಿ ಈ ಒಪ್ಪಂದದ ಬಗ್ಗೆಯೇ ಸಾಕಷ್ಟು ಅನುಮಾನ ಎದ್ದಿದೆ.

ರೈತರ ಸಾಲಮನ್ನಾ ಮಾಡಲು ಹಾಗೂ ಸಂಪನ್ಮೂಲ ಕ್ರೋಢಿಕರಣದ ಹೆಸರು ಹೇಳಿ ತೈಲದ ಮೇಲೆ ಹೆಚ್ಚುವರಿ ತೆರಿಗೆ ವಿಧಿಸಿದೆ. ಆದರೆ ಸರ್ಕಾರ ತನ್ನ ಜಾಗದಿಂದ ನ್ಯಾಯವಾಗಿ ಬರಬೇಕಿದ್ದ ಸಂಪನ್ಮೂಲಗಳನ್ನು ಮಾತ್ರ ಕ್ರೋಢಿಕರಿಸಲು ವಿಫಲವಾಗುತ್ತದೆ ಎನ್ನುವುದಕ್ಕೆ ಇದೊಂದು ತಾಜಾ ಉದಾಹರಣೆ. ಯಾವುದೇ ಆಲೋಚನೆ ಇಲ್ಲದೇ ಬರೋಬ್ಬರಿ 85 ವರ್ಷಕ್ಕೆ ಸರ್ಕಾರಿ ಜಾಗವನ್ನು ಲೀಸ್ ನೀಡಲು ಮುಂದಾಗಿರುವುದು ಎಷ್ಟು ಸರಿ? ಸರ್ಕಾರದ ಒಳಗಡೆ ಈ ನಿರ್ಧಾರವನ್ನು ಯಾರು ಪ್ರಶ್ನೆ ಮಾಡುವುದಿಲ್ಲವೇ ಎನ್ನುವ ಪ್ರಶ್ನೆ ಎದ್ದಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *