ಗದಗ: ನನಗೆ ಬಂದಿರುವ ಮಾಹಿತಿ ಪ್ರಕಾರ ರಾಜ್ಯದಲ್ಲಿ 16 ಮಂದಿಯಲ್ಲಿ ಓಮಿಕ್ರಾನ್ ಸೋಂಕು ಪತ್ತೆಯಾಗಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಹೆಚ್.ಕೆ.ಪಾಟೀಲ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಿನ್ನೆವರೆಗೆ ಬಂದಿರುವ ಮಾಹಿತಿ ಪ್ರಕಾರ 16 ಮಂದಿಯಲ್ಲಿ ಓಮಿಕ್ರಾನ್ ಸೋಂಕಿರುವುದು ಪತ್ತೆಯಾಗಿವೆ. ನಿನ್ನೆ ಸಂಜೆವರೆಗೆ ಬಂದ ಪರೀಕ್ಷೆ ವರದಿಯಲ್ಲಿ ಓಮಿಕ್ರಾನ್ ಪೀಡಿತ 16 ರೋಗಿಗಳಿದ್ದಾರೆ ಎಂಬ ಮಾಹಿತಿ ನಮಗೆ ಸಿಕ್ಕಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮತ್ತೆ ಕೇರಳದ ಐವರು ವಿದ್ಯಾರ್ಥಿಗಳಿಗೆ ಕೊರೊನಾ
ಇದು ಬಹಳ ಗಂಭೀರ ಹಾಗೂ ಆತಂಕಕಾರಿ ಸುದ್ದಿಯಾಗಿದೆ. ಜನರು ಭಯ ಪಡುವ ಅಗತ್ಯ ಇಲ್ಲ, ಜಾಗೃತರಾಗಬೇಕು. ಆದರೆ ಸರ್ಕಾರ ಭಯದಿಂದ ಕೆಲಸ ಮಾಡಬೇಕು. ಓಮಿಕ್ರಾನ್ ವಿಚಾರವಾಗಿ ನಿರ್ಲಕ್ಷ್ಯ ಮಾಡಿದರೇ ತೊಂದರೆಯಾಗಲಿದೆ. ಓಮಿಕ್ರಾನ್ ಟೆಸ್ಟ್ ವರದಿ ಬರಲು 15 ದಿನ ಬೇಕಾ? ವರದಿ ಬರಲು 15 ದಿನವಾದರೆ ಎಷ್ಟು ಸಂಪರ್ಕ ಹಬ್ಬಬಹುದು ಎನ್ನುವುದನ್ನು ಗಮನಿಸಲಿ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಓಮಿಕ್ರಾನ್ ಬಗ್ಗೆ ಮೊದಲೇ ಮಾಹಿತಿ ಇದ್ದರೂ ಚಿಕಿತ್ಸಾ ವಿಧಾನಗಳ ಪಟ್ಟಿಯನ್ನು ಸಿದ್ಧಮಾಡಿಲ್ಲ. ಆರೋಗ್ಯ ಇಲಾಖೆ 3ನೇ ಅಲೆಗೆ ಸಜ್ಜಾಗಬೇಕಾಗಿತ್ತು, ಆದರೆ ಇನ್ನೂ ಆಗಿಲ್ಲ. ತಾಂತ್ರಿಕ ಸಲಹಾ ಸಮಿತಿ ಶಿಫಾರಸ್ಸುಗಳನ್ನು ಯಥಾವತ್ತಾಗಿ ಜಾರಿಗೊಳಿಸಿ, ಎಲ್ಲಾ ಅಂತಾರಾಷ್ಟ್ರೀಯ ಪ್ರಯಾಣಿಕರ ಸಾಂಸ್ಥಿಕ ಕ್ವಾರಂಟೈನ್ ಮಾಡಿ, ಕನಿಷ್ಠ ಪಕ್ಷ ಆಫ್ರಿಕನ್ ರಾಷ್ಟ್ರದ ಎಕ್ಪೋಜರ್ನಿಂದ ಪ್ರಯಾಣಿಕರನ್ನು ಕ್ವಾರಂಟೈನ್ ಮಾಡಬೇಕು. ಕಳೆದ ವಾರ ವಿದೇಶದಿಂದ 436 ಪ್ರಯಾಣಿಕರು ಬಂದಿದ್ದರು. ಅವರಲ್ಲಿ ಹಲವರು ಆಫ್ರಿಕ ಮೂಲದಿಂದ ಬಂದವರು. 100ಕ್ಕೂ ಹೆಚ್ಚು ಜನರು ಟೆಸ್ಟ್ ಮಾಡಿಸಿಕೊಳ್ಳದೇ ಹೋಗಿದ್ದಾರೆ. ಈಗ ಅವರನ್ನು ಹುಡುಕುತ್ತಿದ್ದಾರೆ. ಸರ್ಕಾರದ ಈ ವಿಳಂಭ ನೀತಿ ಸರಿಯಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಓಮಿಕ್ರಾನ್ ಸೋಂಕಿತರ ಸಂಖ್ಯೆ 3ಕ್ಕೆ ಏರಿಕೆ?
ಬೆಳಗಾವಿ ಚಳಿಗಾಲದ ಅಧಿವೇಶನ ಕುರಿತು ಮಾತನಾಡಿ, ಅಧಿವೇಶನ ನಡೆಸಬೇಕೋ ಬೇಡವೋ ಎನ್ನುವ ಬಗ್ಗೆ ಸಲಹಾ ಸಮಿತಿ ಸಲಹೆ ಪಡೆಯಲಿ. ಒಮಿಕ್ರಾನ್ ಆಗಲೇ ಕರ್ನಾಟಕ್ಕೆ ಬಂದು ಬಿಟ್ಟಿದೆ. ಸದನ ಸೇರುವ ಬಗ್ಗೆ ಸಲಹಾ ಸಮಿತಿ ಅಭಿಪ್ರಾಯ ಪಡೆಯಬೇಕು. ಇಲ್ಲದೇ ಇದ್ದರೆ ಭಯ, ಆತಂಕದ ವಾತಾವರಣದಲ್ಲಿ ಸದನ ನಡೆಸುವುದು ಸಾಧ್ಯವಿಲ್ಲ. ಬೆಂಗಳೂರಲ್ಲಿ ಅದಿವೇಶನ ನಡೆಸುವುದು ಅಪಾಯಕಾರಿ. ಸದನ ನಡೆಸುವ ವಿಚಾರವನ್ನು ಸರ್ಕಾರ ನಿರ್ಧರಿಸಲಿ. ಆದರೆ ಅದಿವೇಶನಕ್ಕೆ ಬೆಂಗಳೂರಿಗಿಂದ ಬೆಳಗಾಗಿ ಸುರಕ್ಷಿತ. ಬೆಳಗಾವಿ ಜಿಲ್ಲೆ ಮಹಾರಾಷ್ಟ್ರ ರಾಜ್ಯದ ಪಕ್ಕದಲ್ಲೇ ಇದ್ದರೂ ಓಮಿಕ್ರಾನ್ ಆತಂಕ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.