ನಾನು ಮಣ್ಣಿಗೆ ಹೋಗುವುದರೊಳಗೆ ಜೆಡಿಎಸ್‌ನಿಂದ ದಲಿತ ಸಿಎಂ ಮಾಡುವೆ: ಹೆಚ್‌ಡಿಕೆ ಘೋಷಣೆ

Public TV
2 Min Read

ಮಂಡ್ಯ: ಜೆಡಿಎಸ್‌ ಪಕ್ಷದಿಂದ ನನ್ನ ಜೀವಿತಾವಧಿಯೊಳಗೆ ದಲಿತರೊಬ್ಬರನ್ನು ಮುಖ್ಯಮಂತ್ರಿ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಘೋಷಣೆ ಮಾಡಿದರು.

ಮಳವಳ್ಳಿಯಲ್ಲಿ ಇಂದು ಡಾ.ಬಿ.ಆರ್.‌ಅಂಬೇಡ್ಕರ್‌ ಅವರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹಿಂದೆ ನಮ್ಮ ಪಕ್ಷ ಹಾಸನ ಜಿಲ್ಲಾ ಪಂಚಾಯಿತಿಗೆ ದಲಿತರೊಬ್ಬರನ್ನು ಅಧ್ಯಕ್ಷರನ್ನಾಗಿ ಮಾಡಿತ್ತು. ಆಮೇಲೆ ಅನೇಕ ದಲಿತ ನಾಯಕರು ಪಕ್ಷದಲ್ಲಿ, ಸರ್ಕಾರಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದರು ಎಂದರು. ಇದನ್ನೂ ಓದಿ: ಮಂತ್ರಿ ಸ್ಥಾನಕ್ಕೆ ಈಶ್ವರಪ್ಪ ರಾಜೀನಾಮೆ ಘೋಷಣೆ

ಆ ಸಂದರ್ಭದಲ್ಲಿ ನನ್ನ ಸಹೋದರ ರೇವಣ್ಣ ಅವರೂ ಮೊದಲ ಬಾರಿಗೆ ಜಿಲ್ಲಾ ಪಂಚಾಯಿಗೆ ಗೆದ್ದು ಬಂದಿದ್ದರು. ಆದರೆ, ದೇವೇಗೌಡರು ಎಂಎ ಪದವೀಧರನಾಗಿದ್ದ ದಲಿತ ಅಭ್ಯರ್ಥಿಯನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷರನ್ನಾಗಿ ಮಾಡಿದ್ದರು. ಮುಂದಿನ ದಿನಗಳಲ್ಲಿ ಜಾತ್ಯತೀತ ಜನತಾದಳದಿಂದ ದಲಿತ ನಾಯಕರೊಬ್ಬರನ್ನು ಮುಖ್ಯಮಂತ್ರಿ ಮಾಡುವ ಅವಕಾಶ ಬಂದೇ ಬರುತ್ತದೆ. ನಾನು ಮಣ್ಣಿಗೆ ಹೋಗುವ ಮುನ್ನ ದಲಿತ ಮುಖ್ಯಮಂತ್ರಿಯನ್ನು ಮಾಡುತ್ತೇನೆ. ಈ ನಿರೀಕ್ಷೆಯನ್ನು ಜೆಡಿಎಸ್ ಸಾಕಾರಗೊಳಿಸುತ್ತದೆ ಎಂದು ಭರವಸೆ ನೀಡಿದರು.

ನಾನು ಮೊದಲಿನಿಂದಲೂ ಜಾತ್ಯತೀತ, ಧರ್ಮಾತೀತವಾಗಿ ಕೆಲಸ ಮಾಡಿಕೊಂಡು ಬಂದವನು. ನನ್ನನ್ನು ದಿನನಿತ್ಯವೂ ಸಾವಿರಾರು ಜನರು ರಾಜ್ಯದ ಮೂಲೆ ಮೂಲೆಗಳಿಂದಲೂ ಬಂದು ಭೇಟಿ ಮಾಡುತ್ತಾರೆ. ಅವರನ್ನೆಲ್ಲ ನಾನು, ನೀವು ಯಾವ ಜಾತಿ? ಯಾವ ಧರ್ಮ? ಎಂದು ಎಂದೂ ಕೇಳಿಲ್ಲ. ನಿಮ್ಮ ಕಷ್ಟವೇನು? ಎಂದಷ್ಟೇ ಕೇಳುತ್ತೇನೆ. ಇದು ನಾನು ಹಿಂದಿನಿಂದಲೂ ಪಾಲಿಸಿಕೊಂಡು ಬಂದಿರುವ ಧರ್ಮ ಎಂದು ಅವರು ಹೇಳಿದರು. ಇದನ್ನೂ ಓದಿ: ನನ್ನ ಸಿಡಿ ಕೇಸ್, ಸಂತೋಷ್ ಪ್ರಕರಣ ಸಿಬಿಐ ತನಿಖೆಗೆ ವಹಿಸಲಿ: ರಮೇಶ್ ಜಾರಕಿಹೊಳಿ

ನನಗೆ ಐದು ವರ್ಷ ಅಧಿಕಾರ ಕೊಡಿ. ನೀವು ನೆನಪಲ್ಲಿಟ್ಟುಕೊಳ್ಳುವ ಕೆಲಸ ಮಾಡುತ್ತೇನೆ. ಯಾವುದೇ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳುವ ಹಂಗಿನ ಸರ್ಕಾರ ಖಂಡಿತಾ ಬೇಡ. ರಾಜ್ಯವು ಕಳೆದ ಎಪ್ಪತ್ತೈದು ವರ್ಷಗಳಲ್ಲಿ ನೀರಾವರಿ ವಿಷಯಕ್ಕೆ ಸಂಬಂಧಿಸಿ ಅನ್ಯಾಯಕ್ಕೆ ತುತ್ತಾಗಿದೆ. ನನಗೆ ಐದು ವರ್ಷ ಅಧಿಕಾರ ಕೊಟ್ಟು ನೋಡಿ. ಆ ಅನ್ಯಾಯವನ್ನು ಐದೇ ವರ್ಷಗಳಲ್ಲಿ ಸರಿ ಮಾಡುತ್ತೇನೆ. ಇಲ್ಲವಾದರೆ ನಮ್ಮ ಪಕ್ಷವನ್ನೇ ವಿಸರ್ಜನೆ ಮಾಡುತ್ತೇನೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಳವಳ್ಳಿ ಶಾಸಕ ಡಾ.ಅನ್ನದಾನಿ, ಮಂಡ್ಯ ಜಿಲ್ಲೆಯ ಪಕ್ಷದ ಮುಖಂಡರು, ಅಸಂಖ್ಯಾತ ಕಾರ್ಯಕರ್ತರು ಹಾಜರಿದ್ದರು.

Share This Article
Leave a Comment

Leave a Reply

Your email address will not be published. Required fields are marked *