– ಎ ಖಾತಾ, ಬಿ ಖಾತಾ ಅಂತ ಸರ್ಕಾರ ಹಗಲು ದರೋಡೆ ಮಾಡ್ತಿದೆ ಅಂತ ಆರೋಪ
ಬೆಂಗಳೂರು: ಬೆಂಗಳೂರಿಗರಿಗೆ ದೀಪಾವಳಿ ಉಡುಗೊರೆ ಅಂತ ಜನರಿಗೆ ಬಿ ಖಾತೆ, ಎ ಖಾತೆ ಅಂತ ಸರ್ಕಾರ ಹಗಲು ದರೋಡೆ ಮಾಡ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy), ಸರ್ಕಾರದ ವಿರುದ್ಧ ವಾಗ್ದಾಳಿ ನಡೆದಿದ್ದಾರೆ.
ಬಿ ಖಾತೆಯಿಂದ ಎ ಖಾತೆ ಮಾಡಿಕೊಡುವ ಸರ್ಕಾರದ ಸ್ಕೀಂ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು, ಇದು ಲೂಟಿ ಹೊಡೆಯುವ ಯೋಜನೆ ಅಂತ ವಾಗ್ದಾಳಿ ನಡೆಸಿದರು. ಬಿ ಖಾತೆಯಿಂದ ಎ ಖಾತಾ ಮಾಡಿಸೋದು ಜನರಿಗೆ ಟೋಪಿ ಹಾಕೋ ಕೆಲಸ. ಇದರಲ್ಲಿ ದುಡ್ಡು ಮಾಡೋ ಪ್ಲ್ಯಾನ್ ಇದೆ. 2007 ರಲ್ಲಿ ನಮ್ಮ ಸರ್ಕಾರ ಇದ್ದಾಗ ಖಾತಾ ಬದಲಾವಣೆಗೆ ಆದೇಶ ಆಗಿತ್ತು. ಅನೇಕ ಕೋರ್ಟ್ಗಳು ಇದರ ಬಗ್ಗೆ ಆದೇಶ ಮಾಡಿವೆ. ಈಗ ಈ ಸರ್ಕಾರದವರು ಲೂಟಿ ಮಾಡಲು ಬಿ ಖಾತೆ, ಎ ಖಾತೆ ಅಂತ ಶುರು ಮಾಡಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ಬಿ ಖಾತಾದಿಂದ ಎ ಖಾತಾ ಪರಿವರ್ತನೆಗೆ ಅರ್ಜಿ ಆಹ್ವಾನ – ಬೆಂಗಳೂರಿನಲ್ಲಿ 500ಕ್ಕೂ ಹೆಚ್ಚು ಮಂದಿಯಿಂದ ಅರ್ಜಿ
1997 ರಲ್ಲಿ 30×40 ಸೈಟ್ ಖಾತೆ ಮಾಡಿಸಿಕೊಳ್ಳಲು 12,263 ರೂ. ಇತ್ತು. ಈಗ ಅದರಲ್ಲೇ ಲಕ್ಷಾಂತರ ರೂಪಾಯಿ ಲೂಟಿ ಮಾಡೋಕೆ ಸರ್ಕಾರ ಮುಂದಾಗಿದೆ. 2007 ರಲ್ಲಿ ನನ್ನ ಸರ್ಕಾರ ಇದ್ದಾಗಲೇ ಖಾತೆ ಮಾಡಿಕೊಡುವ ನಿರ್ಧಾರ ಆಗಿದೆ. ಆಗಲೇ ಹಣವನ್ನ ಬಿಬಿಎಂಪಿ ಖಾತೆ ಮಾಡಿಕೊಡಲು ಹಣ ಪಡೆದಿದೆ ಎಂದು ತಿಳಿಸಿದರು.
ಜನರನ್ನ ಹಗಲು ದರೋಡೆ ಮಾಡಲು ಈ ಸರ್ಕಾರ ಮುಂದಾಗಿದೆ. ಎ ಖಾತಾ ಬಿ ಖಾತಾ ಅಂತ ಎಲ್ಲೂ ಇಲ್ಲ. ಈಗ ಓಸಿ, ಸಿಸಿ ಅಂತ ಮತ್ತೊಂದು ಸ್ಕೀಂ ಮಾಡೋಕೆ ಹೊರಟಿದ್ದಾರೆ. ಇವರ ಪ್ರಾರಂಭ 30×40 ಸೈಟ್ಗೆ ಖಾತೆ ಮಾಡಿಸಲು ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕು. ಬಡವರ ಎಲ್ಲಿ ಇದನ್ನ ಕಟ್ಟೋಕೆ ಆಗುತ್ತದೆ. ಈ ಸರ್ಕಾರದ ಖಜಾನೆಯಲ್ಲಿ ದುಡ್ಡಿಲ್ಲ. ಲೂಟಿ ಮಾಡೋಕೆ ಬಿ ಖಾತಾ, ಎ ಖಾತಾ ಸ್ಕೀಂ ತಂದಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ದೀಪಾವಳಿ ಕೊಡುಗೆ ನೆಪದಲ್ಲಿ ಜನಕ್ಕೆ ದೋಖಾ, ಎ-ಖಾತಾ ಸೋಗಿನಲ್ಲಿ 15,000 ಕೋಟಿ ಸುಲಿಗೆ: ಹೆಚ್ಡಿಕೆ ಬಾಂಬ್
ಬೆಂಗಳೂರು ಮತ್ತು ನಾಡಿನ ಜನರು ಎರಡು ವರ್ಷ ತಡೆಯಿರಿ. ಯಾರು ಹಣ ಕೊಟ್ಟು ಖಾತೆ ಮಾಡಿಸಿಕೊಳ್ಳಬೇಕು ಅಂತಿದ್ದೀರೋ, ಎರಡು ವರ್ಷ ಆದ ಮೇಲೆ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಆಗ ಹಿಂದೆ ಇದ್ದ ಸಿಸ್ಟಮ್ನಲ್ಲಿ ಸರಳವಾಗಿ ಖಾತೆ ಮಾಡಿಸಿ ಕೊಡುವ ಕೆಲಸ ಮಾಡ್ತೀವಿ. ಕಡಿಮೆ ದರದಲ್ಲಿ ಖಾತೆ ಮಾಡಿಸಿ ಕೊಡುವ ಕೆಲಸ ಮಾಡ್ತೀವಿ. ಎರಡು ವರ್ಷ ಯಾರು ಇವರ ಮಾತಿಗೆ ಮರುಳಾಗಬೇಡಿ. ನಿಮ್ಮನ್ನ ಉಳಿಸುವ ಕೆಲಸ ಮಾಡ್ತೀವಿ ಎಂದು ಜನತೆಗೆ ಕರೆ ಕೊಟ್ಟರು.

