ಬೆಂಗಳೂರು: ಮಣ್ಣಿನ ಮಗ, ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರಿಗೆ ಇಂದು 85 ನೇ ಹುಟ್ಟುಹಬ್ಬದ ಸಂಭ್ರಮ. ಬರದ ಹಿನ್ನಲೆಯಲ್ಲಿ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸದಂತೆ ಅವರು ಈಗಾಗಲೇ ಮನವಿ ಮಾಡಿದ್ದಾರೆ. ಹೀಗಿದ್ರು ಅಭಿಮಾನಿಗಳು ಮಾತ್ರ ನೆಚ್ಚಿನ ನಾಯಕನ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಸಿದ್ಧರಾಗಿದ್ದಾರೆ.
ಬುಧವಾರ ಸಂಜೆ ಕುಟುಂಬ ಸಮೇತ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ತೆರಳಿರುವ ದೇವೇಗೌಡರು ಇಂದು 11 ಗಂಟೆಗೆ ಬೆಂಗಳೂರಿಗೆ ಆಗಮಿಸಲಿದ್ದಾರೆ. ಬಳಿಕ ಪದ್ಮನಾಭನಗರ ನಿವಾಸದಲ್ಲಿ ಅಭಿಮಾನಿಗಳನ್ನ ಭೇಟಿಯಾಗಲಿದ್ದಾರೆ.
ದೇವೇಗೌಡರ ಹುಟ್ಟು ಹಬ್ಬ ಹಿನ್ನೆಲೆಯಲ್ಲಿ ಅಭಿಮಾನಿಗಳು 85 ಕೆಜಿ ತೂಕದ ಕೇಕ್ ರೆಡಿ ಮಾಡ್ತಿದ್ದಾರೆ. ವಿಶೇಷವಾಗಿ ಸುಮಾರು 10 ಕ್ಕೂ ಹೆಚ್ವು ಜೋಡಿಯ ಸಾಮೂಹಿಕ ವಿವಾಹ ದೇವೇಗೌಡರ ಸಮ್ಮುಖದಲ್ಲಿ ನಡೆಯಲಿದೆ.
ಹುಟ್ಟುಹಬ್ಬ ಹಿನ್ನಲೆಯಲ್ಲಿ ಬೆಂಗಳೂರು ನಗರ ಘಟಕದಿಂದ ಕೆಸಿ ಜನರಲ್ ಆಸ್ಪತ್ರೆ ರೋಗಿಗಳಿಗೆ ಹಣ್ಣು-ಹಂಪಲು-ಬ್ರೆಡ್ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿದೆ. ಇದಲ್ಲದೆ ಐಟಿ ಕನ್ನಡಿಗರ ಒಕ್ಕೂಟ ಹಾಗೂ ಮುನ್ನೋಟ ಸಂಸ್ಥೆ ವತಿಯಿಂದ ಭಾರತೀಯ ವಿದ್ಯಾಭವನದಲ್ಲಿ ಒಕ್ಕೂಟ ವ್ಯವಸ್ಥೆಯಲ್ಲಿ ಪ್ರಾದೇಶಿಕ ಪಕ್ಷಗಳ ಪ್ರಸ್ತುತತೆ ಕುರಿತು ಚಿಂತನಾಗೋಷ್ಟಿ ಆಯೋಜನೆ ಮಾಡಲಾಗಿದ್ದು, ದೇವೇಗೌಡರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.