ದೇವೇಗೌಡರಿಗೆ ಕಾಂಗ್ರೆಸ್ಸಿನಿಂದ ರಾಜ್ಯಸಭೆ ಆಫರ್?

Public TV
1 Min Read

ಬೆಂಗಳೂರು: ಸಮ್ಮಿಶ್ರ ಸರ್ಕಾರದ ಪತನದ ನಂತರ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಮುರಿದು ಬಿದ್ದಿತ್ತು. ಈಗ ಮತ್ತೊಮ್ಮೆ ಎರಡು ಪಕ್ಷಗಳ ನಡುವೆ ದೋಸ್ತಿಗೆ ಕಾಲ ಕೂಡಿ ಬಂದಂತೆ ಕಾಣುತ್ತಿದೆ. ಈ ಬಾರಿಯೂ ಕಾಂಗ್ರೆಸ್ ಹೈಕಮಾಂಡ್ ಜೆಡಿಎಸ್‍ಗೆ ಬಿಗ್ ಆಫರ್ ನೀಡಿದೆ. ದೇವೇಗೌಡರು ಈ ಆಫರ್‌ಗೆ ಒಪ್ಪಿದ್ರೆ ಮತ್ತೊಮ್ಮೆ ದೋಸ್ತಿ ಆಗೋದರಲ್ಲಿ ಸಂಶಯವೇ ಇಲ್ಲ.

ಕಾಂಗ್ರೆಸ್ ಹೈಕಮಾಂಡ್ ಈ ಬಾರಿ ಜೆಡಿಎಸ್ ವರಿಷ್ಠ ದೇವೇಗೌಡರಿಗೆ ಬಿಗ್ ಆಫರ್ ನೀಡಿದೆ. ಅದು ರಾಜ್ಯಸಭೆ ಸ್ಥಾನದ ಆಫರ್. ಹೌದು. ಜೂನ್‍ನಲ್ಲಿ ಖಾಲಿಯಾಗುವ ರಾಜ್ಯಸಭೆ ಸ್ಥಾನಗಳ ಪೈಕಿ ಒಂದು ಸ್ಥಾನಕ್ಕೆ ಜೆಡಿಎಸ್‍ಗೆ ಬೆಂಬಲ ನೀಡಲು ಕಾಂಗ್ರೆಸ್ ಹೈಕಮಾಂಡ್ ತೀರ್ಮಾನ ಮಾಡಿದೆ ಅಂತೆ. ದೇವೇಗೌಡರು ಸ್ಪರ್ಧೆ ಮಾಡಿದರೆ ಮಾತ್ರ ಬೆಂಬಲ ಕೋಡುವ ನಿರ್ಧಾರ ಮಾಡಿದೆ ಅಂತೆ ಕಾಂಗ್ರೆಸ್ ಹೈಕಮಾಂಡ್.

ಜೂನ್‍ನಲ್ಲಿ 4 ರಾಜ್ಯಸಭೆ ಸ್ಥಾನಗಳು ಖಾಲಿಯಾಗಲಿವೆ. ರಾಜೀವ್ ಗೌಡ, ಹರಿಪ್ರಸಾದ್, ಪ್ರಭಾಕರ್ ಕೋರೆ, ಕುಪ್ಪೇಂದ್ರ ರೆಡ್ಡಿ ಅವಧಿ ಮುಕ್ತಾಯವಾಗಲಿದೆ. ಈ ಸ್ಥಾನಗಳ ಪೈಕಿ, 2 ಸ್ಥಾನ ಬಿಜೆಪಿಗೆ ಸಿಗಲಿದೆ. 1 ಕಾಂಗ್ರೆಸ್ ಗೆ ನಿರಾಯಾಸವಾಗಿ ಸಿಗಲಿದೆ. ಇನ್ನೊಂದು ಸ್ಥಾನಕ್ಕೆ ಮತಗಳ ಕೊರತೆ ಆಗಲಿದೆ. ಜೆಡಿಎಸ್‍ಗೆ ಕಾಂಗ್ರೆಸ್ ಬೆಂಬಲ ಕೊಟ್ಟರೆ ಅ ಒಂದು ಸ್ಥಾನ ದೋಸ್ತಿಗಳಿಗೆ ಸಿಗಲಿದೆ. ಹೀಗಾಗಿ ಹೆಚ್ಚುವರಿ ಮತಗಳನ್ನ ದೇವೇಗೌಡರು ಸ್ಪರ್ಧೆ ಮಾಡಿದರೆ ಜೆಡಿಎಸ್‍ಗೆ ನೀಡಲು ಕಾಂಗ್ರೆಸ್ ಚಿಂತನೆ ಮಾಡಿದೆ.

ಒಂದು ರಾಜ್ಯಸಭೆ ಸ್ಥಾನ ಗೆಲ್ಲಬೇಕಾದರೆ 45 ಮತಗಳು ಅಗತ್ಯ ಇದೆ. ಬಿಜೆಪಿ ಬಳಿ 117 ಶಾಸಕರು ಇದ್ದಾರೆ. ಹೀಗಾಗಿ 2 ಸ್ಥಾನ ಸಿಗಲಿದೆ. ಕಾಂಗ್ರೆಸ್ ಬಳಿ 68 ಶಾಸಕರು ಇರುವುದರಿಂದ ಒಂದು ಸ್ಥಾನ ಸಿಗಲಿದೆ. ಒಂದು ಸ್ಥಾನ ಪಡೆದು ಹೆಚ್ಚುವರಿ 23 ಮತಗಳು ಕಾಂಗ್ರೆಸ್ ಬಳಿ ಉಳಿಯಲಿದೆ. ಜೆಡಿಎಸ್‍ನ 34 ಮತ ಸೇರಿದರೆ ಮತ್ತೊಂದು ಸ್ಥಾನ ದೋಸ್ತಿಗಳ ಪಾಲಾಗಲಿದೆ. ಹೀಗಾಗಿ ಜೆಡಿಎಸ್ ಜೊತೆ ಕಾಂಗ್ರೆಸ್ ಮೈತ್ರಿಗೆ ನಿರ್ಧಾರ ಮಾಡಿದೆ. ಆದರೆ ಕಾಂಗ್ರೆಸ್ ಆಫರ್ ಅನ್ನ ದೇವೇಗೌಡರು ಒಪ್ಪಿಕೊಳ್ತಾರಾ?. ಸಮ್ಮಿಶ್ರ ಸರ್ಕಾರದ ಪಾಠದಿಂದ ಆಫರ್ ನಿರಾಕರಿಸುತ್ತಾರಾ ಕಾದು ನೋಡಬೇಕು.

Share This Article
Leave a Comment

Leave a Reply

Your email address will not be published. Required fields are marked *