2 ತಿಂಗಳು ಸುಮ್ನಿದ್ದೆ, ಆದ್ರೆ ಇನ್ಮುಂದೆ ಸುಮ್ನೆ ಕೈ ಕಟ್ಟಿ ಕೂರಲ್ಲ: ಆಂಜನೇಯ

Public TV
1 Min Read

ಚಿತ್ರದುರ್ಗ: ಮಾಜಿ ಸಮಾಜಕಲ್ಯಾಣ ಸಚಿವ ಎಚ್.ಆಂಜನೇಯ ಅವರು ಶಾಸಕ ಚಂದ್ರಪ್ಪನ ವಿರುದ್ಧ ಗರಂ ಆಗಿದ್ದು, ಎರಡು ತಿಂಗಳು ನಾನು ಸುಮ್ಮನೆ ಇದ್ದೆ. ಆದರೆ ಇನ್ನು ಮುಂದೆ ಸುಮ್ಮನೆ ಕೈ ಕಟ್ಟಿ ಕೂರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸುಳ್ಳು ಹೇಳುವುದೇ ಚಂದ್ರಪ್ಪನ ದೊಡ್ಡ ಕೆಲಸ, ಆತನ ತಲೆಯಲ್ಲಿ ಏನೂ ಇಲ್ಲ ಎಂದು ಏಕವಚನದಲ್ಲೇ ಹಾಲಿ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನಾನು ಸೋತಿದ್ದೇನೆ ಎಂದು ಕೈ ಕಟ್ಟಿಕೊಂಡು ಕೂರುವವನಲ್ಲ, ನಾನು ಹೋರಾಟದಿಂದ ಬಂದವನು. ನಾವು ಮಾಡಿರುವ ಅಭಿವೃದ್ಧಿ ಕಾರ್ಯಗಳು ಯಾವುದೇ ಕಾರಣಕ್ಕೂ ನಿಲ್ಲಬಾರದು, ಎರಡು ತಿಂಗಳಾದರೂ ಸುಮ್ಮನೆ ಇದ್ದೆ, ಆದರೆ ಇನ್ನು ಮುಂದೆ ಸುಮ್ಮನೆ ಕೈ ಕಟ್ಟಿ ಕೂರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾನು ಸಚಿವನಾಗಿದ್ದ ಸಮಯದಲ್ಲಿ ಜಾರಿಗೆ ತಂದಿರುವ ಯೋಜನೆಗಳು ಯಾವುದೇ ಕಾರಣಕ್ಕೂ ನಿಲ್ಲಬಾರದು, ಶಾಸಕ ಚಂದ್ರಪ್ಪ ನನ್ನ ಎಲ್ಲಾ ಕಾಮಗಾರಿಗಳನ್ನು ತಡೆಯುತ್ತಿದ್ದಾನೆ. ಆತನಿಗೆ ಜ್ಞಾನ, ತಿಳುವಳಿಕೆ ಇದ್ದರೆ ಯೋಜನೆಗಳನ್ನು ತಡೆಯುವ ಬದಲು, ಮುಂದವರಿಸಬೇಕೆಂದು ಆಗ್ರಹಿಸಿದ್ದಾರೆ.

ಕೇಂದ್ರ ಸರ್ಕಾರದಿಂದ ಕೋಟಿಗಟ್ಟಲೇ ಬಂದಿದೆ ಎಂದು ಹೇಳುತ್ತಾರೆ, ಆದರೆ ಇಲ್ಲಿಯವರೆಗೂ ಒಂದು ಪೈಸೆಯೂ ಸಹ ಬಂದಿಲ್ಲ. ನಮ್ಮ ಅವಧಿಯಲ್ಲಿ ಆಗಿರುವ ಎಲ್ಲಾ ಯೋಜನೆಗಳು ಮುಂದುವರಿಯಬೇಕು. ಒಂದು ವೇಳೆ ಯಾವುದೇ ಯೋಜನೆಗಳಲ್ಲಿ ತೊಂದರೆಯಾದರೆ ಚಂದ್ರಪ್ಪನ ವಿರುದ್ಧ ಉಗ್ರವಾದ ಹೋರಾಟ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *