ನಡುರಸ್ತೆಯಲ್ಲಿ ಜಡ್ಜ್ ಪತ್ನಿ, ಮಗನನ್ನು ಗುಂಡಿಕ್ಕಿ ಫೋನ್ ಮಾಡಿ ತಿಳಿಸಿದ!

Public TV
1 Min Read

ಚಂಡೀಗಢ: ನ್ಯಾಯಾಧೀಶರ ಹೆಂಡತಿ ಮತ್ತು ಮಗನನ್ನು ಕುಟುಂಬದ ಭದ್ರತಾ ಸಿಬ್ಬಂದಿಯೇ ಸಾರ್ವಜನಿಕ ಪ್ರದೇಶದಲ್ಲಿ ಗುಂಡಿಕ್ಕಿದ ಘಟನೆ ಹರ್ಯಾಣದ ಗುರುಗ್ರಾಮದಲ್ಲಿ ನಡೆದಿದೆ. ಘಟನೆ ನಡೆದ ಬಳಿಕ ಆರೋಪಿ ನ್ಯಾಯಾಧೀಶರಿಗೆ ಫೋನ್ ಮಾಡಿ ನಿಮ್ಮ ಪತ್ನಿ ಹಾಗೂ ಮಗನ ಮೇಲೆ ಗುಂಡು ಹಾರಿಸಿದ್ದೇನೆ ಹೋಗಿ ನೋಡಿ ಎಂದು ಹೇಳಿದ್ದಾನೆ.

ಶನಿವಾರ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಕೃಷ್ಣ ಕಾಂತ್ ಅವರ ಪತ್ನಿ ರಿತು ಮತ್ತು ಮಗ ಧ್ರುವ್ ಅವರು ಆರ್ಕಾಡಿಯಾ ಮಾರುಕಟ್ಟೆಯಲ್ಲಿ ಶಾಪಿಂಗ್ ಮಾಡುತ್ತಿದ್ದರು. ಈ ವೇಳೆ ಸಂಜೆ 3.30ಕ್ಕೆ ಭದ್ರತಾ ಸಿಬ್ಬಂದಿ ಗುಂಡು ಹಾರಿಸಿದ್ದಾನೆ. ಗಾಯಗೊಂಡಿರುವ ಜಡ್ಜ್ ಪತ್ನಿ ರಿತು ಮತ್ತು ಮಗ ಧ್ರುವ್‍ನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಸ್ಥಿತಿ ಗಂಭೀರವಾಗಿದೆ ಎಂದು ಡಿಸಿಪಿ ಈಸ್ಟ್ ಸುಲೋಚನ ಗಜರಾಜ್ ತಿಳಿಸಿದ್ದಾರೆ.

ಕಳೆದ ಒಂದೂವರೆ ವರ್ಷಗಳಿಂದಲೂ ಆರೋಪಿ ಹೆಡ್ ಕಾನ್ಸ್‌ಸ್ಟೇಬಲ್ ಮಹೇಂದ್ರಗಢ ನ್ಯಾಯಾಧೀಶರ ಕುಟುಂಬದ ಭದ್ರತಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದನು.

ಆರೋಪಿ ಮೊದಲು ಜಡ್ಜ್ ಪತ್ನಿ ರಿತು ಅವರಿಗೆ ಗುಂಡು ಹಾರಿಸಿ ಅನಂತರ ಮಗನಿಗೆ ಎಲ್ಲರ ಎದುರು ಶೂಟ್ ಮಾಡಿದ್ದಾನೆ. ಬಳಿಕ ಮಗ ಧ್ರುವ್ ಅವರ ದೇಹವನ್ನು ಎಳೆದುಕೊಂಡು ಹೋಗಲು ಪ್ರಯತ್ನಿಸಿದ್ದಾನೆ. ಪ್ರಯತ್ನ ವಿಫಲವಾದಾಗ ರಸ್ತೆಯಲ್ಲೇ ಬಿಟ್ಟು ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೆ. ಸ್ಥಳೀಯರು ಸ್ಥಳಕ್ಕೆ ಧಾವಿಸಿದ ಪೊಲೀಸರಿಗೆ ನಡೆದ ಘಟನೆಯನ್ನು ವಿವರಿಸಿದ್ದಾರೆ.

ಪತ್ನಿ ರಿತು ಅವರಿಗೆ ಎದೆಯ ಭಾಗಕ್ಕೆ ಗುಂಡು ತಗಲಿದ್ದರೆ ಧ್ರುವ್ ತಲೆಯ ಭಾಗಕ್ಕೆ ಹೊಡೆಯಲಾಗಿದೆ. ಅವರನ್ನು ಮೇದಾಂತ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿ ಮಹೇಂದ್ರ ಸಿಂಗ್‍ನನ್ನು ಫರೀದಾಬಾದ್‍ನಲ್ಲಿ ಬಂಧಿಸಲಾಗಿದ್ದು, ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ವಿಚಾರಣೆ ವೇಳೆ ಆರೋಪಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದನು ಎಂಬುದು ತಿಳಿದು ಬಂದಿದೆ ಎಂದು ಗುರುಗ್ರಾಮ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *