ಎಕ್ಸಾಂ ಮುಂದೂಡಿಕೆಯಾಗ್ಲಿ ಅಂತ 11ನೇ ಕ್ಲಾಸ್ ವಿದ್ಯಾರ್ಥಿಯಿಂದ ಬಾಲಕನ ಕೊಲೆ- ಸಿಬಿಐ

Public TV
2 Min Read

ಗುರ್ಗಾಂವ್: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ 2ನೇ ಕ್ಲಾಸ್ ಬಾಲಕ ಪ್ರದ್ಯುಮನ್ ಕೊಲೆ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಬಾಲಕನನ್ನು ಕೊಂದಿದ್ದು ಬಸ್ ಕಂಡಕ್ಟರ್ ಅಲ್ಲ, ಶಾಲೆಯ ಹಿರಿಯ ವಿದ್ಯಾರ್ಥಿ ಎಂದು ಸಿಬಿಐ ಹೇಳಿದೆ.

ಸೆಪ್ಟೆಂಬರ್ 8ರಂದು ಇಲ್ಲಿನ ಆರ್ಯನ್ ಇಂಟರ್‍ನಮ್ಯಾಷನಲ್ ಶಾಲೆಯ ಟಾಯ್ಲೆಟ್‍ ನಲ್ಲಿ 7 ವರ್ಷದ ಬಾಲಕ ಪ್ರದ್ಯುಮನ್‍ನನ್ನು ಕತ್ತು ಸೀಳಿ ಕೊಲೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ ಶಾಲೆಯ 11ನೇ ತರಗತಿ ವಿದ್ಯಾರ್ಥಿಯನ್ನು ಮಂಗಳವಾರದಂದು ಪೊಲೀಸರು ವಶಕ್ಕೆ ಪಡೆದಿದ್ದರು. ಇದೀಗ ಆತನ ವಿಚಾರಣೆಯಿಂದ ಸ್ಫೋಟಕ ಮಾಹಿತಿಗಳು ಬಯಲಾಗಿದೆ. ಪರೀಕ್ಷೆ ಮುಂದೂಡಿಕೆಯಾಗಲಿ ಅಂತ 11ನೇ ತರಗತಿ ವಿದ್ಯಾರ್ಥಿ ಬಾಲಕನನ್ನು ಕೊಲೆ ಮಾಡಿದ್ದಾನೆಂದು ಸಿಬಿಐ ಹೇಳಿದೆ.

ಪ್ರದ್ಯುಮನ್ ಶವವನ್ನು ಮೊದಲು ನೋಡಿದ್ದವನು ಎಂದು ನಂಬಲಾಗಿದ್ದ ವಿದ್ಯಾರ್ಥಿಯೇ ಕೊಲೆ ಮಾಡಿದ್ದಾನೆ. ಆತನನ್ನು ಇಂದು ಜುವಿನೈಲ್ ಬೋರ್ಡ್ ಮುಂದೆ ಹಾಜರುಪಡಿಸಲಾಗುತ್ತದೆ ಎಂದು ವರದಿಯಾಗಿದೆ.

ಈ ವಿದ್ಯಾರ್ಥಿ ಕಳೆದ ಒಂದು ವರ್ಷದಿಂದ ಮನೋವೈದ್ಯಕೀಯ ಪರೀಕ್ಷೆಗೆ ಒಳಪಟ್ಟಿದ್ದ. ಆತನನ್ನು ಕಳೆದ ಕೆಲವು ದಿನಗಳಿಂದ ವಿಚಾರಣೆ ಮಡಲಾಗುತ್ತಿದ್ದು, ಪ್ರತಿ ಬಾರಿಯೂ ಆತನ ಹೇಳಿಕೆ ಭಿನ್ನವಾಗಿರುತ್ತಿತ್ತು ಎಂದು ಮೂಲಗಳು ತಿಳಿಸಿವೆ.

ಎಕ್ಸಾಂ ಪೋಸ್ಟ್ ಪೋನ್‍ಗೆ ಕೊಲೆ?: ಕೊಲೆಗೂ ಮುನ್ನ ವಿದ್ಯಾರ್ಥಿ ತನ್ನ ಸ್ನೇಹಿತರ ಬಳಿ ಪರೀಕ್ಷೆ ಮುಂದೂಡಿಕೆಯಾಗಬೇಕು. ಆಗ ನಾವು ಓದುವ ಚಿಂತೆಯೇ ಇರುವುದಿಲ್ಲ ಎಂದು ಹೇಳಿಕೊಂಡಿದ್ದ ಎಂದು ಸಿಬಿಐ ಹೇಳಿದೆ. ಈತನ ಶಾಲೆಯ ರೆಕಾರ್ಡ್ ನೋಡಿದ್ರೆ ಈತ ಒಳ್ಳೆಯ ವಿದ್ಯಾರ್ಥಿಯಾಗಿರಲಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಶಾಲೆಗೆ ಚಾಕು ತರುತ್ತಿದ್ದ: ಘಟನೆಯ ಸಿಸಿಟಿವಿ ದೃಶ್ಯಾವಳಿಯಲ್ಲಿ ಪ್ರದ್ಯುಮನ್ ಜೊತೆ ಟಾಯ್ಲೆಟ್ ಪ್ರವೇಶಿಸಿದ ಐವರಲ್ಲಿ ಈ ವಿದ್ಯಾರ್ಥಿಯೂ ಒಬ್ಬನಾಗಿದ್ದ ಎಂದು ಮೂಲಗಳು ಹೇಳಿವೆ. ಪ್ರದ್ಯುಮನ್‍ ನನ್ನು ಕೊಲೆ ಮಾಡಲು ಬಳಸಲಾಗಿರಬಹುದಾದ ಚಾಕು ಕಮೋಡ್‍ ನಲ್ಲಿ ಪತ್ತೆಯಾಗಿತ್ತು. ಆರೋಪಿ ವಿದ್ಯಾರ್ಥಿಯು ಶಾಲೆಗೆ ಚಾಕು ತೆಗೆದುಕೊಂಡು ಬರುತ್ತಿದ್ದುದನ್ನು ಶಿಕ್ಷಕರು ಹಾಗೂ ಆತನ ಸಹಪಾಠಿಗಳು ನೋಡಿದ್ದರು ಎಂಬುದನ್ನು ಸಿಬಿಐ ಪತ್ತೆಹಚ್ಚಿದೆ.

ಆರೋಪಿ ವಿದ್ಯಾರ್ಥಿಯ ತಂದೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಕಳೆದ ರಾತ್ರಿ ನನ್ನ ಮಗನನ್ನು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಶಕ್ಕೆ ಪಡೆಯಲಾಗ್ತಿದೆ ಎಂದು ಕರೆ ಬಂತು. ನನ್ನ ಮಗ ಈ ಕೃತ್ಯವೆಸಗಿಲ್ಲ. ನಾವು ಪೊಲೀಸರ ವಿಚಾರಣೆಗೆ ಸಹಕರಿಸುತ್ತಿದ್ದೇವೆ. ನನ್ನ ಮಗನನ್ನು 4 ಬಾರಿ ವಿಚಾರಣೆ ಮಾಡಲಾಗಿದೆ. ನಮ್ಮ ಮನೆಗೆ ಬಂದು ಕೂಡ ವಿಚಾರಣೆ ಮಾಡಿದ್ದಾರೆ. ನಿನ್ನೆ ಮಧ್ಯರಾತ್ರಿವರೆಗೆ ನನ್ನನ್ನು ಅವರ ಕಚೇರಿಯಲ್ಲಿ ಕೂರಿಸಿಕೊಂಡಿದ್ದರು. ನಿಮ್ಮ ಮಗ ಕೊಲೆ ಮಾಡಿದ್ದಾನೆ. ಆತನನ್ನು ಬಂಧಿಸುತ್ತಿದ್ದೇವೆ ಎಂದು ಹೇಳಿದ್ರು. ಆತನ ತಪ್ಪೊಪ್ಪಿಗೆಗೆ ನೀವು ಸಹಿ ಮಾಡಬೇಕೆಂದು ಹೇಳಿದ್ರು. ನಾನು ಮಧ್ಯರಾತ್ರಿ 2 ಗಂಟೆಗೆ ಅಲ್ಲಿಂದ ಹೊರಟೆ ಎಂದು ಹೇಳಿದ್ದಾರೆ.

ಈ ಹಿಂದೆ ಶಾಲೆಯ ಬಸ್ ಕಂಡಕ್ಟರ್ ಅಶೋಕ್ ಕುಮಾರ್‍ನನ್ನು ಬಂಧಿಸಲಾಗಿತ್ತು. ಲೈಂಗಿಕ ಕ್ರಿಯೆಗೆ ಒಪ್ಪದ್ದಕ್ಕೆ ಕೊಲೆ ಮಾಡಿದ್ದೇನೆಂದು ಅಶೋಕ್ ಕುಮಾರ್ ಹೇಳಿಕೆ ನೀಡಿದ್ದ. ಆದ್ರೆ ಈಗಲೂ ಆತನಿಗೆ ಸಂಪೂರ್ಣವಾಗಿ ಪ್ರಕರಣದಿಂದ ರಿಲೀಫ್ ಸಿಕ್ಕಿಲ್ಲ. ಸದ್ಯಕ್ಕೆ ಸಿಬಿಐ ವಿದ್ಯಾರ್ಥಿಯ ಮೇಲೆ ಗಮನ ಕೇಂದ್ರೀಕರಿಸಿದೆ ಎಂದು ವರದಿಯಾಗಿದೆ.

ಈ ಪ್ರಕರಣದಲ್ಲಿ ಶಾಲೆಯ ಆಡಳಿತ ಮಂಡಳಿ ಸತ್ಯ ಮುಚ್ಚಿಡುವ ಪ್ರಯತ್ನ ಮಾಡುತ್ತಿದೆ. ಪೊಲೀಸರು ಸರಿಯಾಗಿ ತನಿಖೆ ಮಡಿಲ್ಲ ಎಂದು ಪ್ರದ್ಯುಮನ್ ಪೋಷಕರು ಆರೋಪಿಸಿದ್ದರು. ಪೋಷಕರ ಒತ್ತಾಯದ ನಂತರ ಹರ್ಯಾಣ ಸರ್ಕಾರ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿತ್ತು.

ಸೆಪ್ಟೆಂಬರ್ 22ರಂದು ಸಿಬಿಐ ಈ ಪ್ರಕರಣವನ್ನು ಕೈಗೆತ್ತಿಕೊಂಡು, ಸಿಸಿಟಿವಿ ದೃಶ್ಯಾವಳಿ ಹಾಗೂ ಫೋರೆನ್ಸಿಕ್ ಸಾಕ್ಷಿಯನ್ನು ಮರುಪರಿಶೀಲನೆ ಮಾಡಿತ್ತು.

Share This Article
Leave a Comment

Leave a Reply

Your email address will not be published. Required fields are marked *