ಆರೋಗ್ಯ, ಐಶ್ವರ್ಯ ಸಿಗಲೆಂದು ವ್ರತ ಮಾಡಿದ್ದ ಪತ್ನಿಯನ್ನೇ ಕೊಂದ ಪತಿ!

Public TV
1 Min Read

ಗುರುಗ್ರಾಮ: ಆರೋಗ್ಯ ಹಾಗೂ ಐಶ್ವರ್ಯ ಸಿಗಲಿ ಅಂತಾ ಕರ್ವಚೌತ್ ವ್ರತ ಮಾಡಿದ್ದ ಪತ್ನಿಯನ್ನು 8ನೇ ಮಹಡಿಯಿಂದ ನೂಕಿ ಪತಿಯೊಬ್ಬ ಕೊಲೆ ಮಾಡಿದ ಘಟನೆ ಹರ್ಯಾಣದ ಗುರುಗ್ರಾಮದಲ್ಲಿ ನಡೆದಿದೆ.

ದೀಪಿಕಾ ಚೌಹಾನ್ (32) ಕೊಲೆಯಾದ ದುರ್ದೈವಿ ಪತ್ನಿ. ಕೊಲೆಗೈದ ಪತಿ ವಿಕ್ರಂ ಚೌಹಾನ್‍ನನ್ನು ಪೊಲೀಸರು ಬಂಧಿಸಿದ್ದಾರೆ. ಗುರುಗ್ರಾಮ-ಫರಿಯಾಬಾದ್ ರಸ್ತೆಯ ಅಪಾರ್ಟಮೆಂಟ್ ನಲ್ಲಿ ಶನಿವಾರ ರಾತ್ರಿ 9 ಗಂಟೆಗೆ ಘಟನೆ ನಡೆದಿದೆ.

ಏನಿದು ಪ್ರಕರಣ?:
ದೀಪಿಕಾ ಹಾಗೂ ವಿಕ್ರಂ ಪ್ರೀತಿಸಿ 2013ರಂದು ಮದುವೆಯಾಗಿದ್ದರು. ಖಾಸಗಿ ಬ್ಯಾಂಕ್ ಒಂದರ ಅಧಿಕಾರಿಯಾಗಿ ದೀಪಿಕಾ ಕೆಲಸ ಮಾಡುತ್ತಿದ್ದರು. ವಿಕ್ರಂ ಕೂಡ ಖಾಸಗಿ ಸಂಸ್ಥೆಯೊಂದರಲ್ಲಿ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದರು. ಈ ದಂಪತಿಗೆ 4 ವರ್ಷದ ಮಗಳು ಹಾಗೂ ಆರು ತಿಂಗಳ ಮಗನಿದ್ದಾನೆ.

ಪತ್ನಿಯ ವಿರೋಧದ ನಡುವೆಯೂ ವಿಕ್ರಂ ಮತ್ತೊಬ್ಬ ವಿವಾಹಿತ ಮಹಿಳೆಯ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದ. ಇದರಿಂದಾಗಿ ಇಬ್ಬರ ಮಧ್ಯೆ ಆಗಾಗ ಜಗಳವಾಗುತ್ತಿತ್ತು. ಪತಿಗೆ ಆರೋಗ್ಯ ಹಾಗೂ ಐಶ್ವರ್ಯ ಸಿಗಲೆಂದು ದೀಪಿಕಾ ಶನಿವಾರ ಕರ್ವಚೌತ್ ವ್ರತ ಮಾಡಿ, ಉಪವಾಸವಿದ್ದರು. ಈ ವೇಳೆ ಇಬ್ಬರ ಮಧ್ಯ ಮತ್ತೆ ಜಗಳ ಪ್ರಾರಂಭವಾಗಿದೆ. ಪರಿಣಾಮ ಕೋಪಗೊಂಡ ವಿಕ್ರಂ, ದೀಪಿಕಾಳನ್ನು ತಾವು ವಾಸವಿದ್ದ ಅಪಾರ್ಟಮೆಂಟ್‍ನ 8ನೇ ಮಹಡಿಯ ಮನೆಯ ಬಾಲ್ಕನಿಯಿಂದ ನೂಕಿದ್ದಾರೆ.

ಅಷ್ಟು ಎತ್ತರದ ಮಹಡಿಯಿಂದ ಬಿದ್ದ ದೀಪಿಕಾ ಗಂಭೀರವಾಗಿ ಗಾಯಗೊಂಡಿದ್ದರು. ಇದನ್ನು ನೋಡಿದ ಅಪಾರ್ಟಮೆಂಟ್ ವಾಚ್ ಮ್ಯಾನ್ ಸಹಾಯದಿಂದ ಪತಿ ವಿಕ್ರಂ ಹಾಗೂ ಕೆಲವರು, ದೀಪಿಕಾಳನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ದೀಪಿಕಾ ಭಾನುವಾರ ಮೃತಪಟ್ಟಿದ್ದಾರೆ.

ನಾನು ಕೊಲೆ ಮಾಡಿಲ್ಲ. ದೀಪಿಕಾನೇ ಮನೆಯ ಬಾಲ್ಕನಿಯಿಂದ ನೆಗೆದು ಬಿದ್ದಿದ್ದಾಳೆ ಎಂದು ವಿಕ್ರಂ ಹೇಳಿಕೊಂಡಿದ್ದಾನೆ. ಆದರೆ ದೀಪಿಕಾ ತಂದೆ ವಿಕ್ರಂ ಈ ಕೊಲೆ ಮಾಡಿದ್ದಾನೆ ಅಂತಾ ದೂರು ದಾಖಲಿಸಿದ್ದಾರೆ.

ಈ ಸಂಬಂಧ ಆರೋಪಿ ವಿಕ್ರಂ ವಿರುದ್ಧ ಪ್ರಕರಣ ದಾಖಲಾಗಿದ್ದು, ಆತನನ್ನು ಬಂಧಿಸಿದ್ದ ಪೊಲೀಸರು ಸೋಮವಾರ ಕೋರ್ಟ್‍ಗೆ ಹಾಜರುಪಡಿಸಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ವಿಕ್ರಂನನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿ, ಕೋರ್ಟ್ ತೀರ್ಪು ನೀಡಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *