ಪಂಜಾಬ್ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷದ ಸೋಲಿಗೆ ಕಾರಣವೇನು?

Public TV
2 Min Read

ಚಂಡೀಗಢ: ಪಂಜಾಬ್‍ನ ಗುರ್‍ದಾಸಪುರ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸ್ವರನ್ ಸಲಾರಿಯಾ ಸೋಲು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಯನ್ನು ಹುಟ್ಟು ಹಾಕಿದೆ. ಉಪಚುನಾವಣೆಯ ಫಲಿತಾಂಶ ಇಂದು ಹೊರಬಿದ್ದಿದ್ದು, ಆಡಳಿತ ರೂಢ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುನಿಲ್ ಜಾಕರ್ ಭರ್ಜರಿ ಗೆಲುವನ್ನು ಪಡೆದಿದ್ದಾರೆ.

ಕಾಂಗ್ರೆಸ್ ಪಕ್ಷದ ಈ ಗೆಲುವನ್ನು ಕೇಂದ್ರದಲ್ಲಿರುವ ಎನ್‍ಡಿಎ ಸರ್ಕಾರದ ಆಡಳಿತದ ವಿರುದ್ಧದ ಜನಭಿಪ್ರಾಯ ಇದಾಗಿದ್ದು, ಈ ಮೂಲಕ ಗುರ್ದಾಸ್‍ಪುರ ಕ್ಷೇತ್ರದ ಜನರು ಕೇಂದ್ರ ಸರ್ಕಾರದ ಆಡಳಿತ ಬಗ್ಗೆ ತಮ್ಮ ಅಸಮಧಾನವನ್ನು ಹೊರ ಹಾಕಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಅದರೆ ಮಧ್ಯೆ ಹೊಸ ಅಂಶವೊಂದು ಬೆಳಕಿಗೆ ಬಂದಿದ್ದು, ಬಿಜೆಪಿ ಪಕ್ಷದ ಅಭ್ಯರ್ಥಿ ಸ್ವರನ್ ಅವರ ವಿರುದ್ಧ ದಾಖಲಾಗಿದ್ದ ಲೈಂಗಿಕ ದೌರ್ಜನ್ಯ ಪ್ರಕರಣವೇ ಸೋಲಿಗೆ ಕಾರಣ ಎಂದು ಹೇಳಲಾಗುತ್ತಿದೆ.

ಆರೋಪವೇನು? ಸ್ವರನ್ ಅವರ ವಿರುದ್ಧ 45 ವರ್ಷದ ಮುಂಬೈ ಮೂಲದ ಮಹಿಳೆ ಎಂಬವರು ಲೈಂಗಿಕ ದೌಜನ್ಯದ ದೂರನ್ನು ದಾಖಲು ಮಾಡಿದ್ದರು. ಅಲ್ಲದೇ ಅವರಿಬ್ಬರ ನಡುವಿನ ಹಲವು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಯನ್ನು ಗೊಳಿಸಿದ್ದರು. ಮಹಿಳೆ ತಮ್ಮ ದೂರಿನಲ್ಲಿ ತಿಳಿಸಿರುವಂತೆ ತಮ್ಮನ್ನು ಮದುವೆಯಾಗುವುದಾಗಿ ಮಾತು ನೀಡಿ, 1982 ರಿಂದ 2014 ವರೆಗೇ ಸುಮಾರು 32 ವರ್ಷಗಳ ಕಾಲ ತಮ್ಮ ಮೇಲೆ ದೌರ್ಜನ್ಯವನ್ನು ಎಸಗಿದ್ದಾರೆ. ಅಲ್ಲದೆ ಆ ಅವಧಿಯಲ್ಲಿ ತಾವು ವಾಸಿಸಲು ಒಂದು ಫ್ಲಾಟ್ ಸಹ ನೀಡಿದ್ದರು ಎಂದು ತಿಳಿಸಿದ್ದರು.

ಆದರೆ ಮಹಿಳೆಯ ಆರೋಪವನ್ನು ಸ್ವರನ್ ನಿರಾಕರಿಸಿದ್ದರು. ತಮ್ಮ ವ್ಯಕ್ತಿತ್ವಕ್ಕೆ ಕಪ್ಪು ಚುಕ್ಕೆ ತರಲು ಈ ರೀತಿ ದೂರು ನೀಡಿದ್ದಾರೆ ಎಂದು ತಿಳಿಸಿದ್ದರು. ಸ್ವರನ್ ಮೂಲತಃ ಮುಂಬೈನ ಉದ್ಯಮಿಯಾಗಿದ್ದಾರೆ.

ಸ್ವರನ್ ಅವರು ಚುನಾವಣೆ ಆಯೋಗಕ್ಕೆ ನಾಮಪತ್ರ ಸಲ್ಲಿಕೆ ವೇಳೆ ಈ ವಿಷಯವನ್ನು ಮುಚ್ಚಿಟ್ಟಿದ್ದರು ಎಂದು ಕಾಂಗ್ರೆಸ್ ಆರೋಪಿಸಿತ್ತು. ಪಂಜಾಬ್ ಹಣಕಾಸು ಸಚಿವ ಮನ್‍ಪ್ರೀತ್ ಸಿಂಗ್ ಬಾದಲ್ ಈ ಕುರಿತು ಪ್ರತಿಕ್ರಿಯೆಯನ್ನು ನೀಡಿದ್ದು, ಬಿಜೆಪಿಯ ಅಭ್ಯರ್ಥಿಯ ವಿರುದ್ಧ 2014 ಡಿಸೆಂಬರ್ 15ರಲ್ಲಿ ಭಾರತೀಯ ದಂಡ ಸಂಹಿತೆ (ಐಪಿಸಿ)ಯ 376, 420 ಮತ್ತು 306 ರ ಸೆಕ್ಷನ್‍ಗಳ ಪ್ರಕಾರ ದೂರು ದಾಖಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಸುನಿಲ್ ಜಾಕರ್ ಅವರು ಒಟ್ಟು 4,99,752 ಮತಗಳನ್ನು ಗಳಿಸಿದ್ದು, ಬಿಜೆಪಿಯ ಸಲಾರಿಯಾ 3,06,533 ಮತ ಪಡೆದರೆ, ಆಪ್ ಅಭ್ಯರ್ಥಿ ಖಜುರಿಯಾ 23,579 ಮತಗಳನ್ನು ಗಳಿಸಿದ್ದಾರೆ. ಹಿರಿಯ ನಟ ಮತ್ತು ಸಂಸದರಾಗಿದ್ದ ವಿನೋದ್ ಖನ್ನಾ ಸಾವಿನ ಬಳಿಕ ಗುರುದಾಸ್‍ಪುರ ಲೋಕಸಭಾ ಕ್ಷೇತ್ರ ತೆರವಾಗಿತ್ತು. ವಿನೋದ್ ಖನ್ನಾ ಬಿಜೆಪಿ ಅಭ್ಯರ್ಥಿಯಾಗಿ ಗೆಲುವನ್ನು ಪಡೆದುಕೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *