ಜಮೀನಿನಲ್ಲಿ ಕೆಲಸ ಮಾಡ್ತಿದ್ದ ಸಂಬಂಧಿಗೇ ಗುಂಡು ಹಾರಿಸ್ದ

Public TV
1 Min Read

ರಾಮನಗರ: ಜಮೀನು ವಿವಾದದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವನ ಮೇಲೆ ಗುಂಡು ಹಾರಿಸಿ ಕೊಲೆಗೆ ಯತ್ನಿಸಿರುವ ಘಟನೆ ಬೆಂಗಳೂರು ಹೊವಲಯದ ತಾವರೆಕೆರೆ ಸಮೀಪದ ದೊಡ್ಡೇರಿ ಕಾಲೋನಿಯಲ್ಲಿ ನಡೆದಿದೆ.

ದೊಡ್ಡೇರಿ ಕಾಲೋನಿ ನಿವಾಸಿ ಕುಮಾರನಾಯ್ಕ್ ತನ್ನ ಸಂಬಂಧಿಯಿಂದಲೇ ಗುಂಡೇಟು ತಿಂದಿದ್ದಾನೆ. ಸಂಬಂಧಿ ಚಂದ್ರನಾಯ್ಕ್ ಕುಮಾರನಾಯ್ಕ್ ಮೇಲೆ ಡಬಲ್ ಬ್ಯಾರೆಲ್ ಬಂದೂಕಿನಿಂದ ಗುಂಡು ಹಾರಿಸಿ ಕೊಲೆ ಪ್ರಯತ್ನ ನಡೆಸಿದ್ದಾನೆ. ಅದೃಷ್ಟವಶಾತ್ ಗುಂಡು ಕುಮಾರನಾಯ್ಕ್ ನ ತೊಡೆಗೆ ಬಿದ್ದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಕುಮಾರನಾಯ್ಕ್ ಹಾಗೂ ಚಂದ್ರನಾಯ್ಕ್ ನ ನಡುವೆ ಜಮೀನು ವಿಚಾರವಾಗಿ ಕಳೆದ ಎರಡು ವರ್ಷಗಳಿಂದ ಗಲಾಟೆ ನಡೆಯುತ್ತಿತ್ತು. ಇಂದು ಕುಮಾರನಾಯ್ಕ್ ಜಮೀನಿನ ಬಳಿ ಕೆಲಸಕ್ಕೆ ತೆರಳಿದ್ದಾಗ ಚಂದ್ರನಾಯ್ಕ್ ಏಕಾಏಕಿ ಜಗಳ ತೆಗೆದಿದ್ದಾನೆ. ಅಲ್ಲದೇ ತನ್ನ ಬಳಿಯಿದ್ದ ಬಂದೂಕಿನಿಂದ ಗುಂಡು ಹಾರಿಸಿದ್ದಾನೆ.

ಗುಂಡೇಟು ತಿಂದ ಕುಮಾರನಾಯ್ಕ್ ನನ್ನು ತಕ್ಷಣ ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಬಳಿಕ ಗುಂಡು ಹಾರಿಸಿದ ಚಂದ್ರನಾಯ್ಕ್ ಪರಾರಿಯಾಗಿದ್ದಾನೆ. ಮಾಹಿತಿ ತಿಳಿದು ತಾವರೆಕೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *