ಗುಜರಾತ್ ಚುನಾವಣೆ-ಹಾರ್ದಿಕ್ ಪಟೇಲ್‍ಗೆ ಆಹ್ವಾನ ನೀಡಿದ ಕಾಂಗ್ರೆಸ್

Public TV
1 Min Read

ಗಾಂಧಿನಗರ: ಗುಜರಾತ್ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲವು ಸಾಧಿಸಲು ಶತಯಗಾತಯ ನಿರ್ಧರಿಸಿದಂತಿದ್ದು, ಹೊಸ ಬೆಳವಣಿಗೆಯೊಂದರಲ್ಲಿ ಗುಜರಾತ್ ಜಾಟ್ ಸಮುದಾಯದ ಮುಖಂಡ ಹಾರ್ದಿಕ್ ಪಟೇಲ್ ಅವರಿಗೆ ಪಕ್ಷಕ್ಕೆ ಆಹ್ವಾನವನ್ನು ನೀಡಿದೆ.

ಹಾರ್ದಿಕ್ ಪಟೇಲ್ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ತೀರ್ಮಾನವನ್ನು ಕೈಗೊಂಡರೆ ಪಕ್ಷದಿಂದ ಟಿಕೆಟ್ ನೀಡುವುದಾಗಿಯು ತಿಳಿಸಿದ್ದು, ಪಟೇಲ್ ಅವರ ಹೋರಾಟ ಹಾಗೂ ಬೇಡಿಕೆಗಳಿಗೆ ನಮ್ಮ ಬೆಂಬಲವಿದೆ ಎಂದು ಕಾಂಗ್ರೆಸ್ ತಿಳಿಸಿದೆ.

ಗುಜರಾತ್ ಚುನಾವಣೆಯನ್ನು ಪ್ರತಿಷ್ಠೆಯ ಕಣವಾಗಿ ಸ್ವೀಕರಿಸಿರುವ ಕಾಂಗ್ರೆಸ್, ರಾಜ್ಯದ ಪ್ರಬಲ ಸಮುದಾಯದ ನಾಯಕರನ್ನು ಭೇಟಿ ಮಾಡಿ ಬೆಂಬಲವನ್ನು ಕೋರಿದೆ. ಪ್ರಮುಖವಾಗಿ ಪಟೇಲ್ ಸಮುದಾಯಕ್ಕೆ ಮೀಸಲಾತಿಯನ್ನು ಕೋರಿ ಹೋರಾಟವನ್ನು ನಡೆಸಿದ್ದ ಹಾರ್ದಿಕ್ ಪಟೇಲ್, ಠಾಕೋರ್ ಸಮುದಾಯದ ನಾಯಕರದ ಅಲ್ಪೇಸ್ ಠಾಕೋರ್ ಮತ್ತು ದಲಿತ ಸಮುದಾಯದ ನಾಯಕರಾದ ಜಿಗ್ನೇಶ್ ಮೇವಾನಿ ಅವರ ಬೆಂಬಲವನ್ನು ಪಡೆದು ಆಡಳಿತರೂಢ ಬಿಜೆಪಿ ಸರ್ಕಾರವನ್ನು ಸೋಲಿಸಲು ಕಾರ್ಯ ತಂತ್ರರೂಪಿಸಿದೆ.

ಕಾಂಗ್ರೆಸ್ ಪ್ರಬಲ ಸಮುದಾಯಗಳ ಬೆಂಬಲ ಮಾತ್ರವಲ್ಲದೆ, ಚುನಾವಣಾ ಪೂರ್ವ ಮೈತ್ರಿಯನ್ನು ಮಾಡಿಕೊಳ್ಳುವ ಸಾಧ್ಯತೆಗಳಿದ್ದು, ಎನ್‍ಸಿಪಿ ಯ ಶರತ್ ಪವರ್ ಮತ್ತು ಜೆಡಿಯು ನ ವಾಸಾವ ಅವರೊಂದಿಗೆ ಮಾತುಕತೆಯನ್ನು ನಡೆಸಿದೆ. ಈ ಕುರಿತು ಮಾಹಿತಿಯನ್ನು ನೀಡಿದ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಭರತೀಶ್ ಸೋಲಂಕಿ, ಈ ಬಾರಿಯ ಚುನಾವಣೆಯಲ್ಲಿ ಸುಲಭವಾಗಿ 125 ಸ್ಥಾನಗಳನ್ನು ಗೆಲ್ಲುತ್ತೇವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಕೆಲ ದಿನಗಳ ಹಿಂದೆ ಗುಜರಾತ್‍ನಲ್ಲಿ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಹಲವು ನಾಯಕರು ಬಿಜೆಪಿ ಪರ ಮತ ಚಲಾಯಿಸಿದರು ಸಹ ನಂತರದ ಬೆಳವಣಿಗೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲವನ್ನು ನೀಡುವುದಾಗಿ ತಿಳಿಸಿದ್ದರು. ಇದರಲ್ಲಿ ಪ್ರಮುಖವಾಗಿ ಜೆಡಿಯು ಎಂಎಲ್‍ಎ ವಾಸಾವ ಬಿಜೆಪಿ ಪಕ್ಷದ ಆಡಳಿತ ಕ್ರಮ ವಿರುದ್ಧ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು.

ಸೋಲಂಕಿಯವರು ಆಪ್ ಪಕ್ಷ ರಾಜ್ಯ ನಾಯಕರೊಂದಿಗೂ ನಿರಂತರವಾಗಿ ಸಂಪರ್ಕದಲ್ಲಿದ್ದು, ಅವರ ಬೆಂಬಲವನ್ನು ಪಡೆಯುವ ನಿರೀಕ್ಷೆಯನ್ನು ವ್ಯಕ್ತಪಡಿಸಿದರು. ಅಲ್ಲದೇ ಪಕ್ಷದಲ್ಲಿ ಉತ್ತಮ ಹಾಗೂ ಪ್ರಬಲ ಸದಸ್ಯರಿಗೆ ಟಿಕೆಟ್ ನೀಡಲಾಗುತ್ತದೆ ಎಂದು ತಿಳಿಸಿದರು. ಗುಜರಾತ್ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಕಳೆದ 22 ವರ್ಷಗಳಿಂದ ಅಧಿಕಾರವನ್ನೇ ಪಡೆದಿಲ್ಲ.

Share This Article
Leave a Comment

Leave a Reply

Your email address will not be published. Required fields are marked *