ಚಾಂಪಿಯನ್ ತಂಡವನ್ನು ಗೌರವಿಸಿದ ಗುಜರಾತ್ ಸರ್ಕಾರ – ಹಾರ್ದಿಕ್ ಪಾಂಡ್ಯಗೆ ವಿಶೇಷ ಉಡುಗೊರೆ

Public TV
2 Min Read

ಅಹಮದಾಬಾದ್: ಗುಜರಾತ್ ಟೈಟಾನ್ಸ್ ತನ್ನ ಚೊಚ್ಚಲ ಋತುವಿನಲ್ಲಿಯೇ ಅದ್ಭುತ ಪ್ರದರ್ಶನ ನೀಡುವ ಮೂಲಕ ಐಪಿಎಲ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಭಾನುವಾರ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಬಳಗ ರಾಜಸ್ಥಾನ ವಿರುದ್ಧ ಏಳು ವಿಕೆಟ್‍ಗಳ ಜಯ ಸಾಧಿಸಿ ಐಪಿಎಲ್ ಟ್ರೋಫಿಗೆ ಮುತ್ತಿಕ್ಕಿತ್ತು.

ಈ ಅದ್ಭುತ ಗೆಲುವಿನ ನಂತರ ಗುಜರಾತ್ ಸಿಎಂ ಭೂಪೇಂದ್ರ್ ಪಟೇಲ್ ಗುಜರಾತ್ ಟೈಟಾನ್ಸ್ ಆಟಗಾರರನ್ನು ಭೇಟಿ ಮಾಡಿದರು. ಈ ವೇಳೆ ಸಿಎಂ ಪಟೇಲ್ ಇಡೀ ತಂಡವನ್ನು ಸನ್ಮಾನಿಸಿದರು. ಇದರೊಂದಿಗೆ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರಿಗೆ ನೆನಪಿನ ಸ್ಮರಣಿಕೆ ನೀಡಿ ಗೌರವಿಸಿದರು. ಇದನ್ನೂ ಓದಿ: ಗುಜರಾತ್‌ಗೆ ಐಪಿಎಲ್‌ ಟ್ರೋಫಿ – ಯಾವ ಆಟಗಾರರಿಗೆ ಏನು ಪ್ರಶಸ್ತಿ?

ಗುಜರಾತ್ ಟೈಟಾನ್ಸ್ ತಂಡ ವಿಶೇಷ ರೀತಿಯಲ್ಲಿ ಟ್ರೋಫಿ ಗೆದ್ದು ಸಂಭ್ರಮಿಸಿದೆ. ತಂಡದ ಆಟಗಾರರು ಅಹಮದಾಬಾದ್‍ನಲ್ಲಿ ರೋಡ್ ಶೋ ನಡೆಸುವ ಮೂಲಕ ತಮ್ಮ ಅಭಿಮಾನಿಗಳ ಬೆಂಬಲಕ್ಕೆ ಧನ್ಯವಾದ ಅರ್ಪಿಸಿದರು. ಈ ರೋಡ್ ಶೋ ಓಸ್ಮಾನ್‍ಪುರ ರಿವರ್‌ಫ್ರಂಟ್‌ನಿಂದ ಪ್ರಾರಂಭವಾಗಿ ವಿಶ್ವಕುಂಜ್ ರಿವರ್‌ಫ್ರಂಟ್‌ಗೆ ಕೊನೆಗೊಂಡಿತು. ಇದನ್ನೂ ಓದಿ: ಪಾಂಡ್ಯ ಪರಾಕ್ರಮ – ಚೊಚ್ಚಲ ಆವೃತ್ತಿಯಲ್ಲೇ ಪ್ರಶಸ್ತಿ ಗೆದ್ದ ಗುಜರಾತ್

ಬಿಸಿಸಿಐ, ಇತ್ತೀಚೆಗೆ ಮುಕ್ತಾಯಗೊಂಡ ಇಂಡಿಯನ್ ಪ್ರೀಮಿಯರ್ ಲೀಗ್‍ನಲ್ಲಿ ಕೆಲಸ ಮಾಡಿದ ಪಿಚ್ ಕ್ಯುರೇಟರ್‌ಗಳು ಮತ್ತು ಗ್ರೌಂಡ್ ಸ್ಟಾಂಪ್‍ಗಳಿಗೆ 1.25 ಕೋಟಿ ರೂ. ಬಹುಮಾನ ಮೊತ್ತವನ್ನು ನೀಡುವುದಾಗಿ ಸೋಮವಾರ ಘೋಷಿಸಿದೆ.

ನಿನ್ನೆ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ಕೇವಲ ಒಂಬತ್ತು ವಿಕೆಟ್‍ಗೆ 130 ರನ್ ಗಳಿಸಿತು. ರಾಜಸ್ಥಾನ ಪರ ಜೋಸ್ ಬಟ್ಲರ್ ಗರಿಷ್ಠ 39 ಮತ್ತು ಯಶಸ್ವಿ ಜೈಸ್ವಾಲ್ 22 ರನ್ ಗಳಿಸಿದರು. ಗುಜರಾತ್ ಟೈಟಾನ್ಸ್ ಪರ ಹಾರ್ದಿಕ್ ಪಾಂಡ್ಯ 17 ರನ್ ನೀಡಿ ಮೂರು ವಿಕೆಟ್ ಪಡೆದಿದ್ದರು.

ರಾಜಸ್ಥಾನ ನೀಡಿದ 131 ರನ್‍ಗಳ ಗುರಿಯನ್ನು ಬೆನ್ನಟ್ಟಿದ ಗುಜರಾತ್ 11 ಎಸೆತಗಳು ಬಾಕಿ ಇರುವಂತೆಯೇ 3 ವಿಕೆಟ್ ನಷ್ಟಕ್ಕೆ 133 ರನ್ ಹೊಡೆದು 7 ವಿಕೆಟ್‍ಗಳ ಜಯವನ್ನು ಸಾಧಿಸಿತು.

ತಂಡದ ನಾಯಕ ಹಾರ್ದಿಕ್ ಪಾಂಡ್ಯ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ, ಜೋಸ್ ಬಟ್ಲರ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಐಪಿಎಲ್ ಫೈನಲ್‍ನಲ್ಲಿ ನಾಯಕರೊಬ್ಬರು ಈ ಪ್ರಶಸ್ತಿ ಗೆದ್ದಿರುವುದು ಇದು ಮೂರನೇ ಬಾರಿ. ಈ ಹಿಂದೆ ಅನಿಲ್ ಕುಂಬ್ಳೆ (2009) ಮತ್ತು ರೋಹಿತ್ ಶರ್ಮಾ (2015) ಮಾತ್ರ ಈ ಸಾಧನೆಗೈದಿದ್ದರು.

Share This Article
Leave a Comment

Leave a Reply

Your email address will not be published. Required fields are marked *