ಬೆಂಗಳೂರು: ವಿಶ್ವದಲ್ಲೇ ಅತಿದೊಡ್ಡ ಆನ್ಲೈನ್ ಪೇಮೆಂಟ್ (Online Payment) ಕೀರ್ತಿ ಭಾರತದ್ದು. ಪ್ರಧಾನಿ ಮೋದಿ ಕನಸಿನ ಯೋಜನೆ ಡಿಜಿಟಲ್ ಇಂಡಿಯಾದ ಯುಪಿಐ (UPI) ಪೇಮೆಂಟ್ಗೆ ವಿಘ್ನ ಎದುರಾಗಿದೆ. ಬೇಕರಿ, ಟೀ-ಕ್ಯಾಂಡಿಮೆಂಟ್ಸ್, ತರಕಾರಿ, ಬೀಡ, ಹೂವಿನ ಅಂಗಡಿ, ಹಾಲು ಮಾರೋವ್ರು, ಡಾಬಾದವರು. ಹೀಗೆ.. ಎಲ್ಲರಿಗೂ ಯುಪಿಐ ವಹಿವಾಟು ಆಧರಿಸಿ ಲಕ್ಷಲಕ್ಷ ಟ್ಯಾಕ್ಸ್ (Tax) ಕಟ್ಟುವಂತೆ ರಾಜ್ಯ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್ ನೀಡಿದೆ.
ಈ ನೋಟಿಸ್, ಟ್ಯಾಕ್ಸ್ ಟಾರ್ಚರ್ಗೆ ಹೈರಾಣಾಗಿರೋ ವರ್ತಕರು, ನಮಗೆ ಯುಪಿಐ.. ಆನ್ಲೈನ್ ಪೇಮೆಂಟ್ ಸಹವಾಸವೇ ಬೇಡ… ಕೇವಲ ಕ್ಯಾಶ್ ಇದ್ದರೆ ಕೊಡಿ ಅಂತ ಗ್ರಾಹಕರಿಗೆ ಮನವಿ ಮಾಡ್ತಿದ್ದಾರೆ. ತಮ್ಮ ಅಂಗಡಿಗಳಿಗೆ ಅಂಟಿಸಿರೋ ಯುಪಿಐ ಕ್ಯೂಆರ್ ಕೋಡ್ ಸ್ಟಿಕ್ಕರ್ಗಳನ್ನು ತೆಗೆಯುತ್ತಿದ್ದಾರೆ. ಕಮ್ಮನಹಳ್ಳಿ, ಮಾರತಹಳ್ಳಿ ಭಾಗದ ಬೇಕರಿಗಳಲ್ಲಿ `ಕ್ಯಾಶ್ ಓನ್ಲಿ’ ಅಂತ ಬೋರ್ಡನ್ನೇ ಹಾಕಿಬಿಟ್ಟಿದ್ದಾರೆ. ಹೀಗಾಗಿ ಜಿಎಸ್ಟಿ ಟ್ಯಾಕ್ಸ್ ಅನ್ನು ಕಂಪ್ಲೀಟ್ ಮನ್ನಾ ಮಾಡಿ ಅಂತ ಅಂಗಡಿ ಮಾಲೀಕರು ಮನವಿ ಸಲ್ಲಿಕೆ ಮಾಡಿದ್ದಾರೆ. ಅಲ್ಲದೆ, ಜಿಎಸ್ಟಿ ಕೌನ್ಸಿಲ್, ಕೇಂದ್ರ ಸರ್ಕಾರ, ಸಿಎಂಗೂ ಕೂಡ ಪತ್ರ ಬರೆದಿದ್ದಾರೆ.
ಇದೆಲ್ಲದರ ಮಧ್ಯೆ, ಜುಲೈ- 23ರಿಂದ 2 ದಿನಗಳ ಕಾಲ ಹಾಲು, ಸಿಗರೇಟು ಮಾರಾಟ, ಕಾಂಡಿಮೆಂಟ್ಸ್, ಬೇಕರಿ ಬಂದ್ ಮಾಡಲಿದ್ದಾರೆ. ಜುಲೈ 25 ರಂದು ರಾಜ್ಯಾದ್ಯಂತ ಅಂಗಡಿ ಬಂದ್ ಮಾಡಿ ಕುಟುಂಬ ಸಮೇತ ಪ್ರತಿಭಟನೆಗೆ ನಿರ್ಧರಿಸಿರೋ ಕಾರ್ಮಿಕ ಪರಿಷತ್ ನಂತರ ಕೋರ್ಟ್ ಮೊರೆ ಹೋಗಲೂ ಸಜ್ಜಾಗ್ತಿದೆ.
ಯುಪಿಐ ಪೇಮೆಂಟ್ ಗೊಂದಲ ಏನು..?
* ವಾರ್ಷಿಕವಾಗಿ 20 ಲಕ್ಷದಿಂದ 40 ಲಕ್ಷ ರೂ. ವಹಿವಾಟು ಮಾಡಿದವರಿಗೆ ನೊಟೀಸ್
* ಬಡ್ಡಿ ಸಮೇತ 1 ಕೋಟಿಯಿಂದ ಹಿಡಿದು, 60, 30, 20 ಲಕ್ಷ ರೂ. ವರೆಗೆ ಜಿಎಸ್ಟಿ ಕಟ್ಟೋಕೆ ನೋಟಿಸ್
* ಜಿಎಸ್ಟಿ ಕಟ್ಟದೇ ಹೋದರೆ ಅಕೌಂಟ್ ಫ್ರೀಜ್ ಮಾಡುವ ಎಚ್ಚರಿಕೆ
* ತೆರಿಗೆ ವಿನಾಯಿತಿ ಪಡೆದ ತರಕಾರಿ, ಹಣ್ಣಿನ ಅಂಗಡಿಗೂ ಟ್ಯಾಕ್ಸ್ ನೋಟಿಸ್
ಯಾರಿಗೆ ಟ್ಯಾಕ್ಸ್.. ಯಾರಿಗಿಲ್ಲ..?
* ಸರಕು ಪೂರೈಕೆದಾರರ ಸಮಗ್ರ ವಹಿವಾಟು ವಾರ್ಷಿಕ 40 ಲಕ್ಷ ರೂ. ಮೀರಿದ್ರೆ ಜಿಎಸ್ಟಿ ನೋಂದಣಿ ಕಡ್ಡಾಯ
* ಸೇವೆಗಳ ಪೂರೈಕೆದಾರರ ಸಮಗ್ರ ವಹಿವಾಟು ವಾರ್ಷಿಕ 20 ಲಕ್ಷ ರೂ. ಮೀರಿದ್ರೆ ಜಿಎಸ್ಟಿ ನೋಂದಣಿ ಕಡ್ಡಾಯ
* ತರಕಾರಿ, ಹಣ್ಣು ಯಾವುದೇ ತೆರಿಗೆ ವ್ಯಾಪ್ತಿಗೆ ಬರಲ್ಲ
* ಹಾಲು, ಮೊಸರು, ಬ್ರೆಡ್ಗೆ ಟ್ಯಾಕ್ಸ್ ಇರಲ್ಲ
* ಕುರುಕಲು ತಿಂಡಿಗೆ 5% ರಷ್ಟು ಟ್ಯಾಕ್ಸ್
ಅಧಿಕಾರಿಗಳ ಎಡವಟ್ಟೇನು?
– ವಿನಾಯಿತಿ ಇದ್ದರೂ ಹಾಲು, ತರಕಾರಿ ಅಂಗಡಿಗೂ ಟ್ಯಾಕ್ಸ್ ನೋಟಿಸ್
– ವಿನಾಯಿತಿ ಸರಕುಗಳ ಬಿಲ್ ನೀಡಿದ್ರೆ ವಿನಾಯಿತಿ ನೀಡುವ ಸಬೂಬು
– ಜಾಗೃತಿ ಮೂಡಿಸಿ ಜಿಎಸ್ಟಿ ನೋಂದಣಿ ಮಾಡಿಸದೇ ಲಕ್ಷ ಲಕ್ಷ ಟ್ಯಾಕ್ಸ್ ಕಟ್ಟುವಂತೆ ನೊಟೀಸ್
– ಅಧಿಕಾರಿಗಳ ನೋಟಿಸ್ ಎಡವಟ್ಟಿಗೆ ಹೆದರಿದ ಸಣ್ಣ ವ್ಯಾಪಾರಿಗಳು
– ಯುಪಿಐ ಪೇಮೆಂಟ್ಗೆ ನಿರಾಕರಿಸಿ, ಕ್ಯಾಶ್ ಮೊರೆ ಹೋಗಲು ಇವರೇ ಕಾರಣ
ವರ್ತಕರ ಎಡವಟ್ಟೇನು..?
* ವರ್ತಕರಲ್ಲಿ ಜಿಎಸ್ಟಿ ಅರಿವಿನ ಕೊರತೆ ಇರೋದು ನಿಜ
* ಆದರೆ, ಜಿಎಸ್ಟಿ ವಿಚಾರದಲ್ಲಿ ಕೊಂಚ ಎಚ್ಚರಿಕೆ ವಹಿಸಬೇಕಿತ್ತು
* ಡಿಜಿಟಲ್ ಪೇಮೆಂಟ್ನ ಪ್ರತಿ ಮಾಹಿತಿ ಅಧಿಕಾರಿಗಳಿಗೆ ಗೊತ್ತಾಗುತ್ತೆ ಅನ್ನೋದು ಗೊತ್ತು
* ವಾರ್ಷಿಕ ವಹಿವಾಟು ನಿಯಮಾವಳಿಗಿಂತ ಹೆಚ್ಚಿದ್ದರೂ ಜಿಎಸ್ಟಿ ನೋಂದಣಿ ಮಾಡಿಸಿಲ್ಲ
* ರಿಯಾಯಿತಿ ಪಡೆಯಲು ನಮ್ಮ ಬಳಿ ಬಿಲ್ಗಳಿಲ್ಲ ಎನ್ನುತ್ತಿರುವ ವರ್ತಕರು
ʻಪಬ್ಲಿಕ್ ಟಿವಿʼ ರಿಯಾಲಿಟಿ ಚೆಕ್
ಯುಪಿಐ ಪೇಮೆಂಟ್ ಗೊಂದಲದ ಬಗ್ಗೆ ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್ ನಡೆಸಿದ ಬಳಿಕ ವಾಣಿಜ್ಯ ತೆರಿಗೆ ಇಲಾಖೆ ಎಚ್ಚೆತ್ತುಕೊಂಡಿದೆ. ಯುಪಿಐ ನಿಲ್ಲಿಸಿ ಕ್ಯಾಶ್ ರೂಪದಲ್ಲಿ ಹಣ ಸ್ವೀಕರಿಸೋದು ಗಮನಕ್ಕೆ ಬಂದಿದೆ. ವ್ಯಾಪಾರಿಗಳು ಯಾವ ರೀತಿ ವಹಿವಾಟು ನಡೆಸಿದ್ರೂ ಜಿಎಸ್ಟಿ ಕಾಯ್ದೆಯಡಿ ತೆರಿಗೆ ಸಂಗ್ರಹಕ್ಕೆ ಕ್ರಮ ಕೈಗೊಳ್ಳಲಾಗುವುದು ಅಂತ ಎಚ್ಚರಿಕೆ ರವಾನಿಸಿದೆ. ಅಲ್ಲದೆ, ನೋಟಿಸ್ ಕೊಟ್ಟಿರೋ ವಿಚಾರಕ್ಕೆ ಮತ್ತೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ನೋಟಿಸ್ ಬಂದಿರುವ ವರ್ತಕರು ಆದಾಯ ತೆರಿಗೆ ಇಲಾಖೆ ಕಚೇರಿಗೆ ತೆರಳಿ ಸೂಕ್ತ ದಾಖಲಾತಿ ನೀಡಿ ವಿವರಣೆ ನೀಡಬೇಕೆಂದು ತಿಳಿಸಿದೆ.
ವಾಣಿಜ್ಯ ತೆರಿಗೆ ಇಲಾಖೆ ಹೇಳಿದ್ದೇನು..?
* ವರ್ತಕರು ಕಚೇರಿಗೆ ತೆರಳಿ ಸೂಕ್ತ ದಾಖಲಾತಿ ಜೊತೆ ವಿವರಣೆ ನೀಡಬೇಕು
* ತೆರಿಗೆ ಇರುವ ಸರಕಿಗೆ ಮಾತ್ರ ತೆರಿಗೆ ವಿಧಿಸಲಾಗುತ್ತೆ
* ತೆರಿಗೆ ವಿನಾಯಿತಿ ಇರುವ ಸರಕು ಸೇವೆಗಳನ್ನು ಕೈಬಿಡಲಾಗುತ್ತದೆ
* ರಾಜಿ ತೆರಿಗೆ ಪದ್ಧತಿ ಅನ್ನುವ ಉತ್ತಮ ಆಯ್ಕೆ ಇದೆ.
* ವಾರ್ಷಿಕ ವಹಿವಾಟು 1.50 ಕೋಟಿ ರೂ.ಗಿಂತ ಕಡಿಮೆ ಇರುವ ವ್ಯಾಪಾರಿಗಳು ಜಿಎಸ್ಟಿ ಅಡಿ ನೋಂದಣಿ ಪಡೆದು ರಾಜಿ ತೆರಿಗೆ ಪದ್ಧತಿ ಆಯ್ಕೆ ಮಾಡಿಕೊಳ್ಳಬಹುದು.
* ಈ ಪದ್ಧತಿಯಡಿ ಶೇ.0.5ರಷ್ಟು ಎಸ್ಜಿಎಸ್ಟಿ (ಸ್ಟೇಟ್) ಮತ್ತು ಶೇ.0.5ರಷ್ಟು ಸಿಜಿಎಸ್ಟಿ (ಸೆಂಟ್ರಲ್) ಪಾವತಿಸಬೇಕು. ಒಟ್ಟು 1% ನಷ್ಟು ತೆರಿಗೆ ಇದೆ.
* ರಾಜ್ಯದಲ್ಲಿ ಈಗಾಗಲೇ 98,915 ವರ್ತಕರು ರಾಜಿ ತೆರಿಗೆ ಪದ್ಧತಿಯಡಿ ನೋಂದಣಿ
* ವಾರ್ಷಿಕ ವಹಿವಾಟು ಮಿತಿ ಮೀರಿದ್ದರೂ ನೋಂದಣಿ ಮಾಡಿಸಿಕೊಳ್ಳದ ವರ್ತಕರಿಗೆ ಮಾತ್ರ ಈಗ ನೋಟಿಸ್