ಚಿಕ್ಕಬಳ್ಳಾಪುರ: ಮದುವೆಯಾದ ಮರುದಿನವೇ ನವವಿವಾಹಿತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಸೂಲಿಕುಂಟೆ ಗ್ರಾಮದಲ್ಲಿ ನಡೆದಿದೆ.
ವೃತ್ತಿಯಲ್ಲಿ ಬೆಸ್ಕಾಂ ಲೈನ್ ಮ್ಯಾನ್ ಆಗಿದ್ದ ಮುನಿರಾಜು(30) ಆತ್ಮಹತ್ಯೆ ಮಾಡಿಕೊಂಡ ನವವಿವಾಹಿತ. ಮುನಿರಾಜು ಹಾಗೂ ಅವರ ಅಕ್ಕನ ಮಗಳ ಜೊತೆ ಚಿಕ್ಕಬಳ್ಳಾಪುರ ನಗರದ ಗುರುರಾಜ ಕಲ್ಯಾಣಮಂಟಪದಲ್ಲಿ ಸೋಮವಾರ ಮದುವೆ ನಡೆದಿತ್ತು. ಆದರೆ ಮುನಿರಾಜು ಫಸ್ಟ್ ನೈಟ್ ನಲ್ಲಿಯೇ ಮನೆಯ ಕೊಠಡಿಯೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಆತ್ಮಹತ್ಯೆಗೆ ಮುನ್ನ ಮುನಿರಾಜು ಡೆತ್ನೋಟ್ ಬರೆದಿದ್ದು, ನನಗೆ ಈ ಮದುವೆಯೂ ಇಷ್ಟ ಇರಲಿಲ್ಲ. ವೈವಾಹಿಕ ಜೀವನವೂ ನನಗೆ ಇಷ್ಟ ಇಲ್ಲ. ಹೀಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಮದುವೆಗೆ ಮುಂಚೆಯೇ ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದಿದ್ದೆ. ಆದ್ರೆ ಮನೆಯಲ್ಲಿ ಸಂಬಂಧಿಕರು ಇದ್ದ ಕಾರಣ ಆತ್ಮಹತ್ಯೆ ಮಾಡಿಕೊಳ್ಳಲಾಗಲಿಲ್ಲ ಎಂದು ಹೇಳಿದ್ದಾರೆ.
ತಾನು ಮಾಡಿರುವ ಸಾಲದ ಬಗ್ಗೆ ಉಲ್ಲೇಖ ಮಾಡಿರುವ ಮುನಿರಾಜು ಸಾಲ ವಾಪಾಸ್ ಮಾಡುವಂತೆಯೂ ಡೆತ್ನೋಟ್ ನಲ್ಲಿ ಬರೆದಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.