ಮೊದಲ ರಾತ್ರಿ ವಧುವಿನ ಪಾಲಿಗೆ ಆಯ್ತು ಕರಾಳ ರಾತ್ರಿ

Public TV
2 Min Read

– ಪತಿಯ ವಿಷಯ ತಿಳಿದು ಪ್ರಜ್ಞೆ ತಪ್ಪಿದ ಪತ್ನಿ
– ಪ್ರಜ್ಞೆ ಬರುತ್ತಿದ್ದಂತೆ ಆಸ್ಪತ್ರೆಗೆ ಓಡಿದ ವಧು

ಚಂಢೀಗಡ್: ಮದುವೆ ದಿನದಂದು ವರ ಸಂಬಂಧಿಕರೊಂದಿಗೆ ಮೋಜು-ಮಸ್ತಿ ಮಾಡಲು ಹೋಗಿ ಮೊದಲ ರಾತ್ರಿಗೂ ಮುನ್ನವೇ ಮೃತಪಟ್ಟ ಘಟನೆ ಪಂಜಾಬ್‍ನ ಲುದಿಯಾನಾದಲ್ಲಿ ನಡೆದಿದೆ.

ರಾಹುಲ್ ಮೃತಪಟ್ಟ ವರ. ಬುಧವಾರ ಬೆಳಗ್ಗೆ ರಾಹುಲ್ ಮದುವೆಯಾಗಿದ್ದು, ಸಂಜೆ ತನ್ನ ಸಂಬಂಧಿಕರ ಜೊತೆ ಮೋಜುಮಸ್ತಿ ಮಾಡಲು ಕಾರಿನಲ್ಲಿ ಲುದಿಯಾನಾಗೆ ತೆರಳಿದ್ದರು. ಅಲ್ಲಿಂದ ಭಾಟೀಯಾ ಗ್ರಾಮಕ್ಕೆ ತೆರಳುವಾಗ ಕಾರು ಟ್ಯಾಂಕರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ರಾಹುಲ್ ಹಾಗೂ ಆತನ ಬಾವ ರಾಜು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಇನ್ನು ಕೆಲವರು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸರು, ಚಾಲಕ ಕಾರನ್ನು ಅತಿ ವೇಗವಾಗಿ ಚಲಾಯಿಸುತ್ತಿದ್ದನು. 5 ಸೀಟ್ ಇರುವ ಕಾರಿನಲ್ಲಿ 7 ಮಂದಿ ಕುಳಿತು ಪ್ರಯಾಣಿಸುತ್ತಿದ್ದರು. ಎಲ್ಲರೂ ಮೋಜುಮಸ್ತಿ ಮಾಡಿ ತಮ್ಮ ಗ್ರಾಮಕ್ಕೆ ತೆರಳುತ್ತಿದ್ದರು. ಈ ವೇಳೆ ಕಾರು ಹಿಂಬದಿಯಿಂದ ಟ್ಯಾಂಕರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ವರ ಹಾಗೂ ಆತನ ಬಾವ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇನ್ನು ಕಾರಿನಲ್ಲಿದ್ದ ಐವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ, ಕಾರಿನಲ್ಲಿದ್ದ ಏಳು ಮಂದಿ ಮದ್ಯ ಸೇವಿಸಿದ್ದರು. ಅಪಘಾತದ ಮಾಹಿತಿ ಬರುತ್ತಿದ್ದಂತೆ ಎಸಿಪಿ ನರ್ಕೋಟಿಕ್ಸ್ ಸೆಲ್ ರಾಜಕುಮಾರ್ ಚೌಧರಿ ಹಾಗೂ ಉಳಿದ ಪೊಲೀಸರು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರು. ಈ ವೇಳೆ ಕ್ರೇನ್ ಸಹಾಯದಿಂದ ಕಾರನ್ನು ಟ್ಯಾಂಕರ್ ನಿಂದ ಬೇರ್ಪಡಿಸಲಾಯಿತು.

ಈ ಘಟನೆ ಬಗ್ಗೆ ಟ್ಯಾಂಕರ್ ಚಾಲಕ ಶಮ್‍ಶೇರ್ ಕೊಹ್ಲಿ ಮಾತನಾಡಿ, ಸರಾಬಾದಿಂದ ಮೊಟ್ಟೆ ಲೋಡ್ ಮಾಡಿಕೊಂಡು ಜಮ್ಮುಗೆ ಹೋಗುತ್ತಿದೆ. ಈ ವೇಳೆ ಟ್ಯಾಂಕರ್ ಹಿಂಬದಿ ಡಿಕ್ಕಿ ಹೊಡಯಲಾಯಿತು. ತಕ್ಷಣ ನಾನು ಟ್ಯಾಂಕರ್ ನ ಬ್ರೇಕ್ ಹಾಕಿ ಕೆಳಗೆ ಇಳಿದು ನೋಡಿದೆ. ಆಗ ಟ್ಯಾಂಕರಿಗೆ ಕಾರು ಡಿಕ್ಕಿ ಹೊಡೆದಿತ್ತು. ಕೂಡಲೇ ನಾನು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದೆ ಎಂದು ಹೇಳಿದ್ದಾರೆ.

ವಧು ಮೊದಲ ರಾತ್ರಿಯಂದು ತನ್ನ ಪತಿ ರಾಹುಲ್‍ಗಾಗಿ ಕಾಯುತ್ತಿದ್ದಳು. ಈ ವೇಳೆ ಕುಟುಂಬಸ್ಥರು ರಾಹುಲ್ ಅಪಘಾತದಲ್ಲಿ ಮೃತಪಟ್ಟಿದ್ದಾನೆ ಎಂದು ಹೇಳಿದ ತಕ್ಷಣ ವಧು ಪ್ರಜ್ಞೆ ತಪ್ಪಿದ್ದಾಳೆ. ಎಚ್ಚರಗೊಂಡಾಗ ವಧು ಅಳುತ್ತಾ ಆಸ್ಪತ್ರೆಗೆ ಓಡಿ ಹೋಗಿದ್ದಾಳೆ. ಈ ವೇಳೆ ಕೊನೆಯ ಬಾರಿಗೆ ನನ್ನ ಪತಿಯ ಮುಖವನ್ನು ನೋಡಲು ಬಿಡಿ ಎಂದು ಕಣ್ಣೀರು ಹಾಕಿದ್ದಾಳೆ.

Share This Article
Leave a Comment

Leave a Reply

Your email address will not be published. Required fields are marked *