ಯುಗಾದಿ ಹಬ್ಬಕ್ಕೆ ಹೆಚ್‍ಡಿಡಿ, ಮೋದಿ ಸೇರಿದಂತೆ ಗಣ್ಯರಿಂದ ಶುಭಾಶಯ

Public TV
2 Min Read

ಬೆಂಗಳೂರು: ದೇಶಾದ್ಯಂತ ಇಂದು ಯುಗಾದಿ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಈ ಯುಗಾದಿ (Ugadi 2024) ಹಬ್ಬಕ್ಕೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ (HD Devegowda) ಹಾಗೂ ಪ್ರಧಾನಿ ನರೇಂದ್ರ ಮೋದಿ (Narendra Modi) ಸೇರಿದಂತೆ ಗಣ್ಯರು ಶುಭಾಶಯಗಳನ್ನು ತಿಳಿಸಿದ್ದಾರೆ.

ಪ್ರಧಾನಿ ಮೋದಿಯವರು ಕನ್ನಡದಲ್ಲೇ ವಿಶ್ ಮಾಡಿದ್ದಾರೆ. ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಯುಗಾದಿಯು ಹೊಸತನ ಮತ್ತು ನವೀಕರಣದ ಭರವಸೆಯೊಂದಿಗೆ ಹೊಸ ವರ್ಷವನ್ನು ಬರಮಾಡಿಕೊಳ್ಳುತ್ತದೆ. ಈ ಸಂದರ್ಭದಲ್ಲಿ ಶುಭಾಶಯಗಳು. ಎಲ್ಲರಿಗೂ ಅಪರಿಮಿತ ಸಂತೋಷ ಮತ್ತು ಸಮೃದ್ಧಿಯಿಂದ ತುಂಬಿದ ವರ್ಷವನ್ನು ಆಶೀಸುತ್ತೇನೆ. ಈ ಶುಭ ಸಂದರ್ಭವು ಜೀವನದ ಪ್ರತಿಯೊಂದು ವಿಷಯದಲ್ಲೂ ನಿಮಗೆ ಸಂತೋಷವನ್ನು ತರಲಿ ಎಂದು ಶುಭ ಹಾರೈಸಿದ್ದಾರೆ. ಇದನ್ನೂ ಓದಿ: ಪ್ರಕೃತಿಯ ರಮ್ಯಚೈತ್ರ ಕಾಲವೇ ‘ಯುಗಾದಿ’

ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಕೂಡ ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಾಸಯಗಳನ್ನು ತಿಳಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಹೆಚ್‍ಡಿ ಕುಮರಸ್ವಾಮಿಯವರು, ನಾಡಿನ ಸಮಸ್ತ ಜನತೆಗೆ ನಮ್ಮೆಲ್ಲರ ಹೊಸ ವರುಷದ ದಿನವಾದ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಪ್ರಕೃತಿ ಮತ್ತು ಬದುಕಿನ ನಡುವಿನ ಸಂಭ್ರಮವಾಗಿ ಮೇಳೈಸಿರುವ ಈ ಹಬ್ಬವೂ ನಾಡಿನಲ್ಲಿ ಉಂಟಾಗಿರುವ ದುರಿತ ಕಾಲವನ್ನು ಅಳಿಸಲಿ, ಬರದಿಂದ ಕಂಗೆಟ್ಟಿರುವ ಜನರ ಬಾಳಿಗೆ ನೆಮ್ಮದಿ, ಸುಖ-ಶಾಂತಿಯನ್ನು ನೀಡಲಿ. ಆ ವರುಣದೇವನು ಕರುಣೆ ತೋರಿ ಬರದ ಬೇಗೆಯನ್ನು ತೊಲಗಿಸಲಿ ಎಂದು ಪ್ರಾರ್ಥಿಸುತ್ತೇನೆ. ಕ್ರೋಧಿನಾಮ ಸಂವತ್ಸರವು ಎಲ್ಲರಿಗೂ ಶುಭವನ್ನೇ ತರಲಿ ಎಂದು ಆಶಿಸುತ್ತೇನೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಹುಬ್ಬಳ್ಳಿ ಕೇಶವ ಕುಂಜದಲ್ಲಿರುವ ಆರ್ ಎಸ್ ಎಸ್ ಕಚೇರಿಯಲ್ಲಿ ನಡೆದ ಯುಗಾದಿ ಸಂಭ್ರಮದಲ್ಲಿ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಭಾಗಿಯಾಗಿದ್ದಾರೆ. ಆರ್ ಎಸ್ ಎಸ್ ಸಮವಸ್ತ್ರದಲ್ಲಿ ಭಾಗಿಯಾಗಿರುವ ಜೋಶಿಯವರು ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿ, ನಾಡಿನ ಜನತೆಗೆ ಯುಗಾದಿ ಶುಭಾಶಯಗಳನ್ನು ತಿಳಿಸಿದ್ದಾರೆ. ಎಲ್ಲಾ ಕ್ಷೇತ್ರದಲ್ಲಿ ತನ್ನ ವೈಚಾರಿಕ ತಳಹದಿಯಲ್ಲಿ ಅಧಿಪತ್ಯವನ್ನು ಆರ್ ಎಸ್ ಎಸ್ ಮುಂದುವರಿಸುತ್ತಿದೆ. ಇದನ್ನು ಇನ್ನು ಶಕ್ತಗೊಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಪ್ರತಿ ವರ್ಷ ಯುಗಾದಿ ದಿನ ನಾನು ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತೇನೆ ಎಂದರು.

Share This Article