ಮರಿಮೊಮ್ಮಗನ ಹುಟ್ಟುಹಬ್ಬಕ್ಕೆ ಬಾರದ ಅಜ್ಜಿ ಹೆಣವಾದ್ಲು!

Public TV
1 Min Read

ಹರಿಯಾಣ: ತನ್ನ ಮಗನ ಹುಟ್ಟುಹಬ್ಬದ ಪಾರ್ಟಿಗೆ ಆಮಂತ್ರಣ ನೀಡಿದ್ದರೂ ಬರಲಿಲ್ಲವೆಂದು ಅಜ್ಜಿಯನ್ನು ಮೊಮ್ಮಗನೇ ಅಮಾನವೀಯವಾಗಿ ಕೊಲೆ ಮಾಡಿದ ಘಟನೆ ಹರ್ಯಾಣದ ಫತೇಹಬಾದ್ ನಗರದಲ್ಲಿ ನಡೆದಿದೆ.

ರಾಮ್‍ದೇವಿ(70) ಮೃತ ದುರ್ದೈವಿ ಹಾಗೂ ಆಕೆಯ ಮೊಮ್ಮಗ ವಿಕ್ಕಿ(22) ಕೊಲೆಗೈದ ಆರೋಪಿಯೆಂದು ಗುರುತಿಸಲಾಗಿದೆ. ರಾಮ್‍ದೇವಿ ಹಾಗೂ ಆಕೆಯ ಪತಿ ರಾಮ್ ಅವತಾರ್ ಅವರು ಆಸ್ತಿ ವಿಚಾರಕ್ಕೆ ಮನೆಯಲ್ಲಿ ಮಕ್ಕಳ ನಡುವೆ ಗಲಾಟೆಯಾದ ಬಳಿಕ ಇಬ್ಬರೂ ಕುಟುಂಬ ಸದಸ್ಯರಿಂದ ದೂರ ಉಳಿದುಕೊಂಡು ವಾಸವಾಗಿದ್ದರು.

ಶನಿವಾರದಂದು ವಿಕ್ಕಿ ತನ್ನ ಮಗನ ಹುಟ್ಟುಹಬ್ಬದ ಪಾರ್ಟಿಗೆ ಅಜ್ಜಿಯನ್ನು ಕರೆದಿದ್ದನು. ಆದ್ರೆ ಅಜ್ಜಿ ಮಾತ್ರ ಈ ಪಾರ್ಟಿಗೆ ಬಂದಿರಲಿಲ್ಲ. ಆದ್ದರಿಂದ ಸಿಟ್ಟಿಗೆದ್ದ ಮೊಮ್ಮಗ ಪಾರ್ಟಿಗೆ ಯಾಕೆ ಬರಲಿಲ್ಲ ಎಂದು ವಿಚಾರಿಸಲು ಅಜ್ಜಿ ಮನೆಗೆ ಹೋಗಿದ್ದಾನೆ. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಕೋಪಗೊಂಡ ಮೊಮ್ಮಗ ವಸ್ತುವಿನಿಂದ ವೃದ್ಧೆಗೆ ಬಲವಾಗಿ ಹೊಡೆದಿದ್ದಾನೆ. ಪರಿಣಾಮ ಅಜ್ಜಿ ಗಂಭೀರ ಗಾಯಗೊಂಡು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ.

ವಿಕ್ಕಿಯ ಅಜ್ಜ ಪತ್ನಿಯನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ದುರದೃಷ್ಟವಶಾತ್ ಅಜ್ಜಿ ಆಸ್ಪತ್ರೆಗೆ ತಲುಪುವ ಮುನ್ನವೇ ಸಾವನ್ನಪ್ಪಿದ್ದಾರೆ. ಬಳಿಕ ತನ್ನ ಪತ್ನಿಯನ್ನು ಬಲಿಪಡೆದ ಮೊಮ್ಮಗ ಹಾಗೂ ಮಗ, ಸೊಸೆ ವಿರುದ್ಧ ಅಜ್ಜ ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿನ ಆಧಾರದ ಮೇಲೆ ಆರೋಪಿ ವಿಕ್ಕಿಯನ್ನು ಬಂಧಿಸಿದ್ದು, ಆರೋಪಿಯ ತಂದೆ ತಲೆ ಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *