ರಾಮನಾಥಪುರದಲ್ಲಿ ಅದ್ಧೂರಿ ಷಷ್ಠಿ ರಥೋತ್ಸವ

Public TV
3 Min Read

ಹಾಸನ: ರಾಜ್ಯದ ಎರಡನೇ ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ಹಾಸನ (Hassan) ಜಿಲ್ಲೆ, ಅರಕಲಗೂಡು (Arakalgud) ತಾಲೂಕಿನ, ರಾಮನಾಥಪುರದಲ್ಲೂ (Ramanathapura) ಇಂದು ಶ್ರೀ ಪ್ರಸನ್ನ ಸುಬ್ರಹ್ಮಣ್ಯಸ್ವಾಮಿಯ ಮೊದಲ ಷಷ್ಠಿ (Shasti) ರಥೋತ್ಸವ (Chariot Festival) ಅದ್ಧೂರಿಯಿಂದ ಜರುಗಿತು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ರಥೋತ್ಸವದಲ್ಲಿ ಭಾಗಿಯಾಗಿ ರಥಕ್ಕೆ ಹಣ್ಣು-ಜವನ ಎಸೆದು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.

ಈ ಕ್ಷೇತ್ರದ ವಿಶೇಷತೆ ಎಂದರೆ, ಕುಕ್ಕೆ ಸುಬ್ರಹ್ಮಣ್ಯಕ್ಕೆ (Kukke Subrahmanya) ಹೋಗಲಾಗದವರು, ರಾಮನಾಥಪುರದ ಕಾವೇರಿ ನದಿಯಲ್ಲಿ ಮಿಂದು, ವಿಶೇಷ ಪೂಜೆ ಸಲ್ಲಿಸಿದರೆ ಸಾಕು ಕಂಕಣಭಾಗ್ಯ, ರೋಗ-ರುಜಿನ ನಿವಾರಣೆ ಸೇರಿ ಬೇಡಿಕೊಂಡಿದ್ದು ಈಡೇರಲಿದೆ ಎಂಬ ಪ್ರತೀತಿ ಹಿಂದಿನಿಂದಲೂ ನಡೆದುಕೊಂಡು ಬಂದಿರುವುದರಿಂದ ವಿವಿಧೆಡೆಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಇದನ್ನೂ ಓದಿ: ದೆಹಲಿಯಲ್ಲಿ ಮೋದಿ ಭೇಟಿಯಾಗ್ತೀನಿ ಎಂದ ಸಿದ್ದರಾಮಯ್ಯ; ಕಾರಣ ಏನು?

ಸುಪ್ರಸಿದ್ಧ ಕುಕ್ಕೆಸುಬ್ರಹ್ಮಣ್ಯ ರಥೋತ್ಸವ ದಿನದಂದೇ ರಾಮನಾಥಪುರದಲ್ಲೂ ಷಷ್ಠಿಯಂದು ಅದ್ಧೂರಿ ರಥೋತ್ಸವ ಜರುಗಿತು. ಮಧ್ಯಾಹ್ನ 12:30ಕ್ಕೆ ಸರಿಯಾಗಿ ಅಲಂಕೃತ ರಥ, ರಾಮನಾಥಪುರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಸುಬ್ರಹ್ಮಣ್ಯಸ್ವಾಮಿ ಉತ್ಸವಮೂರ್ತಿ ಹೊತ್ತ ರಥ, ರಾಜಬೀದಿಗಳಲ್ಲಿ ಸಾಗುವ ಮುನ್ನ ದೈವೀ ಸ್ವರೂಪ ಎನಿಸಿರುವ ಗರುಡ ನಭದಲ್ಲಿ ಹಾರಾಡಿದರೆ ಶುಭ ಸೂಚನೆ ಎಂಬ ನಂಬಿಕೆ ಹಿಂದಿನಿಂದಲೂ ಇರುವುದರಿಂದ ಇಂದೂ ಸಹ ಗರುಡ ಪ್ರತ್ಯಕ್ಷವಾದ ನಂತರವೇ ರಥ ಮುಂದೆ ಸಾಗಿತು. ಇದನ್ನೂ ಓದಿ: ನನ್ನ ತಂಟೆಗೆ ಬಂದವರಿಗೆ ತಕ್ಕ ಉತ್ತರ ಕೊಟ್ಟಿದ್ದೇನೆ, ಮುಂದೆಯೂ ಬಂದರೆ ಸುಮ್ನೆ ಬಿಡಲ್ಲ: ಶೆಟ್ಟರ್ ವಾರ್ನಿಂಗ್

ಸುಬ್ರಹ್ಮಣ್ಯಸ್ವಾಮಿ ರಥ ಪೂರ್ವಾಭಿಮುಖವಾಗಿ ಸಾಗುತ್ತಿದ್ದಂತೆಯೇ ಜಿಲ್ಲೆ ಹಾಗೂ ನಾಡಿನ ವಿವಿಧೆಡೆಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು, ಹಣ್ಣು-ಜವನ ಎಸೆದು ಜಯಘೋಷ ಮೊಳಗಿಸಿ ತಮ್ಮ ಭಕ್ತಿ ಭಾವ ಪ್ರದರ್ಶನ ಮಾಡಿದರು. ವರ್ಷಕ್ಕೊಮ್ಮೆ ಒಂದು ತಿಂಗಳ ಕಾಲ ನಡೆಯುವ ಷಷ್ಠಿ ಉತ್ಸವದ ವೇಳೆ ಆಗಮಿಸಿ ಇಲ್ಲಿನ ಕಾವೇರಿ ನದಿಯಲ್ಲಿ ಮಿಂದು ಪ್ರಸನ್ನ ಸುಬ್ರಹ್ಮಣ್ಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರೆ ಅಂದುಕೊಂಡಿದ್ದೆಲ್ಲಾ ಈಡೇರಲಿದೆ ಎಂಬ ನಂಬಿಕೆ ಇದೆ. ಕಂಕಣಭಾಗ್ಯ, ಸಂತಾನ ಫಲ ಹಾಗೂ ಚರ್ಮ ರೋಗದಂಥ ಆರೋಗ್ಯ ಸಮಸ್ಯೆಗಳು ಶ್ರೀ ಕ್ಷೇತ್ರಕ್ಕೆ ಬಂದು ಹೋದರೆ ಗುಣವಾಗಲಿವೆ. ಪ್ರಸನ್ನ ಸುಬ್ರಹ್ಮಣ್ಯನ ಸನ್ನಿಧಿ ಅನೇಕ ಪವಾಡ ಸದೃಶ ಸಂಗತಿಗಳನ್ನು ಮೈಗೂಡಿಸಿಕೊಂಡಿರುವುದರ ಸಾವಿರಾರು ವರ್ಷಗಳಿಂದಲೂ ರಾಮನಾಥಪುರಕ್ಕೆ ಅದರದ್ದೇ ಮಹತ್ವವಿದೆ. ಇದನ್ನೂ ಓದಿ: ಮಕ್ಕಳೊಂದಿಗೆ ಮಗುವಾದ ಮೋದಿ – ತನಗಾಗಿ ವಿಶೇಷ ಕವಿತೆ ಹಾಡಿದ ಬಾಲಕಿಗೆ ಭೇಷ್‌ ಎಂದ ಪ್ರಧಾನಿ

ಶ್ರೀ ಕ್ಷೇತ್ರದ ಮತ್ತೊಂದು ವಿಶೇಷ ಎಂದರೆ, ರಥೋತ್ಸವ ವೇಳೆ ಇಲ್ಲಿಗೆ ಬಂದು ಹಣ್ಣು ತುಪ್ಪದ ಹರಕೆ ತೀರಿಸಿದರೆ ಚರ್ಮರೋಗದಂಥ ಕಾಯಿಲೆ ವಾಸಿಯಾಗುತ್ತದೆ. ಕಾವೇರಿ ನದಿಯಲ್ಲಿ ಮಿಂದು ಗಂಗೆ ಪೂಜೆ ಮಾಡಿದರೆ ಮಕ್ಕಳಾಗುತ್ತವೆ ಎನ್ನುವ ಪ್ರತೀತಿ ಇದೆ. ಹೀಗಾಗಿಯೇ ಇದಕ್ಕೆಂದು ಹರಕೆ ಕಟ್ಟಿಕೊಂಡಿದ್ದ ಹೆಂಗಸರು, ನವಜೋಡಿ ಆಗಮಿಸಿ ಪೂಜೆ ಸಲ್ಲಿಸೋದು ವಾಡಿಕೆ. ಮತ್ತೊಂದು ವಿಶೇಷ ಎಂದರೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗಲಾಗದವರು ರಾಮನಾಥಪುರಕ್ಕೆ ಬಂದು ಪೂಜಿಸಿದರೆ ಸಾಕು ಎಂಬ ವಾಡಿಕೆ ಇರುವುದರಿಂದ ಇದನ್ನು ಬಡವರ ಕಾಶಿ ಎಂದು ಕರೆಯುತ್ತಾರೆ. ಇದೇ ಕಾರಣಕ್ಕೆ ಯಾವುದೇ ರೀತಿಯ ಬೇಧ-ಭಾವ ಇಲ್ಲದೇ ಅಪಾರ ಭಕ್ತ ಸಂಗಮವೇ ಇಲ್ಲಿ ಮೇಳೈಸುತ್ತದೆ. ಇದನ್ನೂ ಓದಿ: ಇಂದು ದೆಹಲಿಗೆ ತೆರಳಲಿರುವ ಸಿಎಂಗೆ ಆರ್. ಅಶೋಕ್ ಕಿವಿಮಾತು

ಇಂದಿನಿಂದ ಒಂದು ತಿಂಗಳ ರಾಮನಾಥಪುರದಲ್ಲಿ ಷಷ್ಠಿ ಜಾತ್ರಾ ಮಹೋತ್ಸವ ನಡೆಯಲಿದ್ದು, ನಿತ್ಯವೂ ಸಾವಿರಾರು ಭಕ್ತರು ಬಂದು ಕಾವೇರಿ ನದಿಯಲ್ಲಿ ಮಿಂದು ಶ್ರೀ ಪ್ರಸನ್ನ ಸುಬ್ರಹ್ಮಣ್ಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಹೋಗುತ್ತಾರೆ. ಇದನ್ನೂ ಓದಿ: ಕೇಂದ್ರದಲ್ಲಿ ಬಿಜೆಪಿ ಇರುವುದ್ರಿಂದ ಪ್ರತಾಪ್ ಸಿಂಹನ ರಕ್ಷಣೆ ಮಾಡ್ತಿದ್ದಾರೆ: ದಿನೇಶ್ ಗುಂಡೂರಾವ್ ಆಕ್ರೋಶ

Share This Article