ಬೇರೆ ಕಡೆ ಅನುದಾನ ನೀಡಲು ಮುಂದಾದ ಅಧಿಕಾರಿ – ಗ್ರಾ.ಪಂ ಅಧ್ಯಕ್ಷೆಯಿಂದ ತರಾಟೆ

Public TV
1 Min Read

ಚಿಕ್ಕೋಡಿ/ಬೆಳಗಾವಿ: ದಲಿತರಿಗೆ ಬಂದಿದ್ದ ಅನುದಾನವನ್ನ ಬೇರೆ ಕಡೆ ನೀಡಲು ಬಂದಿದ್ದ ಅಧಿಕಾರಿಯನ್ನ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕು ಪಂಚಾಯ್ತಿ ಕಚೇರಿಯಲ್ಲಿ ನಡೆದಿದೆ.

ಎಲಿಮುನ್ನೋಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಕಸ್ತೂರಿ ತಿಪ್ಪಾಗೋಳ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಹುಕ್ಕೇರಿ ತಾಲೂಕು ಪಂಚಾಯಿತಿ ಕಿರಿಯ ಅಭಿಯಂತರಾದ ಆರ್.ಬಿ.ಶ್ರೀಖಂಡೆ ಎಲಿಮುನ್ನೋಳಿ ಗ್ರಾಮದ ದಲಿತರಿಗೆ ಮೀಸಲಿಟ್ಟಿದ್ದ ಅನುದಾನವನ್ನ ಬೇರೆ ಕಡೆ ವರ್ಗಾವಣೆ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ತಿಳಿದು ವಿಚಾರಿಸಲು ತಾಲೂಕು ಪಂಚಾಯ್ತಿ ಕಚೇರಿಗೆ ಬಂದಿದ್ದರು. ಈ ವೇಳೆ ಅವರ ಜೊತೆಗೆ ಅಸಭ್ಯವಾಗಿ ವರ್ತಿಸಿದ ಅಭಿಯಂತರರ ವಿರುದ್ಧ ಗರಂ ಆದ ಅಧ್ಯಕ್ಷರು ಶ್ರೀಖಂಡೆರನ್ನು ತರಾಟೆಗೆ ತೆಗೆದುಕೊಂಡರು.

ಇದನ್ನೆಲ್ಲಾ ಗಮನಿಸಿ ತೆಪ್ಪಗಾದ ಶ್ರೀಖಂಡೆ, ನೀವು ಎಲ್ಲಿ ಹೇಳುತ್ತೀರೋ ಅಲ್ಲಿಯೇ ಬೋರ್ ವೆಲ್ ಕೊರೆಸಿ ಕೊಡುತ್ತೇನೆ ಹೋಗಿ ಎಂದು ಸಮಾಧಾನ ಮಾಡಲು ಮುಂದಾಗಿದ್ದರು. ಅಧ್ಯಕ್ಷರು ತರಾಟೆಗೆ ತೆಗೆದುಕೊಳ್ಳುತ್ತಿದ್ದ ದೃಶ್ಯವನ್ನ ಮೊಬೈಲ್‍ನಲ್ಲಿ ಸೆರೆ ಹಿಡಿಯುತ್ತಿದ್ದ ಪತ್ರಕರ್ತರ ಮೇಲೂ ದರ್ಪ ತೋರಿದ್ದಾರೆ. ಮುಂದೆ ಬನ್ನಿ ಇನ್ನೂ ಚೆನ್ನಾಗಿ ಬರುತ್ತೆ ಎಂದು ಉಡಾಫೆಯಾಗಿ ಮಾತಾಡಿದ್ದಾರೆ. ಆಗ ಅಲ್ಲಿದ್ದ ಪತ್ರಕರ್ತರು ಅಧಿಕಾರಿಯನ್ನ ತರಾಟೆಗೆ ತೆಗೆದುಕೊಂಡರು. ಬಳಿಕ ತೆಪ್ಪಗಾಗಿ ಕುಳಿತ ಅಧಿಕಾರಿ ಇರುಸು ಮುರಿಸುಗೊಂಡು ತಮ್ಮ ಕಾರ್ಯವನ್ನ ಆರಂಭಿಸಿದರು.

Share This Article
Leave a Comment

Leave a Reply

Your email address will not be published. Required fields are marked *