ಸಾಲವಾಗಿ ಮದ್ಯ ಕೇಳಿದ್ದಕ್ಕೆ ಗ್ರಾ.ಪಂ ಸದಸ್ಯ, ತಮ್ಮನಿಂದ ವ್ಯಕ್ತಿಯ ಬರ್ಬರ ಕೊಲೆ

Public TV
1 Min Read

ಚಿಕ್ಕಬಳ್ಳಾಪುರ: ಕ್ಷುಲ್ಲಕ ಕಾರಣಕ್ಕೆ ಗ್ರಾಮ ಪಂಚಾಯತಿ ಸದಸ್ಯ ಹಾಗೂ ತಮ್ಮ ಸೇರಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಹುಲುಗುಮ್ಮನಹಳ್ಳಿಯಲ್ಲಿ ನಡೆದಿದೆ.

ಹುಲುಗುಮ್ಮನಹಳ್ಳಿಯ ಕೃಷ್ಣಕುಮಾರ್ (33) ಕೊಲೆಯಾದ ವ್ಯಕ್ತಿ. ಗ್ರಾಮ ಪಂಚಾಯತಿ ಸದಸ್ಯ ಕೃಷ್ಣಪ್ಪ ಹಾಗೂ ನಾಗೇಶ್ ಕೊಲೆ ಮಾಡಿದ ಆರೋಪಿಗಳು. ಕೊಲೆಯ ಬಳಿಕ ಆರೋಪಿಗಳು ಘಟನಾ ಸ್ಥಳದಿಂದ ಪರಾರಿಯಾಗಿದ್ದಾರೆ.

ಆಗಿದ್ದೇನು?:
ಮದ್ಯ ಸೇವನೆಗೆ ಒಳಗಾಗಿದ್ದ ಕೃಷ್ಣಕುಮಾರ್, ಕುಡಿದ ಅಮಲಿನಲ್ಲಿ ಗ್ರಾಮದಲ್ಲಿ ಚಾಕು ಹಿಡಿದು ಕೆಲವರಿಗೆ ಬೆದರಿಸುತ್ತಿದ್ದ. ಇತ್ತ ಸಣ್ಣ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ನಾಗೇಶ್, ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ. ಕುಡಿದ ಅಮಲಿನಲ್ಲಿದ್ದ ಕೃಷ್ಣಕುಮಾರ್ ಮದ್ಯವನ್ನು ಸಾಲ ಕೊಡಿ ಎಂದು ನಾಗೇಶ್‍ಗೆ ಕೇಳಿದ್ದ. ಆದರೆ ಈ ಹಿಂದಿನ ಸಾಲದ ಹಣವನ್ನೇ ಪಾವತಿಸಿಲ್ಲ. ಹೀಗಾಗಿ ಮದ್ಯವನ್ನು ಸಾಲ ಕೊಡಲ್ಲ ಎಂದು ನಾಗೇಶ್ ಹೇಳಿದ್ದ ಎನ್ನಲಾಗಿದೆ.

ಮದ್ಯದ ವಿಚಾರವಾಗಿ ನಾಗೇಶ್ ಹಾಗೂ ಕೃಷ್ಣಕುಮಾರ್ ನಡುವೆ ಮಾತಿ ಮಾತು ಬೆಳೆದು ಗಲಾಟೆ ನಡೆದಿದೆ. ಈ ವೇಳೆ ಕೃಷ್ಣಪ್ಪ ತಮ್ಮನ ಜೊತೆಗೆ ಸೇರಿ ಕೃಷ್ಣಕುಮಾರ್ ಮೇಲೆ ಹಲ್ಲೆ ನಡೆಸಿದ್ದಾರೆ. ನಾಗೇಶ್ ಇಟ್ಟಿಗೆ ಹಾಗೂ ಕಲ್ಲಿನಿಂದ ಕೃಷ್ಣಕುಮಾರ್ ತಲೆಗೆ ಬಲವಾಗಿ ಹೊಡೆದಿದ್ದಾನೆ. ಪರಿಣಾಮ ಸ್ಥಳದಲ್ಲೇ ಬಿದ್ದ ಕೃಷ್ಣಕುಮಾರ್ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಈ ಕುರಿತು ಸ್ಥಳೀಯರು ಮಾಹಿತಿ ನೀಡುತ್ತಿದ್ದಂತೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಚಿಕ್ಕಬಳ್ಳಾಪುರ ಎಸ್‍ಪಿ ಸಂತೋಷ್ ಬಾಬು ಅವರು ಪರಿಶೀಲನೆ ನಡೆಸಿದರು. ಮೃತ ಕೃಷ್ಣಕುಮಾರ್ ಅಕ್ಕ ಹಾಗೂ ಹೆಂಡತಿ ಚಿಂತಾಮಣಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *