ಭಯೋತ್ಪಾದನೆ ನಿಗ್ರಹಕ್ಕೆ ಭಾರತದಿಂದ ʼಪ್ರಹಾರ್‌ʼ ಅಸ್ತ್ರ – ಈ ನೀತಿ ಏನು ಹೇಳುತ್ತೆ? ಉದ್ದೇಶವೇನು?

5 Min Read

ಷ್ಟು ದಿನ ಭಯೋತ್ಪಾದನೆ (Terrorism) ವಿರುದ್ಧ ಹೋರಾಡಲು ನಮ್ಮ ಬಳಿ ಕಾನೂನುಗಳಿದ್ದವು, ಸೇನೆ ಇತ್ತು. ಆದರೆ ಒಂದು ಸಮಗ್ರವಾದ ರಾಷ್ಟ್ರೀಯ ನೀತಿ ಇರಲಿಲ್ಲ. ಈಗ ಭಾರತ ತನ್ನ ಆಂತರಿಕ ಭದ್ರತೆಯನ್ನು ಮತ್ತಷ್ಟು ಬಲಪಡಿಸಲು ಐತಿಹಾಸಿಕ ಹೆಜ್ಜೆಯನ್ನಿಟ್ಟಿದೆ. ಅದರಂತೆ, ಕೇಂದ್ರ ಗೃಹ ಸಚಿವಾಲಯ ದೇಶದ ಮೊಟ್ಟಮೊದಲ ಭಯೋತ್ಪಾದನಾ ವಿರೋಧಿ ನೀತಿ ʼಪ್ರಹಾರ್ʼ (PRAHAAR Policy) ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ.

ಇಲ್ಲಿಯವರೆಗೆ ಸಾಂಪ್ರದಾಯಿಕ ಮಾದರಿಯ ಭಯೋತ್ಪಾದನೆಯನ್ನು ಎದುರಿಸಲು ಸಜ್ಜಾಗಿದ್ದ ಭಾರತ, ಈಗ ಡಿಜಿಟಲ್ ಲೋಕದ ಅಪಾಯಗಳಿಂದ ಹಿಡಿದು ಡ್ರೋನ್ ದಾಳಿಗಳವರೆಗೆ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸಲು ಈ ಹೊಸ ಸಮರ ತಂತ್ರವನ್ನು ರೂಪಿಸಿದೆ. ಗಡಿಯಾಚೆಗಿನ ಉಗ್ರರಿಂದ ಹಿಡಿದು, ಡಾರ್ಕ್ ವೆಬ್‌ನಲ್ಲಿ ಅವಿತು ಕುಳಿತಿರೋ ಕ್ರಿಮಿನಲ್ ಹ್ಯಾಕರ್ಸ್‌ವರೆಗೆ ಯಾರನ್ನೂ ಬಿಡಲ್ಲ ಎಂಬ ಸ್ಪಷ್ಟ ಸಂದೇಶವನ್ನು ಈ ನೀತಿ ಕೊಟ್ಟಿದೆ. ಹಾಗಾದ್ರೆ ಏನಿದು ಪ್ರಹಾರ್ ನೀತಿ? ಉದ್ದೇಶವೇನು? ಉಗ್ರರ ನಿಗ್ರಹಕ್ಕೆ ಇದು ಹೇಗೆ ಸಹಾಯಕಾರಿ ಎಂಬ ಕುರಿತು ಇಲ್ಲಿ ವಿವರಿಸಲಾಗಿದೆ.

ಪ್ರಹಾರ್‌ ಎಂದರೇನು?
ಪ್ರಹಾರ್ ಎನ್ನುವುದು ಭಾರತದ ಮೊದಲ ಅಧಿಕೃತ ಭಯೋತ್ಪಾದನಾ ನಿಗ್ರಹ ನೀತಿಯಾಗಿದೆ. ಇದನ್ನು ಒಂದು ನಿಯಮಾವಳಿ ಪುಸ್ತಕದಂತೆ ಪರಿಗಣಿಸಿ. ಇದೊಂದು ಸ್ಪಷ್ಟವಾಗಿ ರೂಪಿಸಿರುವ ದಾಖಲೆಯಾಗಿದ್ದು, ಪ್ರತಿಯೊಂದು ಸರ್ಕಾರಿ ಸಂಸ್ಥೆಗೆ, ಪ್ರತಿಯೊಂದು ಪೊಲೀಸ್ ಪಡೆಗಳಿಗೆ, ಪ್ರತಿಯೊಂದು ಎನ್‌ಜಿಒಗಳಿಗೆ ಮತ್ತು ಪ್ರತಿಯೊಂದು ರಾಜ್ಯ ಸರಕಾರಕ್ಕೆ ಭಯೋತ್ಪಾದನಾ ನಿಗ್ರಹದಲ್ಲಿ ಅವುಗಳ ಪಾತ್ರವನ್ನು ಸ್ಪಷ್ಟವಾಗಿ ವಿವರಿಸುತ್ತದೆ. ಈ ನೀತಿಗೂ ಮುನ್ನ, ಎಲ್ಲರೂ ತಮ್ಮದೇ ವಿಧಾನದಲ್ಲಿ ಕಾರ್ಯಾಚರಿಸುತ್ತಿದ್ದರು. ಆದರೆ, ಈಗ ಭಾರತ ಒಂದು ಏಕೀಕೃತ ಯೋಜನೆಯನ್ನು ರೂಪಿಸಿಕೊಂಡಿದೆ.

ಇಂದಿನ ಭಯೋತ್ಪಾದಕರು ಕೇವಲ ಬಂದೂಕು ಶಸ್ತ್ರಾಸ್ತ್ರಗಳ ಮೇಲೆ ಅವಲಂಬಿತರಾಗಿಲ್ಲ. ಬದಲಿಗೆ ಅವರು ಕ್ರಿಪ್ಟೋ ಕರೆನ್ಸಿ ವಾಲೆಟ್‌ಗಳು, ಎನ್‌ಕ್ರಿಪ್ಶನ್ ತಂತ್ರಗಳು ಮತ್ತು ಅನಾಮಧೇಯ ಸಂವಹನ ವಿಧಾನಗಳನ್ನು ಬಳಸಿಕೊಂಡು ತಮ್ಮ ಚಟುವಟಿಕೆಗಳನ್ನು ಮುಚ್ಚಿಹಾಕುತ್ತಿದ್ದಾರೆ. ಈ ಡಿಜಿಟಲ್ ಅನಾಮಧೇಯತೆ ತನಿಖಾ ಸಂಸ್ಥೆಗಳ ಮುಂದೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

2024ರಲ್ಲಿ ಕೇಂದ್ರ ಗೃಹಸಚಿವ ಅಮಿತ್‌ ಶಾ, ಇಂದಿನ ಭಯೋತ್ಪಾದನೆ ನಾನಾ ಆಯಾಮಗಳನ್ನು ಪಡೆದುಕೊಂಡಿದೆ. ಕೇವಲ ಸ್ಫೋಟಕ ಸಿಡಿಸುವುದು ಮಾತ್ರವಲ್ಲದೇ ಮಾದಕ ಪದಾರ್ಥಗಳ ಸರಬರಾಜು, ಸೈಬರ್‌ ಕ್ರೈಮ್‌ ಇತ್ಯಾದಿ ರೂಪಗಳನ್ನು ಪಡೆದುಕೊಂಡಿದೆ. ಭಾರತ ಇದನ್ನು ಸಮಗ್ರವಾಗಿ ಎದುರಿಸಬೇಕಾದರೆ ಹೊಸದೊಂದು ನೀತಿ ರಚನೆಯಾಗಬೇಕು ಎಂದಿದ್ದರು. ಇದಾದ ಕೆಲವೇ ವರ್ಷಗಳಲ್ಲಿ ಭಯೋತ್ಪಾದನೆ ವಿರುದ್ಧ ಹೊಸ ನೀತಿ ಜಾರಿಯಾಗಿದೆ.

ಉದ್ದೇಶವೇನು?
ಭಯೋತ್ಪಾದನೆಗೆ ಯಾವುದೇ ಧರ್ಮ, ಜಾತಿ ಅಥವಾ ರಾಷ್ಟ್ರೀಯತೆ ಇಲ್ಲ ಎಂದು ಹೇಳುವ ಈ ನೀತಿ 2029ರ ಒಳಗೆ ಭಯೋತ್ಪಾದನೆ ಮುಕ್ತ ದೇಶವನ್ನಾಗಿಸಬೇಕೆಂಬ ಉದ್ದೇಶವನ್ನು ಹೊಂದಿದೆ. ಅಲ್ಲದೇ ಎಲ್ಲಾ ಭದ್ರತಾ ಸಂಸ್ಥೆಗಳು ಹಾಗೂ ಸ್ಥಳೀಯ ಪೊಲೀಸರೊಂದಿಗೆ ಸಮನ್ವಯತೆ ಸಾಧಿಸುವುದು ಇದರ ಉದ್ದೇಶ.

ಏಳು ಪದರಗಳು:
ಪ್ರಹಾರ್ ನೀತಿಯಲ್ಲಿ ‘ಪಿ’ ಎನ್ನುವುದು ಪ್ರಿವೆನ್ಷನ್ ಅಥವಾ ತಡೆಗಟ್ಟುವಿಕೆಯನ್ನು ಸೂಚಿಸುತ್ತದೆ. ಇದು ಗುಪ್ತಚರ ಮಾಹಿತಿ ಕಲೆಹಾಕುವಿಕೆಯಾಗಿದೆ. ವಿವಿಧ ಗುಪ್ತಚರ ಸಂಸ್ಥೆಗಳು ಯಾವುದೇ ವಿಳಂಬವಿಲ್ಲದೆ ಪರಸ್ಪರರ ನಡುವೆ ಮಾಹಿತಿ ಹಂಚಿಕೊಳ್ಳಬೇಕು. ಸೈಬರ್ ಕಾರ್ಯಾಚರಣೆಗಳು ಇದರಲ್ಲಿ ಬಹಳ ದೊಡ್ಡ ಪಾತ್ರ ಹೊಂದಿದ್ದು, ಭಯೋತ್ಪಾದನಾ ಗುಂಪುಗಳು ಇಂದು ತಮ್ಮ ದಾಳಿಗಳನ್ನು ಅಂತರ್ಜಾಲದ ಮೂಲಕವೇ ರೂಪಿಸುತ್ತವೆ. ಅವರು ಕ್ರಮ ಕೈಗೊಳ್ಳುವ ಮುನ್ನವೇ ಆನ್‌ಲೈನ್ ಮೂಲಕ ಅವರನ್ನು ಸೆರೆಹಿಡಿಯುವುದು ರಕ್ಷಣೆಯ ಮೊದಲ ಹಂತವಾಗಿದೆ.

‘ಆರ್’ ಎನ್ನುವುದು ರೆಸ್ಪಾನ್ಸ್ (ಪ್ರತಿಕ್ರಿಯೆ) ಅನ್ನು ಸೂಚಿಸುತ್ತದೆ. ಯಾವುದೇ ದಾಳಿಯ ಸ್ಥಳವಾದರೂ ಅಲ್ಲಿಗೆ ಮೊದಲು ಸ್ಥಳೀಯ ಪೊಲೀಸರು ತಲುಪುತ್ತಾರೆ. ಎನ್‌ಎಸ್‌ಜಿ ಅಥವಾ ನ್ಯಾಷನಲ್ ಸೆಕ್ಯುರಿಟಿ ಗಾರ್ಡ್ ಭಾರತದ ಅತ್ಯುನ್ನತ ಭಯೋತ್ಪಾದನಾ ನಿಗ್ರಹ ಪಡೆಯಾಗಿದ್ದು, ಒತ್ತೆಯಾಳುಗಳ ಬಿಡುಗಡೆಯಂತಹ ಕಾರ್ಯಾಚರಣೆಗಳಿಗೆ ತರಬೇತಿ ಹೊಂದಿದೆ. ಅವರ ಪಾತ್ರವನ್ನೂ ಈಗ ನೂತನ ನೀತಿಯಲ್ಲಿ ಅಧಿಕೃತವಾಗಿ ಸೇರಿಸಲಾಗಿದೆ.

ಇನ್ನು ‘ಎ’ ಅಗ್ರಿಗೇಟಿಂಗ್ ಕೆಪಾಸಿಟೀಸ್ (ಸಾಮರ್ಥ್ಯಗಳ ಒಗ್ಗೂಡುವಿಕೆ) ಅನ್ನು ಸೂಚಿಸುತ್ತದೆ. ಅಂದರೆ, ನಮ್ಮ ಪಡೆಗಳಿಗೆ ಅತ್ಯುತ್ತಮ ತಂತ್ರಜ್ಞಾನ, ಸಂಪನ್ಮೂಲಗಳು, ಮತ್ತು ತರಬೇತಿಗಳನ್ನು ಒದಗಿಸುವುದು. ಇದರೊಡನೆ, ಎಲ್ಲ ರಾಜ್ಯಗಳಾದ್ಯಂತ ಒಂದೇ ರೀತಿಯ ಶಿಷ್ಟಾಚಾರಗಳನ್ನು ಜಾರಿಗೆ ತರುವುದರಿಂದ, ಯಾವುದೇ ದಾಳಿಯಾದರೂ ಕ್ಷಿಪ್ರ, ಸಂಯೋಜಿತ ಮತ್ತು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ.

‘ಹೆಚ್’ ಎನ್ನುವುದು ಹ್ಯೂಮನ್ ರೈಟ್ಸ್ ಆಂಡ್ ರೂಲ್ ಆಫ್ ಲಾ (ಮಾನವ ಹಕ್ಕುಗಳು ಮತ್ತು ಕಾನೂನಿನ ನಿಯಮಗಳು) ಎನ್ನುವುದನ್ನು ಪ್ರತಿನಿಧಿಸುತ್ತದೆ. ಭಯೋತ್ಪಾದನೆಯ ವಿರುದ್ಧ ಹೋರಾಟ ನಡೆಸುವಾಗಲೂ, ಭಾರತ ಸೂಕ್ತ ಕಾನೂನು ಪ್ರಕ್ರಿಯೆಗಳನ್ನು ಅನುಸರಿಸಬೇಕು. ನೂತನ ನೀತಿ ಭಾರತದ ನ್ಯಾಯ ಪರಂಪರೆಯನ್ನು ಮುಂದುವರಿಸುವ ಬಯಕೆಯನ್ನು ಪ್ರದರ್ಶಿಸುತ್ತದೆ.

‘ಎ’ ಎನ್ನುವುದು ಅಟೆನುವೇಟಿಂಗ್ ಅನ್ನು ಸೂಚಿಸುತ್ತದೆ. ಇದು ಮೂಲಭೂತವಾದವನ್ನು ಬೇರಿನಿಂದಲೇ ನಿವಾರಿಸಲು ಪ್ರಯತ್ನಿಸುತ್ತದೆ. ಎನ್‌ಜಿಒಗಳು, ಧಾರ್ಮಿಕ ಮುಖಂಡರು ಮತ್ತು ಸಮುದಾಯ ಬೋಧಕರಿಗೆ ಸುಲಭವಾಗಿ ದಾರಿ ತಪ್ಪಬಲ್ಲ ಯುವಕರಿಗೆ ಸರಿಯಾದ ಮಾರ್ಗದರ್ಶನ ನೀಡುವಂತೆ ಸೂಚಿಸಲಾಗುತ್ತದೆ. ಬಹಳಷ್ಟು ಬಾರಿ ಬಡತನ ಮತ್ತು ಅಸಹಾಯಕತೆಗಳೂ ಯುವ ಜನರನ್ನು ತಪ್ಪು ದಾರಿಗೆ ತಳ್ಳುವ ಸಾಧ್ಯತೆಗಳಿರುವುದರಿಂದ, ನೂತನ ನೀತಿ ಶಿಕ್ಷಣ, ವಸತಿ, ಮತ್ತು ಉದ್ಯೋಗಗಳ ಕುರಿತೂ ಮಾತನಾಡುತ್ತದೆ.

‘ಎ’ ಅಲೈನಿಂಗ್ ವಿದ್ ಗ್ಲೋಬಲ್ ಎಫರ್ಟ್ಸ್ (ಜಾಗತಿಕ ಪ್ರಯತ್ನಗಳಿಗೆ ಪೂರಕವಾಗುವುದು) ಅನ್ನು ಸೂಚಿಸುತ್ತದೆ. ಭಯೋತ್ಪಾದನೆಯ ವಿರುದ್ಧ ಭಾರತ ಏಕಾಂಗಿಯಾಗಿ ಸೆಣಸಲು ಸಾಧ್ಯವಿಲ್ಲ. ಗುಪ್ತಚರ ಹಂಚಿಕೆ, ಹಸ್ತಾಂತರ ಒಪ್ಪಂದಗಳು, ಮತ್ತು ವಿಶ್ವಸಂಸ್ಥೆಯೊಡನೆ ಕಾರ್ಯಾಚರಿಸುವ ಕ್ರಮಗಳನ್ನು ಕೈಗೊಂಡು, ವಿದೇಶೀ ಭಯೋತ್ಪಾದಕರನ್ನು ಗುರುತಿಸುವುದು ಈ ನೀತಿಯ ಭಾಗವಾಗಿದೆ. ಭಯೋತ್ಪಾದನೆ ಜಾಗತಿಕ ಸಮಸ್ಯೆಯಾಗಿದ್ದು, ಇದಕ್ಕೆ ಜಾಗತಿಕ ಪರಿಹಾರದ ಅಗತ್ಯವಿದೆ.

‘ಆರ್’ ರಿಕವರಿ ಆಂಡ್ ರೆಸಿಲಿಯೆನ್ಸ್ (ಚೇತರಿಕೆ ಮತ್ತು ಸ್ಥಿತಿಸ್ಥಾಪಕತ್ವ) ಸೂಚಿಸುತ್ತದೆ. ಒಂದು ಭಯೋತ್ಪಾದಕ ದಾಳಿ ನಡೆದಾಗ, ಅದು ಜನರ ಹತ್ಯೆ ನಡೆಸುವುದು ಮಾತ್ರವಲ್ಲ. ಬದಲಿಗೆ, ಸಾಮಾಜಿಕ ಆಘಾತವನ್ನೂ ಸೃಷ್ಟಿಸುತ್ತದೆ. ಭಯೋತ್ಪಾದಕ ದಾಳಿಯಲ್ಲಿ ಪಾರಾದವರು ಜೀವನಪರ್ಯಂತ ನೋವನ್ನು ತಮ್ಮೊಡನೆ ಹೊತ್ತಿರುತ್ತಾರೆ. ಈ ಪದರ ವೈದ್ಯರು, ಮನಶ್ಶಾಸ್ತ್ರಜ್ಞರು, ಎನ್‌ಜಿಒಗಳು ಮತ್ತು ಬೆಂಬಲ ವ್ಯವಸ್ಥೆಗಳ ಮೂಲಕ ಅವರ ಚೇತರಿಕೆಗೆ ಗಮನ ಹರಿಸುತ್ತದೆ.

ಉಗ್ರರ ಸಂಹಾರ:
ಈ ಮೊದಲು ದಾಳಿ ನಡೆಸಿದ ಉಗ್ರರನ್ನು ಬಂಧಿಸಿ ಅವರ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುತ್ತಿದ್ದರು.ಅವರಿಗೆ ಸರಿಯಾದ ಶಿಕ್ಷೆ ಆಗುತ್ತದೆ ಎಂಬ ಖಾತರಿ ಇರಲಿಲ್ಲ. ಆದರೆ ಈ ನೀತಿ ವಿಭಿನ್ನವಾಗಿದೆ. ಉಗ್ರರನ್ನು ಬಂಧಿಸುವುದರಿಂದ ಹಿಡಿದು ನ್ಯಾಯಾಲಯಕ್ಕೆ ಹಾಜರುಪಡಿಸುವವರೆಗೂ ಕಾನೂನು ತಜ್ಞರು ಜೊತೆಗಿರಲಿದ್ದಾರೆ.ಇದರಿಂದ ಉಗ್ರರು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲವೆಂದು ನೀತಿ ಹೇಳುತ್ತದೆ. ಅಲ್ಲದೇ ದಾಳಿಗೂ ಮುನ್ನ ಗುಪ್ತಚರ ಇಲಾಖೆ ಮಾಹಿತಿಯನ್ನು ಆಧರಿಸಿ ಉಗ್ರರನ್ನು ಸಂಹಾರ ಮಾಡುವ ತಂತ್ರವನ್ನೂ ಈ ನೀತಿ ಒಳಗೊಂಡಿದೆ.

ಭದ್ರತಾ ಪಡೆಗಳೊಂದಿಗೆ ಸಮನ್ವಯ:
ದೇಶದಲ್ಲಿ ಏಕರೂಪವಾದ ಉಗ್ರ ನಿಗ್ರಹ ದಳದ ಪಾಲಿಸಿಯನ್ನು ಜಾರಿ ಮಾಡುವುದರಿಂದ ದೇಶದ ಯಾವುದೇ ಮೂಲೆಯಲ್ಲಿ ಉಗ್ರ ಚಟುವಟಿಕೆ ನಡೆದರೆ ತಕ್ಷಣ ಎಲ್ಲಾ ರಾಜ್ಯದ ಪೊಲೀಸರಿಗೆ ಮಾಹಿತಿ ರವಾನೆಯಾಗುತ್ತದೆ. ಅಲ್ಲದೇ ಪೊಲೀಸ್‌ ಸಹಯೋಗದಲ್ಲಿ ಕಾರ್ಯಾಚರಣೆಗಳು ನಡೆಯುತ್ತದೆ.

ಡ್ರೋನ್‌, ಡಾರ್ಕ್‌ವೆಬ್:‌
ಪ್ರಸ್ತುತ ಉಗ್ರರು ಡ್ರೋನ್‌ಗಳ ಮೂಲಕ ಮಾದಕ ಪದಾರ್ಥ, ಆಯುಧ ಸೇರಿದಂತೆ ಉಗ್ರರಿಗೆ ಬೇಕಾದ ಇತರೆ ಸಲಕರಣೆಗಳನ್ನು ತಲುಪಿಸುತ್ತಿರುವುದು ಅನೇಕ ಬಾರಿ ವರದಿಯಾಗಿದೆ. ಮತ್ತೊಂದೆಡೆ ಡಾರ್ಕ್‌ವೆಬ್‌, ಸೈಬರ್‌ ದಾಳಿಗಳನ್ನು ನಡೆಸುತ್ತಿದ್ದಾರೆ. ಇದನ್ನು ಎದುರಿಸಲು ಸಿಬಿಆರ್‌ಎನ್‌ಇಡಿ ಇನ್ನಷ್ಟು ಬಲಿಷ್ಟವಾಗಲಿದೆ.ಇದರೊಂದಿಗೆ ಭಯೋತ್ಪಾದಕರಿಗೆ ಸಿಗುತ್ತಿರುವ ಹಣಕಾಸಿನ ನೆರವನ್ನೂ ತಪ್ಪಿಸುವ ಯೋಜನೆಯನ್ನು ಈ ನಿತಿಯಲ್ಲಿ ಉಲ್ಲೇಖಿಸಲಾಗಿದೆ.

ಯುವಕರ ಬ್ರೈನ್‌ವಾಷ್‌ಗೆ ಕಡಿವಾಣ:
ಜಮ್ಮು ಕಾಶ್ಮೀರ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಯುವಕರನ್ನು ಮನಪರಿವರ್ತನೆ ಮಾಡಿ ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗುವಂತೆ ಮಾಡಲಾಗುತ್ತಿತ್ತು. ಹೊಸ ನೀತಿಯಿಂದ ಇದಕ್ಕೆ ಕಡಿವಾಣ ಬೀಳಲಿದೆ. ದೇಶದಲ್ಲಿ ಯಾವೊಬ್ಬ ಯುವಕ ಭಯೋತ್ಪಾದನೆ ಪ್ರಭಾವಕ್ಕೆ ಒಳಗಾಗುತ್ತಿದ್ದಾನೆ ಎಂದು ತಿಳಿದ ಕೂಡಲೇ ಆತನನ್ನು ಬಂಧಿಸುವ ಬದಲಾಗಿ ಆತನಿಗೆ ಸೂಕ್ತವಾಗಿ ಕೌನ್ಸಿಲಿಂಗ್‌ ಕೊಡಿಸಲಾಗುತ್ತದೆ. ಇದರೊಂದಿಗೆ ಜೈಲುಗಳಲ್ಲಿಯೂ ಉಗ್ರರಿಂದ ನಡೆಯುವ ಮನಪರಿವರ್ತನೆ ತಡೆಯಲು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತರಲಾಗಿದೆ.

ಭಾರತ ಭಯೋತ್ಪಾದನೆಯಿಂದ ಅಪಾರ ಸಂಕಷ್ಟವನ್ನು ಅನುಭವಿಸಿದೆ. ಸಾವಿರಾರು ಜೀವಗಳನ್ನು ಭಯೋತ್ಪಾದನೆ ಕಸಿದಿದೆ. ಪ್ರತೀ ಸರ್ಕಾರವೂ ‘ಶೂನ್ಯ ಸಹಿಷ್ಣುತೆ’ ಎಂದಿವೆಯಾದರೂ, ಈ ಬಾರಿ ಅದನ್ನು ಬರೆದು, ಅಧಿಕೃತವಾಗಿಸಿ ಜಾರಿಗೊಳಿಸಲಾಗಿದೆ. ಮಾತುಗಳು ಈಗ ನೀತಿಯಾಗಿವೆ ಎಂಬ ಸರ್ಕಾರದ ದೃಢ ಸಂಕಲ್ಪವನ್ನು ಇದು ಪ್ರತಿಬಿಂಬಿಸುತ್ತದೆ.

Share This Article