ಮದ್ಯ ಮಾರಾಟದ ಹಣದಿಂದ ಸರ್ಕಾರ ಶಾಲೆಗಳನ್ನ ನಡೆಸುತ್ತಿದೆ: ಮೇಧಾ ಪಾಟ್ಕರ್

Public TV
1 Min Read

ರಾಯಚೂರು: ಮದ್ಯ ಮಾರಾಟದ ಹಣದಿಂದ ಸರ್ಕಾರಗಳು ಶಾಲೆಗಳನ್ನ ನಡೆಸುತ್ತಿರುವುದು ನಮ್ಮ ದುರಂತ ಅಂತ ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್ ಬೇಸರ ವ್ಯಕ್ತಪಡಿಸಿದ್ದಾರೆ.

ರಾಯಚೂರಿನ ರಾಜೆಂದ್ರ ಗಂಜ್ ನಲ್ಲಿ ಆಯೋಜಿಸಿರುವ ಮದ್ಯ ನಿಷೇಧ ಆಂದೋಲನ ರಾಜ್ಯ ಮಟ್ಟದ ಸಮಾವೇಶಕ್ಕೆ ಆಗಮಿಸಿದ ವೇಳೆ ಮಾತನಾಡಿದ ಅವರು, ಮಧ್ಯ ಮಾರಾಟದಿಂದ ರಾಜ್ಯ ಸರ್ಕಾರ 16 ಸಾವಿರ ಕೋಟಿಗೂ ಹೆಚ್ಚು ಆದಾಯ ಪಡೆಯುತ್ತಿದೆ. ಈ ಮದ್ಯದ ಹಣದಿಂದ ಶಾಲೆ ನಡೆಸುವುದು ದುರ್ದೈವದ ಸಂಗತಿ ಎಂದು ಹೇಳಿದರು.

ವಿವಿಧ ರಾಜ್ಯಗಳಲ್ಲಿ ಮದ್ಯ ನಿಷೇಧದ ಚಿಂತನೆ ನಡೆದಿದೆ, ನಮ್ಮ ರಾಜ್ಯದಲ್ಲಿಯೂ ಮದ್ಯ ನಿಷೇಧಿಸಲು ಸಿಎಂ ಸಿದ್ದರಾಮಯ್ಯ ಕೂಡ ಚಿಂತನೆ ನಡೆಸಬೇಕು. ಇಲ್ಲದಿದ್ದರೇ ಮುಂದಿನ ದಿನಗಳಲ್ಲಿ ರಾಷ್ಟ್ರವ್ಯಾಪಿ ಪ್ರತಿಭಟನೆ ಪ್ರಾರಂಭಿಸುತ್ತೇವೆ ಅಂತ ಮೇಧಾಪಾಟ್ಕರ್ ಎಚ್ಚರಿಸಿದರು.

ಇದೇ ವೇಳೆ ಸಿರಿಗೆರೆ ತರಳಬಾಳು ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮೂವತ್ತು ವರ್ಷಗಳಿಂದ ನಮ್ಮ ಮಠ ಮದ್ಯ ನಿಷೇಧ ಮಾಡುವಂತೆ ಹೋರಾಡುತ್ತಿದೆ. ರಾಜ್ಯದಲ್ಲಿ ಸಂಪೂರ್ಣ ಮದ್ಯ ನಿಷೇಧ ಜಾರಿಗೊಳಿಸಬೇಕು. ಟಿಪ್ಪು ಸುಲ್ತಾನನ ಆಡಳಿತದಲ್ಲೇ ಮದ್ಯ ನಿಷೇಧ ಮಾಡಲಾಗಿತ್ತು. ರಾಜ ಪ್ರಭುತ್ವದಲ್ಲೇ ಆದಾಯ ಮುಖ್ಯವಾಗಿರಲಿಲ್ಲ. ಈಗ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಹಿತಕ್ಕಾಗಿ ಮದ್ಯ ನಿಷೇಧ ಜಾರಿಗೊಳಿಸಲೇಬೇಕು. ಎಲ್ಲಾ ರಾಜಕೀಯ ಪಕ್ಷಗಳು ಮದ್ಯ ನಿಷೇಧವನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಬೇಕು ಅಂತ ಶ್ರೀಗಳು ಹೇಳಿದರು.

ಕಾರ್ಯಕ್ರಮದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು. ಗಿಡಕ್ಕೆ ನೀರೆರೆದು, ಬೀಯರ್ ಬಾಟಲ್ ಗಳನ್ನ ಹೊಡೆದು ರಾಜ್ಯಮಟ್ಟದ ಸಮಾವೇಶಕ್ಕೆ ಚಾಲನೆ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *