ಇನ್ನು ಮುಂದೆ UPSC ಪರೀಕ್ಷೆ ಪಾಸ್ ಆಗದೇ ಜಂಟಿ ಕಾರ್ಯದರ್ಶಿಯಾಗಬಹುದು! ಷರತ್ತು ಏನು?

Public TV
2 Min Read

– ಖಾಸಗಿ ವಲಯದ ಪ್ರತಿಭಾವಂತರಿಗೆ ಸರ್ಕಾರ ಮಣೆ
– ಕೇಂದ್ರದ ಹೊಸ ನಿಯಮದ ವಿರುದ್ಧ ವಿಪಕ್ಷಗಳಿಂದ ಟೀಕೆ

ನವದೆಹಲಿ: ಖಾಸಗಿ ವಲಯದ ಪ್ರತಿಭಾನ್ವಿತರನ್ನು ಸೆಳೆಯುವ ಉದ್ದೇಶದಿಂದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 10 ಹಿರಿಯ ಮಟ್ಟದ ಅಧಿಕಾರಿಗಳ ಹುದ್ದೆಗೆ ನೇರ ನೇಮಕಾತಿ ಮಾಡಲು ಅರ್ಜಿ ಆಹ್ವಾನಿಸಿದೆ.ಇದುವರೆಗೂ ಸರ್ಕಾರದ ಯೋಜನೆಗಳನ್ನು ಜಾರಿಗೆ ತರುವ ಜಂಟಿ ಕಾರ್ಯದರ್ಶಿಗಳ ಹುದ್ದೆಯನ್ನು ಕೇಂದ್ರ ಲೋಕ ಸೇವಾ ಆಯೋಗದ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ನೀಡಲಾಗುತ್ತಿತ್ತು. ಆದರೆ ಸದ್ಯ ಕೇಂದ್ರ ಸರ್ಕಾರದ ನಿರ್ದಿಷ್ಟ ಅವಧಿಗೆ ನೇರ ನೇಮಕಾತಿ ಮಾಡಲು ಅವಕಾಶ ನೀಡಿದೆ. ಈ ಕಾರ್ಯವನ್ನು ಬಿಜೆಪಿ ಸಮರ್ಥಿಸಿಕೊಂಡಿದ್ದರೆ, ವಿಪಕ್ಷಗಳು ಟೀಕಿಸಿವೆ.

ಉದ್ದೇಶ ಏನು?
ಖಾಸಗಿ ಕ್ಷೇತ್ರದ ಪ್ರತಿಭಾವಂತರಿಗೆ ಉತ್ತಮ ಅವಕಾಶ ನೀಡುವ ಉದ್ದೇಶದಿಂದ ಸರ್ಕಾರದ ಲ್ಯಾಟರಲ್ ಎಂಟ್ರಿ ಯೋಜನೆಗೆ ಆರಂಭಿಸಿದೆ. ಸರ್ಕಾರ ಯೋಜನೆಗಳು ಹಾಗೂ ಆಡಳಿತಕ್ಕೆ ಹೊಸ ದೃಷ್ಟಿಕೋನ ನೀಡುವುದು ಇದರ ಮಹತ್ವದ ಉದ್ದೇಶವಾಗಿದೆ. ಈ ಹಿಂದೆಯೇ ಇಂತಹ ನಿಯಮ ಜಾರಿಗೆ ತರುವ ಕುರಿತು ಚರ್ಚೆ ನಡೆಸಿದ್ದರೂ ಇದೇ ಮೊದಲ ಬಾರಿಗೆ ನೀತಿ ಆಯೋಗದ ಶಿಫಾರಸಿನಂತೆ ಕೇಂದ್ರ ಸರ್ಕಾರ ಈ ನಿಯಮಗಳನ್ನು ಜಾರಿಗೆ ಮಾಡುತ್ತಿದೆ.

ಎಷ್ಟು ಮಂದಿಗೆ ಅವಕಾಶ? ನೇಮಕಾತಿ ಹೇಗೆ?
ಸರ್ಕಾರದ ಪ್ರಕಟನೆ ಅನ್ವಯ ಪ್ರತಿಭಾವಂತ 10 ಹುದ್ದೆಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಸರ್ಕಾರಿ ಇಲಾಖೆಗಳ ಜಂಟಿ ಕಾರ್ಯದರ್ಶಿ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತಿದೆ. ಖಾಸಗಿ ವಲಯದಲ್ಲಿ ಕಾರ್ಯನಿರ್ವಹಿಸಿದ 40 ವರ್ಷದೊಳಗಿನ ಮತ್ತು ಕನಿಷ್ಠ 15 ವರ್ಷಗಳ ಕೆಲಸದ ಅನುಭವ ಹೊಂದಿರುವ ವ್ಯಕ್ತಿಗಳಿಗೆ ಅವಕಾಶ ನೀಡಲಾಗಿದೆ. ಸರ್ಕಾರದ ಮಟ್ಟದಲ್ಲಿ ನೇರ ನೇಮಕಾತಿ ನಡೆಯಲಿದ್ದು, ನಿಗದಿತ ಅವಧಿಗೆ ಮಾತ್ರ ಹುದ್ದೆ ಗುತ್ತಿಗೆ ಆಧಾರಿತವಾಗಿ 3ರಿಂದ 5 ವರ್ಷಗಳವರೆಗೆ ಇರಲಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಜುಲೈ 1ರ ವೇಳೆಗೆ 40 ವರ್ಷ ಪೂರ್ಣಗೊಂಡಿರಬೇಕು ಮತ್ತು ಆಯ್ದ ವಿಷಯದಲ್ಲಿ ಉನ್ನತ ವ್ಯಾಸಂಗ ಮಾಡಿರಬೇಕು ಎನ್ನುವ ಷರತ್ತನ್ನು ವಿಧಿಸಲಾಗಿದೆ. ಜುಲೈ 15 ಬೆಳಗ್ಗೆ 10 ಗಂಟೆಯಿಂದ ಜುಲೈ 30 ಸಂಜೆ 5 ಗಂಟೆಯವರಗೆ ಅರ್ಜಿಸಲ್ಲಿಸಲು ಕಾಲಾವಕಾಶ ನೀಡಲಾಗಿದೆ.

ಯಾವ ಇಲಾಖೆಯಲ್ಲಿ ಹುದ್ದೆ ಸಿಗುತ್ತೆ?
1)ಕಂದಾಯ 2)ಹಣಕಾಸಿನ ಸೇವೆಗಳು 3)ಆರ್ಥಿಕ ವ್ಯವಹಾರಗಳು 4)ಕೃಷಿ ಸಹಕಾರ ಮತ್ತು ರೈತರ ಕಲ್ಯಾಣ 5)ಸಾರಿಗೆ ಮತ್ತು ಹೆದ್ದಾರಿ 5)ಹಡಗು 6)ಪರಿಸರ, ಅರಣ್ಯ 7) ಹವಮಾನ ಬದಲಾವಣೆ 8)ವಾಣಿಜ್ಯ 9)ನಾಗರಿಕ ವಿಮಾನಯಾನ 10)ಹೊಸ ಮತ್ತು ನವೀಕರಿಸಬಹುದಾದ ಶಕ್ತಿ ಇಲಾಖೆಗಳಿಗೆ ನೇಮಕಾತಿ ನಡೆಯಲಿದೆ. ನೇಮಕಗೊಂಡ ಅಭ್ಯರ್ಥಿಗಳು ತಮ್ಮ ಅವಧಿಯಲ್ಲಿ ತಿಂಗಳಿಗೆ 1,44,200 ರೂ. ನಿಂದ 2,18,200 ರೂ ವರೆಗೆ ವೇತನ ಪಡೆಯಲಿದ್ದಾರೆ.

ಸರ್ಕಾರದ ಈ ಹೊಸ ನೀತಿಯ ಕುರಿತು ಕಿಡಿಕಾರಿರುವ ವಿಪಕ್ಷಗಳು ಆರ್‍ಎಸ್‍ಎಸ್ ಸೇವಕರನ್ನು ನೇರವಾಗಿ ಸರ್ಕಾರದ ಉನ್ನತ ಹುದ್ದೆಗಳಿಗೆ ಆಯ್ಕೆ ಮಾಡಲು ಪ್ರಧಾನಿಗಳು ಈ ಪ್ಲಾನ್ ರೂಪಿಸಿದ್ದಾರೆ. ವಿದ್ಯಾರ್ಥಿಗಳು ಕೂಡಲೇ ಎಚ್ಚೆತ್ತುಕೊಳ್ಳಬೇಕು, ನಿಮ್ಮ ಭವಿಷ್ಯ ಅತಂಕದಲ್ಲಿದೆ ಎಂದು ಹೇಳಿ ಟೀಕಿಸಿವೆ.

ಖಾಸಗಿ ವಲಯದಲ್ಲಿ ಎಷ್ಟೋ ಪ್ರತಿಭಾನ್ವಿತ ವ್ಯಕ್ತಿಗಳಿದ್ದಾರೆ. ಅವರಲ್ಲಿನ ಪ್ರತಿಭೆಯನ್ನು ದೇಶಕ್ಕೆ ಬಳಸಲು ಇದೊಂದು ಉತ್ತಮ ನಿರ್ಧಾರವಾಗಿದೆ ಎಂದು ಬರೆದು ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *