ಬೆಂಗಳೂರು: ಸತ್ತವರ ಅಂತ್ಯ ಸಂಸ್ಕಾರದ ದುಡ್ಡು ಕೊಡುವುದಕ್ಕೆ ಸರ್ಕಾರದ ಬಳಿ ಹಣವಿಲ್ಲದ್ದರಿಂದ, “ಅಂತ್ಯ ಸಂಸ್ಕಾರ” ಯೋಜನೆಯನ್ನೇ ಸಿದ್ದರಾಮಯ್ಯ ಸರ್ಕಾರ ಅಂತ್ಯ ಮಾಡಿದೆ.
ಕಡು ಬಡವರು ಮೃತಪಟ್ಟಾಗ ಅಂತ್ಯ ಸಂಸ್ಕಾರ ಮಾಡಲು ನೀಡುವ “ಅಂತ್ಯ ಸಂಸ್ಕಾರ ಯೋಜನೆಯ” ಪರಿಹಾರವನ್ನ ಕಳೆದ ನಾಲ್ಕು ವರ್ಷಗಳಿಂದ ಸರಿಯಾಗಿ ನೀಡುತ್ತಿಲ್ಲ. ಕಂದಾಯ ಇಲಾಖೆಯ ಅಧೀನದಲ್ಲಿ ಬರುವ ಯೋಜನೆಯಲ್ಲಿ ಕಳೆದ 4 ವರ್ಷಗಳಿಂದ ಮೃತರಾದ 9 ಸಾವಿರ ಬಡಕುಟುಂಬಗಳ ಪರಿಹಾರದ ಕಡತಗಳನ್ನ ಮೂಲೆಗೆ ಬಿಸಾಕಿದ್ದಾರೆ. ಸರ್ಕಾರದ ಅಂಕಿ ಅಂಶದ ಪ್ರಕಾರ 2017 ಅಕ್ಟೋಬರ್ ಅಂತ್ಯದ ವೇಳಗೆ 9120 ಮೃತರಾದ ಕುಟುಂಬಗಳಿಗೆ ಇನ್ನೂ ಪರಿಹಾರವೇ ಸಿಕ್ಕಿಲ್ಲ.
ಏನಿದು ಅಂತ್ಯ ಸಂಸ್ಕಾರ ಯೋಜನೆ?: ಬಡತನ ರೇಖೆಯಲ್ಲಿರುವ ಕುಟುಂಬಸ್ಥರಲ್ಲಿ ಯಾರಾದರೂ ಸತ್ತರೆ ಅವರ ಅಂತ್ಯ ಸಂಸ್ಕಾರಕ್ಕೆ ಹಣ ನೀಡುವುದೇ ಈ ಯೋಜನೆಯ ಉದ್ದೇಶವಾಗಿದೆ. ಸತ್ತವರ ಅಂತ್ಯ ಸಂಸ್ಕಾರ ಮಾಡಿದವರು ಅಥವಾ ಅವರ ಕುಟುಂಬದವರು ಫಲಾನುಭವಿಗಳಾಗಿರುತ್ತಾರೆ. ಕಂದಾಯ ಇಲಾಖೆ ತಹಶೀಲ್ದಾರರ ಮೂಲಕ ಯೋಜನೆಯ ಪರಿಹಾರವನ್ನ ನೀಡುತ್ತದೆ. ಯೋಜನೆ ಪ್ರಾರಂಭದಲ್ಲಿ ಪರಿಹಾರ ರೂಪದಲ್ಲಿ 1 ಸಾವಿರ ನೀಡಲಾಗುತ್ತಿತ್ತು. ಈಗ 5 ಸಾವಿರ ಹಣವನ್ನ ಪರಿಹಾರದ ರೂಪದಲ್ಲಿ ನೀಡಲಾಗುತ್ತದೆ.
4 ವರ್ಷಗಳಲ್ಲಿ 9 ಸಾವಿರ ಮೃತರ ಕುಟುಂಬಕ್ಕೆ ಪರಿಹಾರ ಹಣ ನೀಡಬೇಕು. ಆದರೆ ಸರ್ಕಾರ ಇನ್ನೂ ಇದನ್ನ ನೀಡಿಲ್ಲ. ಇದರಲ್ಲಿ ಮಂಡ್ಯ ಜಿಲ್ಲೆಯೊಂದರಲ್ಲೇ 1508 ಮೃತ ಕುಟುಂಬಕ್ಕೆ ಪರಿಹಾರ ನೀಡಬೇಕು. ಸಿಎಂ ತವರು ಜಿಲ್ಲೆ ಮೈಸೂರಿನಲ್ಲೂ ಅಂತ್ಯ ಸಂಸ್ಕಾರ ಯೋಜನೆ ಹಳ್ಳ ಹಿಡಿದಿದ್ದು, 223 ಕುಟುಂಬಗಳಿಗೆ ಪರಿಹಾರ ಇನ್ನೂ ವಿತರಣೆ ಆಗಿಲ್ಲ. ಉಳಿದಂತೆ ಕಲಬುರಗಿಯಲ್ಲಿ 778, ತುಮಕೂರಿನಲ್ಲಿ 698, ರಾಯಚೂರಿನಲ್ಲಿ 572, ಬೆಂಗಳೂರು ನಗರ ಹಾಗೂ ಗ್ರಾಮಾಂತರದಲ್ಲಿ 430 ಕುಟುಂಬಗಳು ಸೇರಿದಂತೆ 30 ಜಿಲ್ಲೆಗಳಲ್ಲಿ 9120 ಕುಟುಂಬಳಿಗೆ ಪರಿಹಾರ ಸಿಗಬೇಕಾಗಿದೆ.