ಬೆಂಗಳೂರು: ವಿಚಾರವಾದಿ, ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಗಿ ಇಂದಿಗೆ ನಾಲ್ಕು ದಿನಗಳಾಗಿದ್ದು, ಹಂತಕರ ಪತ್ತೆಗೆ ತೀವ್ರ ಶೋಧ ನಡೆಯುತ್ತಿದೆ. ಹಂತಕರನ್ನು ಪತ್ತೆ ಹಚ್ಚಿಕೊಟ್ಟವರಿಗೆ 10 ಲಕ್ಷ ರೂ. ಬಹುಮಾನವಾಗಿ ನೀಡಲಾಗುವುದು ಎಂದು ಗೃಹಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಸಿಎಂ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಭೇಟಿ ಮಾಡಿ ತನಿಖೆ ಬಗ್ಗೆ ವಿವರ ನೀಡಿದ್ದೇನೆ. ತನಿಖೆ ಚುರುಕುಗೊಳಿಸಿ ಅಂತ ಸಿಎಂ ಸೂಚನೆ ನೀಡಿದ್ದಾರೆ. ಈಗಾಗಲೇ ಅಧಿಕಾರಿಗಳ ತಂಡ ಕೆಲಸ ಪ್ರಾರಂಭ ಮಾಡಿದೆ. ಕೇಳಿದಷ್ಟು ಅಧಿಕಾರಿಗಳನ್ನ ಈಗಾಗಲೇ ನೀಡಿದ್ದೇವೆ. ಮತ್ತಷ್ಟು ಪೆÇಲೀಸರು ಬೇಕು ಅಂದ್ರೆ ಇಲಾಖೆ ನೀಡುತ್ತೆ. ಹತ್ಯೆಯ ಕಾರಣ ಏನು ಅನ್ನೊ ಬಗ್ಗೆ ತನಿಖೆ ನಡೆಯುತ್ತಿದೆ. ಎಡ, ಬಲ ನಕ್ಸಲ್ ಎಲ್ಲಾ ಆಯಾಮದ ಬಗ್ಗೆ ತನಿಖೆ ನಡೆಯುತ್ತಿದ್ದು, ತನಿಖೆ ನಡೆದ ಮೇಲೆ ಎಲ್ಲಾ ಗೊತ್ತಾಗಲಿದೆ. ಹಂತಕರ ಬಗ್ಗೆ ಸುಳಿವು ನೀಡಿದವರಿಗೆ ಈಗಾಗಲೇ ಸರ್ಕಾರ ಬಹುಮಾನ ಘೋಷಣೆ ಮಾಡಿದೆ ಅಂದ್ರು.
ತನಿಖೆ ಬಗ್ಗೆ ಈಗಲೇ ಏನು ಹೇಳಲು ಸಾಧ್ಯವಿಲ್ಲ. ಆದಷ್ಟು ಬೇಗ ಎಲ್ಲಾ ಗೊತ್ತಾಗಲಿದೆ ಅನ್ನೊ ವಿಶ್ವಾಸ ಇದೆ. ಗೌರಿ ಲಂಕೇಶ್ ಕುಟುಂಬದವರ ಆತಂಕ ನಮಗೂ ತಿಳಿದಿದೆ. ಇದಕ್ಕಾಗಿಯೇ ವಿಶೇಷ ತಂಡ ರಚನೆ ಮಾಡಿದ್ದೇವೆ. ಅವರ ಕುಟುಂಬದಷ್ಟೆ ನಮಗೂ ಬೇಗ ಮುಗಿಯಬೇಕು ಅಂತ ಆಸೆ ಇದೆ. ಅಗತ್ಯ ಬಿದ್ರೆ ತನಿಖೆಗೆ ಮತ್ತಷ್ಟು ಅಧಿಕಾರಿಗಳನ್ನ ನೇಮಕ ಮಾಡ್ತೀವಿ ಅಂದ್ರು.
ನಾಳೆ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ತನಿಖೆಯ ಪ್ರಗತಿಯ ಬಗ್ಗೆ ಮಹತ್ವದ ಸಭೆ ನಡೆಯಲಿದೆ. ಈ ಸಭೆಯಲ್ಲಿ ಎಸ್ಐಟಿ ಮುಖ್ಯಸ್ಥರು, ಡಿಜಿ ರೂಪಕ್ ಕುಮಾರ್ ದತ್ತ, ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಲಿದ್ದಾರೆ ಅಂತ ಹೇಳಿದ್ರು.
ಸಚಿವ ವಿನಯ್ ಕುಲಕರಣಿ ಭದ್ರತೆ ಬೇಕು ಅಂತ ಕೇಳಿದ್ರು ಹೀಗಾಗಿ ಭದ್ರತೆ ನೀಡಲಾಗಿದೆ. ಜಾಮಾಂದಾರ್ ಅವರಿಗೂ ಬೆದರಿಕೆ ಬಂದಿದೆ ಅಂತ ಗೊತ್ತಾಗಿದೆ ಅವರಿಗೂ ಭದ್ರತೆ ನೀಡಲಾಗುತ್ತೆ. ವಿಚಾರವಾದಿಗಳಿಗೆ ಹಾಗೂ ಯಾರಿಗೆ ಬೆದರಿಕೆ ಇದೆಯೋ ಅವರೆಲ್ಲರಿಗೂ ಸರ್ಕಾರ ಭದ್ರತೆ ನೀಡುತ್ತೆ ಅಂತ ತಿಳಿಸಿದ್ರು.
ಬಿಜೆಪಿ ಶಾಸಕ ಜೀವರಾಜ್ ವಿವಾದಾತ್ಮಕ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಜೀವರಾಜ್ ಅವರನ್ನು ತನಿಖೆ ಮಾಡುವಂತೆ ಎಸ್ಐಟಿಗೆ ಸೂಚನೆ ನೀಡಲಾಗಿದೆ. ಈ ಹೇಳಿಕೆ ಹಿಂದಿನ ಮರ್ಮವೇನು? ಯಾಕೆ ಹೇಳಿಕೆ ನೀಡಿದ್ರು ಅನ್ನೋದನ್ನ ಕೇಳಲು ತಿಳಿಸಿದ್ದೇವೆ. ಬಹಿರಂಗವಾಗಿ ಇಂತಹ ಹೇಳಿಕೆ ನೀಡೋದು ಸರಿಯಲ್ಲ. ಎಸ್ ಐಟಿ ತನಿಖೆ ಬಳಿಕ ಹೇಳಿಕೆ ಬಗ್ಗೆ ಮತ್ತಷ್ಟು ಸ್ಪಷ್ಟತೆ ಸಿಗುತ್ತೆ ಅಂದ್ರು.
ಮಂಗಳೂರು ಚಲೋ: ಬಿಜೆಪಿಯವರ ಮಂಗಳೂರು ಚಲೋ ವಿಫಲವಾಗಿದೆ. 3 ಸಾವಿರ ಜನ ಸೇರಿದ್ದು ಅಂತ ಮಾಧ್ಯಮಗಳಲ್ಲಿ ನೋಡಿದ್ದೇನೆ. ಬಿಜೆಪಿ ಪರ ಜನ ಇಲ್ಲ ಅನ್ನೋದು ನಿನ್ನೆಯ ರ್ಯಾಲಿಯಿಂದ ಗೊತ್ತಾಗಿದೆ. ನಾವು ಕೇಳಿದ ಮಾಹಿತಿ ಅವರು ನೀಡಿಲ್ಲ. ಹೀಗಾಗಿ ರ್ಯಾಲಿಗೆ ಅನುಮತಿ ನಿರಾಕರಿಸಿದ್ದೇವು. ಶಾಂತಿಕದಡುವ ಯಾವುದೇ ಹೋರಾಟಕ್ಕೆ ಸರ್ಕಾರ ಅವಕಾಶ ಕೊಡಲ್ಲ. ರಮಾನಾಥ್ ರೈಗೆ ಸಾಮರಸ್ಯ ನಡಿಗೆ ಕೈ ಬಿಡುವಂತೆ ಮನವಿ ಮಾಡಿದ್ದೇನೆ. ಒಂದು ವೇಳೆ ನಡೆಸೋದೆ ಆದ್ರೆ ಸಮಾಜದ ಎಲ್ಲ ವರ್ಗದ ಜನರನ್ನ ಸೇರಿಸಿಕೊಂಡು ಸಾಮರಸ್ಯ ನಡೆಗೆ ಮಾಡಿದ್ರೆ ಅಭ್ಯಂತರವಿಲ್ಲ ಎಂದ್ರು.
Glimpse of #MangaluruChalo #SidduSaaku pic.twitter.com/xvs6JNqZXh
— BJP Karnataka (@BJP4Karnataka) September 7, 2017