ಕಾಂಗ್ರೆಸ್ – ಬಿಜೆಪಿ ನಡುವಿನ ಡೈರಿ ಜಗಳಕ್ಕೆ ಮೋದಿ ಎಂಟ್ರಿ!

Public TV
1 Min Read

ಬೆಂಗಳೂರು: ರಾಜ್ಯದಲ್ಲಿ ಬರ ಇದ್ದರೂ ಈಗ ಬರೀ ಡೈರಿಯದ್ದೇ ಸದ್ದು ಗದ್ದಲ. ಕಾಂಗ್ರೆಸ್-ಬಿಜೆಪಿ ನಡುವಿನ ಈ ಡೈರಿ ಜಗಳದಲ್ಲಿ ಪ್ರಧಾನಿ ನರೇಂದ್ರ ಮೋದಿ ಈಗ ಎಂಟ್ರಿ ಕೊಡುತ್ತಿದ್ದಾರೆ.

ಹೌದು, ಡೈರಿಯಲ್ಲಿ ಪ್ರಸ್ತಾಪವಾಗಿರುವ ಎಲ್ಲಾ ಕಾಂಗ್ರೆಸ್ ಸಚಿವರ ಮನೆ ಮೇಲೆ ದಾಳಿ ನಡೆಸಲು ಐಟಿ ಪಡೆಗೆ ಮೋದಿ ಸೂಚನೆ ಕೊಟ್ಟಿದ್ದಾರೆ ಎನ್ನುವ ಮಾಹಿತಿ ಮೂಲಗಳಿಂದ ಗೊತ್ತಾಗಿದೆ.

ಆ ಮೂಲಕ ಡೈರಿಯಲ್ಲಿರೋ ಸಚಿವರನ್ನೇ ಬಿಜೆಪಿ ಟಾರ್ಗೆಟ್ ಮಾಡಲು ರಣತಂತ್ರ ರೂಪಿಸಿದೆ. ಕಾಂಗ್ರೆಸ್ ಹೈಕಮಾಂಡ್‍ಗೆ ಕಪ್ಪ ನೀಡಿದ್ಯಾರು? ನಿಜವಾಗ್ಲೂ ಎಷ್ಟೆಷ್ಟು ಕೊಟ್ಟಿದ್ದಾರೆ ಅನ್ನೋದನ್ನ ತಿಳಿಯಲು ಈ ದಾಳಿಗೆ ಪ್ಲಾನ್ ಸಿದ್ಧಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಈಗಾಗಲೇ ನೋಟಿಸ್ ನೀಡಿದ್ದ ಐಟಿ ಅಧಿಕಾರಿಗಳಿಗೆ ಕೆಲವು ಸಚಿವರು ವಿವರಣೆ ನೀಡಿದ್ದರೂ ತೃಪ್ತರಾಗಿರಲಿಲ್ಲ. ಹೀಗಾಗಿ ಮತ್ತೆ ಐಟಿ ದಾಳಿ ನಡೆಸಲು ಕೇಂದ್ರ ಸರ್ಕಾರ ಪ್ಲಾನ್ ರೂಪಿಸಿದೆ ಎನ್ನಲಾಗಿದೆ.

ಡೈರಿಯಲ್ಲಿ ಕೆಜೆಜಿ, ಎಂಬಿಪಿ, ಆರ್‍ಜಿ ಕಚೇರಿ, ಎಸ್‍ಜಿ ಕಚೇರಿ, ಡಿಜಿವಿಎಸ್, ಎಚ್.ಕಾಂ, ಎಚ್‍ಸಿಎಂ, ಡಿಕೆಎಸ್, ಆರೆಲ್‍ಆರ್, ಆರ್‍ವಿಡಿ, ಕೆಂಪ್, ರಘು, ಎಸ್‍ಬಿ, ಎಂ.ವೋರ, ಎಪಿ ಹಸರು ಪ್ರಸ್ತಾಪವಾಗಿತ್ತು.

ಆದಾಯ ತೆರಿಗೆ ಇಲಾಖೆಯ ದಾಳಿ ವೇಳೆ ಎಂಎಲ್‍ಸಿ ಗೋವಿಂದರಾಜು ನಿವಾಸದಲ್ಲಿ ಸಿಕ್ಕಿದೆ ಎನ್ನಲಾದ ಡೈರಿಯ ಒಳಗಡೆ ಇರುವ ಮಾಹಿತಿಯನ್ನು ಫೆ.23ರಂದು ರಾಷ್ಟ್ರೀಯ ವಾಹಿನಿಯೊಂದು ಪ್ರಸಾರ ಮಾಡಿತ್ತು. ಡೈರಿ ನನ್ನದಲ್ಲ ಸಂಚು ರೂಪಿಸಿ ನನ್ನ ಮನೆಯಲ್ಲಿ ಯಾರೋ ಇಟ್ಟು ಹೋಗಿದ್ದಾರೆ ಎಂದು 2016ರ ಮಾರ್ಚ್ 15ರಂದು ಐಟಿ ಮುಂದೆ ಗೋವಿಂದರಾಜು ಹೇಳಿಕೆ ನೀಡಿದ್ದರು. ಹಾಗಾದ್ರೆ ಈ ಡೈರಿ ಯಾರದ್ದು? ಅಲ್ಲಿರೋ ಸಂಕೇತಾಕ್ಷರ ಯಾರದ್ದು ಎನ್ನುವ ಪ್ರಶ್ನೆ ಈಗ ಎದ್ದಿದೆ.

ಕಳೆದ ವರ್ಷದ ಮಾರ್ಚ್ ತಿಂಗಳಿನಿಂದ ಐಟಿ ವಿಚಾರಣೆ ಆರಂಭವಾಗಿದ್ದು, ಗೋವಿಂದರಾಜು ಆದಾಯದ ಪಕ್ಕಾ ಲೆಕ್ಕವನ್ನು ಐಟಿ ಅಧಿಕಾರಿಗಳು ಹಾಕುತ್ತಿದ್ದಾರೆ. ಸಕ್ರಮ ಹಾಗೂ ಅಕ್ರಮ ಮೂಲಗಳಿಂದ ಬಂದ ಆದಾಯವೆಷ್ಟು ಎನ್ನುವುದನ್ನು ಲೆಕ್ಕ ಹಾಕುತ್ತಿದ್ದಾರೆ. ಅಕ್ರಮ ಮೂಲ ಸಾಬೀತಾದರೆ ಗೋವಿಂದರಾಜುಗೆ ಅವರ ಮೇಲೆ ಜಾರಿ ನಿರ್ದೇಶನಾಲಯ ಮೂಲಕ ಅಕ್ರಮ ಹಣ ವಿನಿಮಯ ಕೇಸ್ ಬೀಳಲಿದೆ.

Share This Article
Leave a Comment

Leave a Reply

Your email address will not be published. Required fields are marked *