ಡೆಡ್‍ಲೈನ್ ಉಲ್ಲಂಘಿಸಿದ್ರೆ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ

Public TV
1 Min Read

ಬೆಂಗಳೂರು: ರಾಜ್ಯಪಾಲರು ಬಹುಮತ ಸಾಬೀತಿಗೆ ವಿಧಿಸಿದ್ದ ಗಡುವನ್ನು ದೋಸ್ತಿ ಸರ್ಕಾರ ಮೀರಿದೆ. ಈಗ ಇಂದು ಕಲಾಪ ಮುಗಿಯುವುದರ ಒಳಗಡೆ ಬಹುಮತ ಸಾಬೀತು ಪಡಿಸುವಂತೆ ಮತ್ತೊಂದು ಡೆಡ್‍ಲೈನ್ ನೀಡಿದ್ದಾರೆ. ಒಂದು ವೇಳೆ ಈ ಡೆಡ್‍ಲೈನ್ ಒಳಗಡೆ ಬಹುಮತ ಸಾಬೀತು ಆಗದೇ ಇದ್ದರೆ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾಗುವ ಸಾಧ್ಯತೆಯಿದೆ.

ಬಿಜೆಪಿ ನಿಯೋಗ ಸರ್ಕಾರದ ವಿರುದ್ಧ ದೂರು ನೀಡಿದ ಬಳಿಕ ರಾಜ್ಯಪಾಲರು ಕಲಾಪಕ್ಕೆ ವಿಶೇಷ ಅಧಿಕಾರಿಯನ್ನು ಕಳುಹಿಸಿಕೊಟ್ಟಿದ್ದರು. ಇದಾದ ಬಳಿಕ ಗುರುವಾರ ರಾತ್ರಿ ಶುಕ್ರವಾರ ಮಧ್ಯಾಹ್ನ 1:30ರ ಒಳಗಡೆ ಬಹುಮತ ಸಾಬೀತು ಪಡಿಸುವಂತೆ ಆದೇಶಿಸಿದ್ದರು. ಇಷ್ಟಾಗಿಯೂ ಸರ್ಕಾರ ಈ ಆದೇಶವನ್ನು ಪಾಲಿಸಿರಲಿಲ್ಲ.

ಇಂದು ರಾಜ್ಯಪಾಲರು ಎರಡನೇ ಡೆಡ್‍ಲೈನ್ ನೀಡಿದ್ದಾರೆ. ಈ ಗಡುವು ಮೀರಿದರೆ ರಾಜ್ಯಪಾಲರು ಕೇಂದ್ರ ಗೃಹ ಸಚಿವಾಲಯಕ್ಕೆ ವರದಿ ಸಲ್ಲಿಸುತ್ತಾರೆ. ಈ ವರದಿ ಆಧಾರಿಸಿ ಅಮಿತ್ ಶಾ ನೇತೃತ್ವದ ಗೃಹ ಇಲಾಖೆ ರಾಷ್ಟ್ರಪತಿ ಆಡಳಿತ ಹೇರಬೇಕೋ? ಬೇಡವೋ ಎನ್ನುವ ನಿರ್ಧಾರವನ್ನು ಕೈಗೊಳ್ಳಲಿದೆ.

ಆರ್ಟಿಕಲ್ 175(2) ರಡಿ ವಿಶ್ವಾಸ ಮತಯಾಚಿಸಿ ಎಂದು ರಾಜ್ಯಪಾಲರೂ ಸಿಎಂಗೆ ಎರಡು ಬಾರಿ ಸೂಚಿಸಿದರೂ ಪಾಲನೆ ಆಗಿಲ್ಲ. ಈಗಾಗಲೇ ಎರಡು ಪಕ್ಷದ 15 ಮಂದಿ ಶಾಸಕರು ರಾಜೀನಾಮೆ ನೀಡಿದ್ದರಿಂದ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ. ಹೀಗಾಗಿ ವಿಶ್ವಾಸಮತ ಯಾಚಿಸಬೇಕಿತ್ತು. ಆದರೆ ರಾಜ್ಯಪಾಲರು ಬಹುಮತ ಸಾಬೀತಿಗೆ ವಿಧಿಸಿದ್ದ ಗಡುವನ್ನು ದೋಸ್ತಿ ಸರ್ಕಾರ ಮೀರಿದೆ. ಹೀಗಾಗಿ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಬಹುದು.

Share This Article
Leave a Comment

Leave a Reply

Your email address will not be published. Required fields are marked *