ಕೇಂದ್ರ ಸರ್ಕಾರ ಕಣ್ಮುಚ್ಚಿ ಕುಳಿತಿದೆ: ಪತಂಜಲಿಯ ಸುಳ್ಳು ಜಾಹೀರಾತಿಗೆ ಸುಪ್ರೀಂ ಕಿಡಿ

Public TV
1 Min Read

ನವದೆಹಲಿ: ಯೋಗ ಗುರು ರಾಮ್‌ದೇವ್ (Yoga Guru Ramdev) ಅವರ ಸಹ-ಮಾಲೀಕತ್ವದ ಪತಂಜಲಿ (Patanjali) ಆಯುರ್ವೇದ ಕಂಪನಿಯ ಸುಳ್ಳು ಹಾಗೂ ಜನರ ದಾರಿ ತಪ್ಪಿಸುವ ಜಾಹೀರಾತುಗಳ ಪ್ರಕರಣದಲ್ಲಿ ಯಾವುದೇ ಕ್ರಮ ಕೈಗೊಳ್ಳದ ಕೇಂದ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್ (Supreme Court) ತೀವ್ರ ತರಾಟೆಗೆ ತೆಗೆದುಕೊಂಡಿದೆ.

ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ. ಇಂತಹ ಜಾಹೀರಾತಿನ ಮೂಲಕ ಇಡೀ ದೇಶವನ್ನು ದಾರಿ ತಪ್ಪಿಸಲಾಗುತ್ತಿದೆ. ಇದು ಅತ್ಯಂತ ದುರದೃಷ್ಟಕರ. ಸರ್ಕಾರವು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇದನ್ನೂ ಓದಿ: 58ನೇ ವಯಸ್ಸಿಗೆ ಸಿಧು ಮೂಸೆವಾಲಾ ತಾಯಿ ಗರ್ಭಿಣಿ

ತಕ್ಷಣವೇ ಜಾರಿಗೆ ಬರುವಂತೆ ತಪ್ಪು ಮಾಹಿತಿ ನೀಡುವ ತನ್ನ ಔಷಧಿಗಳ ಎಲ್ಲಾ ಎಲೆಕ್ಟ್ರಾನಿಕ್ ಮತ್ತು ಪ್ರಿಂಟ್ ಜಾಹೀರಾತುಗಳನ್ನು ನಿಲ್ಲಿಸುವಂತೆ ಪೀಠವು ಕಂಪನಿಗೆ ನಿರ್ದೇಶನ ನೀಡಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಸುಪ್ರೀಂ ಕೋರ್ಟ್, ಪತಂಜಲಿ ಆಯುರ್ವೇದ ಕಂಪನಿ ತನ್ನ ಔಷಧಗಳ ಬಗ್ಗೆ ಜಾಹೀರಾತುಗಳ ವಿಚಾರವಾಗಿ ಎಚ್ಚರಿಕೆ ನೀಡಿತ್ತು.

ಈ ಗುರು ಸ್ವಾಮಿ ರಾಮದೇವ್ ಬಾಬಾಗೆ ಏನಾಯಿತು? ಯೋಗವನ್ನು ಜನಪ್ರಿಯಗೊಳಿಸಿದ್ದರಿಂದ ನಾವು ಅವರನ್ನು ಗೌರವಿಸುತ್ತೇವೆ. ಆದರೆ, ಅವರು ಇತರ ವ್ಯವಸ್ಥೆಯನ್ನು ಟೀಕಿಸಬಾರದು. ಎಲ್ಲಾ ವೈದ್ಯರ ಮೇಲೆ ಆರೋಪ ಮಾಡುವ ರೀತಿಯ ಜಾಹೀರಾತುಗಳನ್ನು ನೀವು ನೋಡುತ್ತೀರಿ ಎಂದು ಹಿಂದಿನ ಸಿಜೆಐ ಎನ್‌.ವಿ.ರಮಣ ನೇತೃತ್ವದ ಪೀಠ ಹೇಳಿತ್ತು. ಇದನ್ನೂ ಓದಿ: ಗಗನಯಾನ ಕೈಗೊಳ್ಳುವ 4 ಗಗನಯಾತ್ರಿಗಳ ಹೆಸರು ಬಹಿರಂಗಪಡಿಸಿದ ಮೋದಿ

ಆಯುರ್ವೇದ ಔಷಧಿಗಳ ಉತ್ಪಾದನೆಯಲ್ಲಿ ತೊಡಗಿರುವ ಸಂಸ್ಥೆಗಳು ಸಾರ್ವಜನಿಕರನ್ನು ದಾರಿತಪ್ಪಿಸಲು ಅವಹೇಳನಕಾರಿ ಹೇಳಿಕೆಗಳನ್ನು ನೀಡಿವೆ ಎಂದು ಭಾರತೀಯ ವೈದ್ಯಕೀಯ ಸಂಘ (ಐಎಂಎ) ಗಂಭೀರ ಆರೋಪ ಮಾಡಿತ್ತು.

Share This Article