ಪ್ರತಿಭಟನಾಕಾರರನ್ನು ಬಲವಂತವಾಗಿ ಹೊರಹಾಕಲು ಪ್ರಯತ್ನಿಸಿದರೆ ಪರಿಣಾಮ ಎದುರಿಸಬೇಕಾಗುತ್ತೆ: ರಾಕೇಶ್ ಟಿಕಾಯತ್

Public TV
2 Min Read

ನವದೆಹಲಿ: ಪ್ರತಿಭಟನಾಕಾರರನ್ನು ಬಲವಂತವಾಗಿ ಹೊರಹಾಕಲು ಪ್ರಯತ್ನಿಸಿದರೆ ಇದರ ಪರಿಣಾಮವನ್ನು ಎದುರಿಸಬೇಕಾಗುತ್ತೆ ಎಂದು ರೈತ ಮುಖಂಡ, ಭಾರತೀಯ ಕಿಸಾನ್ ಯೂನಿಯನ್(ಬಿಕೆಯು) ಮುಖ್ಯಸ್ಥ ರಾಕೇಶ್ ಟಿಕಾಯತ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ರೈತರು ದೇಶಾದ್ಯಂತ ಸರ್ಕಾರಿ ಕಚೇರಿಗಳನ್ನು ಧಾನ್ಯ ಮಾರುಕಟ್ಟೆಗಳಾಗಿ ಪರಿವರ್ತಿಸುತ್ತಾರೆ. ದೆಹಲಿ ಗಡಿಯಿಂದ ಪ್ರತಿಭಟನಾಕಾರರನ್ನು ಬಲವಂತವಾಗಿ ಹೊರಹಾಕಲು ಪ್ರಯತ್ನಿಸಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಕೇಶ್ ಅವರು ಟ್ವಿಟ್ಟರ್‌ನಲ್ಲಿ, ರೈತರನ್ನು ಗಡಿಯಿಂದ ಬಲವಂತವಾಗಿ ಹೊರಹಾಕುವ ಪ್ರಯತ್ನ ನಡೆದರೆ ದೇಶಾದ್ಯಂತ ಇರುವ ಸರ್ಕಾರಿ ಕಚೇರಿಗಳನ್ನು ಗಲ್ಲಾ ಮಂಡಿಯನ್ನಾಗಿ ಪರಿವರ್ತಿಸಲಾಗುತ್ತೆ ಎಂದು ಆಕ್ರೋಶ ಹೊರಹಾಕಿದರು. ಆಡಳಿತವು ಪ್ರತಿಭಟನಾ ಸ್ಥಳದಲ್ಲಿ ತಮ್ಮ ಡೇರೆಗಳನ್ನು ಎಳೆಯಲು ಪ್ರಯತ್ನಿಸಿದರೆ, ರೈತರು ಅವುಗಳನ್ನು ಪೊಲೀಸ್ ಠಾಣೆಗಳು ಮತ್ತು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸ್ಥಾಪಿಸುತ್ತೇವೆ ಎಂದಿದ್ದಾರೆ.

‘ಆಡಳಿತವು ಇಲ್ಲಿನ ಟೆಂಟ್‍ಗಳನ್ನು ಉರುಳಿಸಲು ಪ್ರಯತ್ನಿಸುತ್ತಿದೆ ಎಂದು ನಮಗೆ ತಿಳಿದುಬಂದಿದೆ. ಅವರು ಆ ರೀತಿ ಮಾಡಿದರೆ, ರೈತರು ತಮ್ಮ ಟೆಂಟ್‍ಗಳನ್ನು ಪೊಲೀಸ್ ಠಾಣೆಗಳು, ಡಿಸಿ ಕಚೇರಿಗಳಲ್ಲಿ ಸ್ಥಾಪಿಸುತ್ತಾರೆ ಎಂದು ಎಚ್ಚರಿಸಿದರು. ಇದನ್ನೂ ಓದಿ: ದೆಹಲಿಗೆ ಸಮೀಪವಿರುವ 14 ಜಿಲ್ಲೆಗಳಲ್ಲಿ ಪಟಾಕಿ ನಿಷೇಧಿಸಿದ ಹರಿಯಾಣ

ದಿಲ್ಲಿ ಪೊಲೀಸರು ಗಾಜಿಪುರ, ಟಿಕ್ರಿ ಗಡಿಯಿಂದ ಸಿಮೆಂಟ್ ಬ್ಲಾಕ್‍ಗಳು ಮತ್ತು ಬ್ಯಾರಿಕೇಡ್‍ಗಳನ್ನು ತೆಗೆದ ಎರಡು ದಿನಗಳ ನಂತರ ರಾಕೇಶ್ ಅವರು ಈ ಕುರಿತು ಪ್ರತಿಕ್ರಿಯಿಸಿದರು. ರೈತರ ಆಂದೋಲನ ಪ್ರಾರಂಭವಾದಾಗಿನಿಂದ 11 ತಿಂಗಳ ಕಾಲ ಈ ರಸ್ತೆಯನ್ನು ಮುಚ್ಚಲಾಗಿತ್ತು. ಈ ಸಂಬಂಧ ಸಾರ್ವಜನಿಕರು ನಮ್ಮ ಪ್ರಯಾಣಕ್ಕೆ ತೊಂದರೆಯಾಗುತ್ತಿದೆ ಎಂದು ದೂರಿದ್ದರು.

ರೈತರಿಗೆ ಆಂದೋಲನ ನಡೆಸುವ ಹಕ್ಕಿದ್ದರೂ ಹೆಚ್ಚು ದಿನಗಳ ಕಾಲ ರಸ್ತೆಯನ್ನು ತಡೆ ಮಾಡಿ ಪ್ರತಿಭಟನೆ ನಡೆಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಕಳೆದ ವಾರ ತಿಳಿಸಿತ್ತು.

26 ನವೆಂಬರ್ 2020ರಿಂದ ಕೇಂದ್ರದ ಮೂರು ಕೃಷಿ ಕಾನೂನುಗಳನ್ನು ಪ್ರತಿಭಟಿಸಿ ಸಾವಿರಾರು ರೈತರು ದೆಹಲಿಯ ಮೂರು ಗಡಿ ಭಾಗಗಳಾದ ಟಿಕ್ರಿ, ಸಿಂಘು ಮತ್ತು ಗಾಜಿಪುರದಲ್ಲಿ ಕ್ಯಾಂಪ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಮೋದಿ ಪ್ರಧಾನಿ ಆಗಲು ಕಾಂಗ್ರೆಸ್ ಕಾರಣ: ಸಿದ್ದರಾಮಯ್ಯ

ಕಳೆದ ವರ್ಷ ಜಾರಿಗೆ ತಂದ ಮೂರು ಕಾನೂನುಗಳು ತಮ್ಮ ಹಿತಾಸಕ್ತಿಗೆ ವಿರುದ್ಧವಾಗಿವೆ ಎಂದು ರೈತರು ಪ್ರತಿಪಾದಿಸುತ್ತಿದ್ದು, ಕೇಂದ್ರ ಮಾತ್ರ ಈ ಕಾನೂನುಗಳು ರೈತ ಪರ ಎಂದು ವಾದಿಸುತ್ತಿದೆ. ಕೇಂದ್ರ ಮತ್ತು ರೈತರ ನಡುವೆ ಹಲವು ಸುತ್ತಿನ ಮಾತುಕತೆ ವಿಫಲವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *